ದೂರ ನೋಡುವರೆ ರಂಗಯ್ಯ ಎನ್ನ

Category: ಶ್ರೀಕೃಷ್ಣ

Author: ವಿಜಯದಾಸ

ದೂರ ನೋಡುವರೆ ರಂಗಯ್ಯ ಎನ್ನ
ದೂರ ನೋಡುವರೇನೋ ಸಂಸಾರ ಶರಧಿಯೊಳಗೆ ಮುಳುಗಿ
ದಾರಿಗಾಣದೆ ನೀನೆ ಗತಿ ಮು-ರಾರಿಯೆಂದು ಸಾರಿದ ಮೇಲೆ

ಆಸೆ ಬಿಡದೆಲೊ ಕಾಸುವೀಸಕೆ-ಕ್ಲೇಶ ಘನ್ನವೆಲೊ
ಈಶ ಯಾರಿಗೆ ಪೇಳಲೊಶವೆಲೊ-ಶ್ರೀಶ ಎನ್ನ ಮನಸಿನಲ್ಲಿ
ಲೇಶಮಾತ್ರ ಭಕುತಿಯಿಲ್ಲ, ಆಸೆ ಬದ್ಧನಾಗಿ
ಬಹಳ ಘಾಸಿಪಟ್ಟೆನೊ-ದಾಶರಥಿ ||1||

ಭಕುತಿಯಿಲ್ಲವೊ ಅದರ ಹೊರತು-ಮುಕುತಿಯಿಲ್ಲವೊ
ಯುಕುತಿಯಿಂದಲಿ ವಲಿವನಲ್ಲವೊ-
ಮುಕುತಿದಾಯಕ ನಿನ್ನ ಕಾಣದೆ
ಭಕುತಿಗೋಸುಗ ಪರರ ತುತಿಸಿ, ಕಕುಲಾತಿಯಿಂದಲೆನ್ನ-
ಶಕುತಿಯೆಲ್ಲ ನಷ್ಟವಾಯಿತು ||2||

ಪೊರೆಯದಿರುವರೆ ಕರುಣಾಳುಯೆಂಬ-ಬಿರುದ ಬಿಡುವರೆ
ಹರಿಯೆ ಯೆನ್ನ ಮರೆತು ಬಿಡುವರೆ-
ಕರಿಯು ಹರಿಯೇ ಎಂದು ಕರೆಯೆ
ಸಿರಿಗೆ ಪೇಳದೆ ಭರದಿ ಬಂದು, ಪೊರೆದೆಯೆಂಬ ವಾರ್ತೆಕೇಳಿ
-ಮರೆಯ ಹೊಕ್ಕೆನೊ ವಿಜಯವಿಠ್ಠಲ ||3||