ನೋಡಿದೆನೊ ಸಿರಿ ಪಾಂಡುರಂಗನಾ

Category: ಶ್ರೀಕೃಷ್ಣ

Author: ವಿಜಯದಾಸ

ನೋಡಿದೆನೊ ಸಿರಿ ಪಾಂಡುರಂಗನಾ
ಪಾಡಿದೆನೊ ಜಗದಂತರಂಗನ
ಕೂಡಿದೆನೊ ಮನ ಖಗ ತುರಂಗನ
ಬೇಡಿದೆನೊ ಗುಣಾಂತರಂಗನಾ

ಕಪಿಲ ವಿಭುಹರಿ ಸಾರ್ವಭೌಮ ಸು
ತಪನಂದನ ಕೃಷ್ಣ ಕೃಷ್ಣ ಗೀರ್ವಾಣ
ತಪಯಜ್ಞ ಜಿತದತ್ತ ಧನ್ವಂತ್ರಿ
ತಪನಿವಾಸ ವಿನುತ ವೃಷಭ ಹಯ
ಲಪನ ವೈಕುಂಠ ಹಂಸ ತಪನಾ
ಕುಪಿತ ಜಿತ ಮುನಿ ನರನಾರಯಣ
ಅಪರಿಮಿತ ರೂಪ ಧರಿಸಿದಾನಂದ
ವಿಪುಳದೊಳಗೀ ಗುಪಿತ ಮಹಿಮನ ||1||

ಮುನಿವನ ಜಿತ ಚಿತ್ತ ಶುದ್ಧದಿ
ಜನನಿ ಜನಕನ ಚರಣ ಸೇವೆಯ
ಅನುದಿನದಿ ಘನವಾಗಿ ಮಾಡುತ
ಗುಣಗಳಿಂದಲಿಯಿರಲು ಇತ್ತಲು
ಮುನಿ ನಾರದನು ಗಾಯನವ ಗೈಯುತ
ಇನಿತು ಸೋಜಿಗ ನೋಡಿ ತನ್ನಯ
ಜನಕಗರುಹಲು ನಗುತಲಾ
ಮನದಿ ಕೈಕೊಂಡ ಮೂಲ ಮೂರ್ತಿಯ ||2||

ನುಡಿದ ಮಾತಿಗೆ ತೂಗಿ ಮಸ್ತಕ
ಪೊಡವಿಯೊಳು ನೀನವತರಿಸಿ ಆ
ದೃಢü ಬಕುತನಿಗೆ ದರುಶನವೆ ಇ
ತ್ತಡಿಗಡಿಗೆ ಸುಖಬಡಿಸಿ ಅಲ್ಲಲ್ಲಿ
ಬಿಡದೆ ನಿಲ್ಲುವೆ ನಿಮ್ಮ ಸಹಿತಲಿ
ಕೊಡುವೆ ವರಗಳ ವಿನುತ ಕಳುಹಿದ
ಒಡನೆ ಸಲ್ಲಿಪೆನೆಂದ ಯಮುನಾ
ತಡಿಯ ಜನಿಸಿದ ಜಗನ್ಮೋಹನಾ ||3||

ಉದಭವಿಸಿ ಕಿಶೋರತನದಲಿ
ನಿಧಿಯ ನೋಡುವೆನೆನುತ ಗೋವುಗಳ
ಮುದದಿ ಮೇಯಿಸಿಕೊಳುತ ಕಾವುತ
ಒದಗಿ ಗೋವಳರೊಡನೆ ಬಂದನು
ಮೃಡ ವಿಧಿ ಸಂಭವಾದ್ಯ ಭಕ್ತನ
ಎದುರಲಿ ನೋಡಿದನು ಹೋ ಹೋ
ಇದೇ ಸಮಯವೆಂದು ನಿಂದಾ ಹಿಂಭಾ
ಗದಲಿ ಭಕ್ತಿಗೆ ಮೆಚ್ಚಿ ಬಲು ವೇಗಾ||4||

ತಿರುಗಿ ನೋಡದಲಿರಲು ಭಕುತನ
ಮರಳೆ ಮಾತಾಡಿಸಲು ಇಟ್ಟಿಗೆ
ಭರದಿ ಹಿಂದಕೆ ಒಗಿಯೆ ವಿಠ್ಠಲ
ಹರುಷದಲಿ ವಶವಾಗಿ ನಿಲ್ಲಲು
ಕರುಣರಸ ಸಂಪೂರ್ಣ ದೇವನ
ನಿರೀಕ್ಷಿಸಿದ ಜಯವೆಂದು ಪೊಗಳಿ
ವರವ ಬೇಡಿದ ಪುಂಡರೀಕನು ಗಿರಿಯನೆತ್ತಿದ ಗೋಕುಲೇಶನ||5||

