ತುಳಸಿಯ ಸೇವಿಸಿ

Category: ಶ್ರೀದೇವಿ

Author: ವಿಜಯದಾಸ

ತುಳಸಿಯ ಸೇವಿಸಿ
ಶ್ರೀ ತುಳಸಿಯಳ ಸೇವೆ ಪ್ರೀತಿಯಿಂದಲಿ ಮಾಡೆ
ಗಾತರದ ಮಲವಳಿದು ಮಾತೆ ಯೆಂಬನಿತರೊಳು
ಪಾತಕ ಪರಿಹರಿಸಿ ಪುನೀತರನು
ಮಾಡುವಳು ಯಾತಕನುಮಾನವಯ್ಯ

ಸುಧೆಗಡಲ ಮಥಿಸುವ ಸಮಯದಲಿ ವೈದ್ಯನಾಗಿ |
ಪದುವನಾಭನು ತಾನು ಉದುಭವಿಸಿ ಬರಲಂದು |
ಉದುರಿದುವು ಕಣ್ಣಿಂದ
ಉದಕವುತ್ಸಹದಿಂದಲದೆ ತುಳಸಿ ನಾಮನಾಗೆ ||
ತ್ರಿದಶರೊಂದಿಸುತ ಮೋದದಿಂ ಕೊಂಡಾಡಿದರು |
ಒದಗಿ ಸುಜನರು ತಮ್ಮ ಸದನದಲಿ ನಿತ್ಯ
ತ್ಪದವಿಗೆ ಸಿದ್ಧವೆಂದು ಮುದದಿಂದ
ತಿಳಿದು ವೃಂದಾವನ ರಚಿಸಿದರೈಯ||1||

ಮೂಲದಲಿ ಸರ್ವ ತೀರ್ಥಗಳುಂಟು ತನ್ಮದ್ಯೆ |
ಕಾಲ ಮೀರದೆ ಸರ್ವ ನದನದಿಗಳಮರಗಣ |
ಮೇಲೆ ದಳ ಒಂದರಲಿ ಒಂದೊಂದು
ಮೂರತಿಯು ವಾಲಯವಾಗಿಪ್ಪುದು ||
ಮೂರ್ಲೋಕಗಳ ಧರ್ಮ ವ್ರತಕೆ ಮಿಗಿಲೆನಿಸುವುದು |
ನೀಲಮೇಘಶ್ಯಾಮಗರ್ಪಿಸಿದ ತುಳಸಿ ನಿ |
ರ್ಮಾಲ್ಯವನು ಸತತ ಕರ್ಣದಲಿ
ಧರಿಸಿದ ಮನುಜ ಕಾಲನಾಳಿಗೆ ಶೂಲನೊ||2||

ಉದಯದೊಳಗೆದ್ದು ನೀರೆರೆದು ಮಜ್ಜನಗೈದು |
ತುದಿ ಬೆರಳಿನಿಂದ ಮೃತ್ತಿಕೆಯ ಫಣಿಯೊಳಗಿಟ್ಟು |
ಮುದದಿಂದಲೊಂದು ಪ್ರದಕ್ಷಿಣಿ ನಮಸ್ಕಾರ
ತದನಂತರದಲಿ ಭಜನೆ ||
ವದನದೊಳು ಗೈಯೆ ಧರೆಯೊಳಗಿದ್ದ ಸರ್ವವದ |
ನದಿಗಳಿಗೆ ನೂರ್ಮಡಿ ಯಾತ್ರೆ ಮಾಡಿದ ಫಲ |
ಒದಗುವುದು ಹಿಂದಣಾನಂತ
ಜನ್ಮಗಳಘವ ತುದಿ ಮೊದಲು ದಹಿಪುದಯ್ಯ||3||

