ನಾರಿ ಗೌರಿ ಕೌಮಾರಿ

Category: ಶ್ರೀದೇವಿ

Author: ವಿಜಯದಾಸ

ನಾರಿ ಗೌರಿ ಕೌಮಾರಿ ವಾರಿಜಾಕ್ಷನ ಚರಣ
ವಾರಿಯನು ಧರಿಸುವ ನಾರಿ ಗೌರಿ ಕೌಮಾರಿಪ

ಬಾಣ ಕುಂಭನೆಂಬೊ ದಾನವರೀರ್ವರು
ಕ್ಷೋಣಿಯೊಳು ಬಂದಲ್ಲಿ ತಪವ ಮಾಡಿ
ಮಾಣದಲೆ ಕಮಲ ಗರ್ಭನವೊಲಿಸಿ ವೇಗದಲಿ
ಏನು ವರ ಬೇಡೆನಲು ನಗುತಲವನು ಸುರಿದನು ||1||

ಜಗಕ್ಕೊಡಿಯನಾವಾತ ಆತನ ತನು
ಸಂಬಂಧಿಗಳೆಮ್ಮ ಕೊಲ್ಲಲ್ಲಿ ಉಳಿದವರ
ಬಗಿಯದಂತೆ ವರವನು ಪಾಲಿಸೆನಲು
ನಗುತ ಲೋಕೇಶ ದುರುಳರಿಗೆ ಸಲೆ ಇತ್ತಾ ||2||

ಚತುರ್ದಶ ಲೋಕವನು ಗೆದ್ದು ತ್ರಿದಶರಾ
ಮಿತಿಯಿಲ್ಲದೆ ಮಾನಭಂಗ ಮಾಡಿ
ಪತಿತರು ಈ ತೆರದಲಿರುತಿರಲು ವಿಬುಧರು
ಚತುರ ಮುಖಗೆ ಮೊರೆಯಿಡಲು ಹರಿಗೆ ಬಿನ್ನೈಸಿ||3||

ತಿಳಿದು ಕುಂಡಲನೊಲಿದು ದ್ವಾಪಾರಾಂತ್ಯದಲಿ
ಖಳ ಕಂಸನೆಂಬುವನು ಪುಟ್ಟಿ ತನ್ನ
ಬಲದಲಿ ತನ್ನ ಅನುಜೆಯರ ಶರೆಯುಯಿಟ್ಟು
ಬಳಲಿಸುವವಳಿಗೊಲಿದು ಅವತಾರ ಮಾಳ್ಪ ಯುದಕುಲದಲಿ||4||

ಎನ್ನ ಕೂಡಲೀ ದುರ್ಗಿ ಜನಿಸಿ ಬರಲು ಅವ
ಳನ್ನ ಕೊಲ್ಲುವೆನೆಂದು ಕಂಸ ಮುನಿಯೆ
ತನ್ನ ಶಕ್ತಿಯಿಂದಾ ಗಗನಕ್ಕೆ ಪಾರಿ ಬರಲು
ಘನ್ನ ಘಾತುಕರನ್ನ ಮಡುಹಿ ಬಿಡುವಳೆನಲು ||5||

ಇಂತು ಪೇಳಲಿ ಅಜನು ಸಂತೋಷದಿರಲಿತ್ತ
ದಂತಿ ಗಮನಳು ಉದುಭವಿಸಿ ಬಂದು
ಪಿಂತೆ ಮಾಡಿದ ತಪಸು ಸಿದ್ಧಿಸಿತು ಎನಗೆನುತ
ಅಂತಕರಾಗಿದ್ದ ಖೂಳರ ಸದೆ ಬಡಿದು ||6||

ಹರಿಕೃಪೆಯಿಂದ ದಕ್ಷಿಣ ಶರಧಿಯಲಿ ನಿಲ್ಲಲು
ಪರಮ ಮುನಿ ಅಗಸ್ತ್ಯ ಪೂಜಿಸಿದನು
ಶರರಾಜ ಬಂದು ಮದುವೆನೈದಲು
ಪರಮೇಷ್ಠಿ ಹರನ ಸಹಿತಲಿ ನಡೆತಂದಾ ||7||

ಬರಲಾಕ್ಷಣದಲ್ಲಿ ಕಲಿಯುಗ ಪ್ರಾಪುತವಾಗೆ
ಮರಳೆನಿಂದರು ವರ ಸುಧೇಂದ್ರವೆಂಬೊ
ಪುರದಲ್ಲಿ ಪೂಜೆಗೊಳ್ಳುತಲ್ಲಿರಲು ಇತ್ತ ಸುಂ
ದರ ಕನ್ಯಾಮಣಿಯಾಗಿ ದಶದಿಶಿಗೆ ಪೊಳೆಯುತಿರೆ||8||

ಅಂದಾರಭ್ಯನಾಗಿ ಕನ್ಯಾಕುಮಾರಿ ಎನಿಸಿ
ಬಂದು ನವತೀರ್ಥದಲಿ ಯಾತ್ರೆ ಜನರು
ಮಿಂದಾಗಲೆ ಮನದಂತೆ ಭಕುತಿಯನಿತ್ತು
ಪೊಂದಿಸುವೆ ವಿಜಯವಿಠ್ಠಲನ ಪಾದದಲ್ಲಿ||9||