ನಿಚ್ಚಳಾಗಲಿ ಬೇಕು ತಿಳಿದು
Category: ಶ್ರೀಕೃಷ್ಣ
Author: ವಿಜಯದಾಸ
ನಿಚ್ಚಳಾಗಲಿ ಬೇಕು ತಿಳಿದು ನಿಚ್ಚಳಾಗಲಿ ಬೇಕು
ನಿಚ್ಚಮಾಡುವ ದೋಷರಾಶಿಗಳಳಿದು ನಿಚ್ಚಳಾಗಲಿ ಬೇಕು
ಪಾಪವೆಂಬುದು ಹೊರಗಿಹುದೆ ತನ್ನ
ಕೋಪವಲ್ಲದೆ ಬೇರೆ ಹೊಸದಾಗಿ ಬಹುದೆ
ಅಪವರ್ಗಕೆ ಮಾರ್ಗವಹುದೆ ಬಲು
ತಾಪಸಿಗಾದರು ಅದು ಸಾಧನವಹುದೆ ||1||
ಪುಣ್ಯವೆಂಬದು ಬೇರೆಯಿಲ್ಲಾ ನಾನಾ
ರಣ್ಯ ಚರಿಸಿದರು ದೊರಕುವದಲ್ಲಾ
ಮನ್ಯು ಬಿಡದೆ ಮತ್ತೊಂದಲ್ಲಾ ನಿರುತ
ಅನ್ಯರಾಶಿ ಬದಲು ಗತಿಗವಸಲ್ಲಾ ||2||
ವೈಕುಂಠವೆಂಬೋದು ಅಲ್ಲೆ ಬರಿದೆ
ಲೌಕೀಕ ತೊರದರೆ ಇಪ್ಪದು ಇಲ್ಲೆ
ಈ ಕಲಿಯೊಳಗೆ ಈ ಸೊಲ್ಲೆವೊಲಿಸ
ಬೇಕೆನೆ ಮಾರಿ ಓಡುವುದು ನಾ ಬಲ್ಲೆ ||3||
ಹರಿಸ್ಮರಣೆಗೆ ಪೋಪ ದೋಷ ಬಲು
ಪರಿ ಪರಿ ಧರ್ಮವ ಮಾಡಲು ಲೇಶ
ಸರಿಯಾವು ತರುವಾಯ ಮೋಸದಿಂದ
ತಿರುಗಿ ತಿರುಗಿ ಪುಟ್ಟಿ ಬಡವನು ಕ್ಲೇಶಾ||4||
ಒಬ್ಬರ ಸರಿಗಟ್ಟದಿರೊ ನಿನ
ಗ್ಹಬ್ಬಿದಷ್ಟೆ ಕರ್ಮ ಸುಖವೆಂದು ಸಾರೊ
ಉಬ್ಬಲ ದಾಡಿಪರಾರೊ ಎಲೆ
ಲ್ಹಬ್ಬಿದ ವಿಜಯವಿಠ್ಠಲನೆಂದು ಸಾರೋ ||5||