ಆವವನ ಮನೆಯಲ್ಲಿ ತುಳಸಿ ಸಾಲಿಗ್ರಾಮ |
ಆವವನ ಮನೆಯಲ್ಲಿ ಹರಿದಾಸರಾ ಕೂಟ |
ಆವವನ ಭುಜದಲ್ಲಿ ತಪ್ತಮುದ್ರಾಂಕಿತವು
ಪಾವಮಾನಿಯ ಮತದೊಳು ||
ಆವವನು ಕಾಂತ್ರಯವ ಕಳೆವ ನಾವಲ್ಲಿ |
ಶ್ರೀ ವಾಸುದೇವ ಮುನಿ ದೇವಾದಿಗಣ ಸಹಿತ |
ಕಾವುತ್ತಲಿಪ್ಪ ಒಲಿಗೊಲಿದಂತೆ ತೊಲಗದಲೆ
ಭಾವಿಸಿರಿ ಭಾವಙ್ಞರು ||4||

ಕಂಡರೆ ದುರಿತಕ್ಕೆ ಕೆಂಡವನು ಬೀರುವುದು |
ಕೊಂಡಾಡಿದರೆ ಪುಣ್ಯವ ಪರಿಮಿತವುಂಟು ಮೈ-|
ದಿಂಡುಗೆಡಹಿದರೆ ಪುನರಪಿ
ಜನನವಿಲ್ಲ ಸಲೆ ದಂಡ ವಿಟ್ಟವ ಮುಕ್ತನೊ ||
ಚಂಡಾಲ ಕೇರಿಯೊಳು ಇರಲು ಹೀನಯವಲ್ಲ |
ಪಾಂಡುರಂಗ ಕ್ಷೇತ್ರ ಸರಿಮಿಗಿಲು ಎನಿಸುವುದು |
ಕಂಡ ತಂಡದ ಕುಲಕೆ ಅವರವರ
ಯೋಗ್ಯ ಫಲ ಕಂಡವರಿಗುಂಟೆ ಅಯ್ಯ||5||

ಚಿತ್ತ ಶುದ್ದನು ಆಗಿ ಮುಂಝಾನೆಯೊಳು ತುಳಸಿ |
ಸ್ತೋತ್ರವನೆ ಮಾಡುತ್ತ ದಿವ್ಯಾವಾಗಿಹ ತ್ರಿದೊಳ |
ಪ್ರತ್ಯೇಕ ಪಾತ್ರೆಯಲಿ ತೆಗೆದು
ಶೋಧಿಸಿ ತುಂಬಿ ವಿತ್ತಾದಿಯಲಿ ತಾರದೆ ||
ಮತ್ತೆ ವಸ್ತ್ರದಿ ಹಸ್ತ ಶಿಲೆಯರ್ಕ ಏರಂಡ |
ಪತ್ರದಲಿ ತಾರದಲೆ ಭೂಮಿಯೊಳಗಿಡದೆ ಪೂ - |
ರ್ವೋತ್ತರಭಿಮುಖನಾಗಿ ಭಕ್ತಿಯಿಂ
ತರಬೇಕು ಹೊತ್ತು ಮೀರಿಸಲಾಗದೊ||6||

ಕವಿ ಮಂಗಳವಾರ ವೈಥೃತಿ ವ್ಯತೀಪಾತ
ರವಿ ಶಶಿಯ ಸಂಗಮ ಪರ್ವಣಿ ಪುಣ್ಯಕಾಲ
ದಿವಸ ದ್ವಾದಶಿ ಶ್ರೇಷ್ಠ ಉಪರಾಗ ಪಿತೃಶ್ರಾದ್ಧ
ಇವುಗಳಲಿ ತೆಗೆಯಾದಿರಿ
ನವವಸನ ಪೊದ್ದು ಊಟವ ಮಾಡಿ ತಾಂಬೂಲ-
ಸವಿಯುತ್ತ ಮುಟ್ಟದಿರಿ ಯುವತಿ ಶೂದ್ರರಿಂ ತರಿ
ಸುವುದುಚಿತವಲ್ಲೆಂದು ತಿಳಿದು
ಕೊಂಡಾಡುತಿರಿ ದಿವಸಗಳೊಳಯ್ಯ ||7||

