ನರಕ ಎತ್ತಣದೋ ನರಕ
Category: ಶ್ರೀಕೃಷ್ಣ
Author: ವಿಜಯದಾಸ
ನರಕ ಎತ್ತಣದೋ ನರಕ ಎತ್ತಣದೋ
ನರ ಕಂಠೀರವನೆಂದು ಸ್ಮರಿಸುವ ಜನರಿಗೆ
ಸ್ನಾನ ಮಾಡುವುದೇಕೆ ಧ್ಯಾನಗೈಯುವುದೇಕೆ
ದಾನ ಧರ್ಮಂಗಳು ಮಾಡಲೇಕೆ
ಶ್ರೀ ನಾರಾಯಣನೆಂದು ಆವಾಗಲೂ ಜಿಹ್ವೆ
ತ್ರಾಣದಲಿ ಬಿಡದೆ ಎಣಿಸುವ ಜನರಿಗೆ||1||
ತೀರ್ಥ ಮೀಯುವದೇಕೆ ಯಾತ್ರೆ ಚರಿಪದೇಕೆ
ಸ್ತೋತ್ರ ಮಂತ್ರಾದಿಗಳು ಪಠಿಸಲೇಕೆ
ಚಿತ್ರಮಹಿಮ ನೀಲಗಾತ್ರನ್ನ ಚರಿತೆ ಕಾ
ಲತ್ರಯ ಬಿಡದೆ ಉಚ್ಚರಿಸುವ ಜನರಿಗೆ ||2||
ದೀಪ ಧೂಪಗಳೇಕೆ ನಾನಾ ಪರಿಯಲ್ಲಿ
ಸೋಪಸ್ಕರದ ಎಡೆ ಇಡಲೇತಕೆ
ಅಪಾರ ಮಹಿಮ ಅನಾಥರೊಡೆಯ ರಂಗ
ಶ್ರೀಪತಿ ಎಂದೀಗ ಸ್ಮರಿಸುವ ಜನರಿಗೆ ||3||
ಭೂತದಯಗಳೇಕೆ ನೀತಿ ಎಂಬುದು ಏಕೆ
ಜಾತವೇದಸನಲ್ಲಿ ಕಳವಳವೇಕೆ
ಪೀತಾಂಬರಧರ ಪಿನಾಕಿ ಸಖನೆಂದು
ಮಾತು ಮಾತಿಗೆ ನೆನೆದು ಸುಖಿಸುವ ಜನರಿಗೆ ||4||
ಏನೇನು ಕರ್ಮದಾಚರಣೆ ಮಾಡುವದೇಕೆ
ಭಾನು ಉದಯವಿಡಿದು ತೊಳಲಲೇಕೆ
ದೀನನಾಗಿ ದಾತಾ ವಿಜಯವಿಠ್ಠಲ ಹರಿಯ
ಮಾನಸದಲಿ ಧ್ಯಾನ ಮಾಡುವ ಜನರಿಗೆ ||5||