ದಳವಿದ್ದರೇ ವಳಿತು ಇಲ್ಲದಿದ್ದರೆ ಕಾಷ್ಟ
ಎಲೆ ಮೃತ್ತಿಕೆಗಳಿಂದ ಪೂಜೆ ಮಾಡಲಿಬಹುದು
ತುಳಿಸಿ ನಿರ್ಮಾಲ್ಯವಾದರು ತ್ರಿವಾರದಲಿ
ತೊಳೆ ತೊಳೆದು ಏರಿಸಲಿಬಹುದು
ತುಳಸಿ ಒಣಗಿದ್ದರೂ ಲೇಶದೋಷಗಳಲ್ಲಿ
ತುಳಸಿ ವಿರಹಿತವಾದ ಪೂಜೆಯದು ಸಲ್ಲದು
ತುಳಸಿ ತುಳಸೀ ಎಂದು ಸ್ಮರಣಿಯಾದರು
ಮಾಡಿ ಜಲಜಾಕ್ಷನರ್ಚಿಸಿರೈಯ್ಯ ||8||

ತುಳಸಿ ಇಲ್ಲದ ಸದನ ಹೊಲೆಮಾದಿಗರ ಸದನ
ತುಳಸಿ ಇಲ್ಲದ ಬೀದಿ ನರಕಕೆಳಸುವ ಹಾದಿ
ತುಳಸಿ ಇಲ್ಲದ ತೀರ್ಥವೆಂದಗಿದ್ದರು
ವ್ಯರ್ಥ ತುಳಸಿ ಬಲು ಪ್ರಾಧಾನ್ಯವೊ
ತುಳಸಿ ಮಿಶ್ರಿತವಾದ ನೈವೇದ್ಯ ಗತಿಸಾದ್ಯ
ತುಳಸಿ ಧರಿಸಿದ ದೇಹ ಪರಮ ಸಾರ್ಥಕವಯ್ಯ
ತುಳಸಿದಳ ಹರಿಗೆ ಅರ್ಪಿಸಿದವನ ಪುಣ್ಯಕ್ಕೆ
ನೆಲೆಯ ನಾ ಕಾಣೆನಯ್ಯ||9||

ಶಿವನ ಸತಿ ಪ್ರಹ್ಲಾದ ನಾರದ ವಿಭೀಷಣನು
ಧ್ರುವ ಅಂಬರೀಷ ಶಶಿಬಿಂದು ರುಕ್ಮಾಂಗದನು
ಇವರೆ ಮೊದಲಾದವರು ಭಕ್ತಿಪೂರ್ವದಲೀ
ವಿವರವನು ತಿಳಿದರ್ಚಿಸಿ
ತವಕದಿಂ ತಂತಮ್ಮ ಘನ ಪದವನೈದಿದರು
ಭುವನದೊಳಗುಳ್ಳ ನಿರ್ಮಲ ಜನರು ಭಜಿಸಿದರು
ಜವಭಟರನೋಡಿಸೀ ಜಡದೇಹವನು
ನೀಗಿ ಭವದೊರರಾದರೈಯ ||10||

ಉದಯಕಾಲದೊಳೆದ್ದು ಆವನಾದರು ತನ್ನ
ಹೃದಯ ನಿರ್ಮಲನಾಗಿ ಭಕುತಿಪೂರ್ವಕದಿಂದ
ಸದಮಲಾ ತುಳಸಿಯನು
ಸ್ತೋತ್ರಮಾಡಿದ ಕ್ಷಣಕೆ ಮದ ಗರ್ವ ಪರಿಹಾರವೊ
ಇದೆ ತುಳಸಿ ಸೇವಿಸಲು ಪೂರ್ವದ ಕಾವೇರಿ
ನದಿಯ ತೀರದಲೊಬ್ಬ ಭೂಸುರ ಪದಕೆÉ ವ್ಯೋವ
ಪದಪದೆಗೆ ಸಿರಿ ವಿಜಯವಿಠ್ಠಲಗೆ
ಪ್ರಿಯಳಾದ ಮದನತೇಜಳ ಭಜಿಸಿರೈದು ||11||