ಭಕುತ ಮನೋರಥ ಎನ್ನ ಪೆಸರಿಲಿ
ಪ್ರಕಟವಾಗಲಿ ಕ್ಷೇತ್ರ ಸರ್ವದ
ಸಕಲ ಲೋಕದೊಳಗೆ ನೀನೆ
ಮುಕುತಿ ಕೊಡುತಲಿ ಇಲ್ಲೆ ನಿಲುವದು
ಅಖಿಳ ಬಗೆಯಿಂದ ಭಜನೆಗೊಳುತ ನೀ
ರುಕ್ಮಿಣಿಪತಿ ಒಲಿದು ಪಾಲಿಸಿ
ವ್ಯಕುತವಾದನು ಪೂರ್ವಮುಖನಾಗಿ
ಸುಖವಯೋನಿಧಿ ಮೆರೆಯುತಲಿ ಇಂದೂ ||6||

ಕ್ರೋಶ ಯೋಜನ ಯೋಜನತ್ರಯ
ದೇಶ ಪರಿಮಿತ ಕ್ಷೇತ್ರವಿಪ್ಪುದು
ವಾಸ ಒಂದಿನಮಲ ಮನುಜರನ
ಲೇಸು ಪುಣ್ಯಗಳೆಣಿಸಿ ಸರಸಿ
ಜಾಸನನು ಬೆರಗಾಗಿ ನಿಲ್ಲುವ
ದೋಷ ವರ್ಜಿತ ಹರಿಯ ನೆನೆಸುತ
ಆ ಸೇತು ಮಧ್ಯದಲಿ
ವಿಶೇಷವಾಗಿದ್ದ ಈ ಕ್ಷೇತ್ರ ಮೂರ್ತಿಯಾ ||7||

ನಂದಾ ಮಂದಾಕಿನಿ ಮಧ್ಯಾಹ್ನಕೆ
ನಿಂದಿರದೆ ಬರುತಿಪ್ಪ ಪ್ರತಿದಿನ
ಚಂದ್ರಭಾಗಾ ಪ್ರಸೂನುವತಿ ಅರ
ವಿಂದ ಕುಂಡಲ ಚತುರ ದಿಕ್ಕಿನಲಿ
ಪೊಂದಿಪ್ಪವು ಓರ್ವನಾದರು
ಮಿಂದು ತೀರ್ಥದಲಿ ಆ
ನಂದ ಸತ್ಕರ್ಮ ಚರಿಸಲಾಕ್ಷಣ
ಇಂದಿರೇಶನು ಒಲಿವ ನಿಶ್ಚಯಾ ||8||

ದ್ವಾರಸ್ಥ ಜಯ ವಿಜಯ ನಾರದ
ಭಾರತಿ ಪಂಚ ಕೋಟಿ ದೇವರು
ಶ್ರೀರಮಣಿ ಮಿಕ್ಕಾದ ಜನರೆಲ್ಲ
ಈರೆರಡು ದಿಕ್ಕಿನಲಿಯಿಹರು
ಸುತ್ತಲಿ ಪಾಡುತ್ತ ಕುಣಿಯುತ್ತ
ಹಾರುತಲಿ ಹಾರೈಸಿ ನಾನಾ ವಿ
ಹಾರದಲಿ ಪುರಿ ಪ್ರದಕ್ಷಣಿ ವಿ
ಸ್ತಾರ ಮಾಡುತಲಿಪ್ಪ ಸೊಬಗನಾ ||9||

ಎರಡು ವಿಂಶತಿ ಗುದ್ದು ಮೊಳವೆ
ಕರಿಸಿ ಕೊಂಬೊದೊಂದೆ ನಿಷ್ಕವು
ಇರದೆ ಇವು ನಾನೂರುಯಾದಡೆ
ವರಧನಸ್ಸು ಪ್ರಮಾಣವೆನಿಸೊದು
ಗುರುತು ತಿಳಿವದು ಇಂಥ ಧನಸ್ಸು
ಅರವತ್ತು ಪರಿಮಿತಾ ಈ ಭೀಮಾ
ಸರಿತೆಗಳು ಪರಿಪರಿ ತೀರ್ಥಗಳಕ್ಕು
ನಿರೀಕ್ಷಿಸಿ ವಂದನೆಯ ಮಾಡುತಾ ||10||

e್ಞÁತಿ ಗೋತುರ ಹತ್ತದೊಂದೆ
ಮಾತು ಮನ್ನಿಸಿ ಕೇಳಿ ಸುಜನರು
ವಾತದೇವನ ಕರುಣತನವನು
ನೀತಿಯಲಿ ಪಡಕೊಂಡು ಸತ್ವದಿ
e್ಞÁತ ಅನುಷ್ಠಾನದಲಿ ನಡೆದು ಪು
ನೀತ ಮಾನವ ಬಂದರಾದಡೆ
ಆತುಮದೊಳು ಹರಿ ಪೊಳೆದು ಬಲು
ಕೌತುಕವ ತೋರಿಸುವ ರಂಗನಾ ||11||

ಶಯ್ಯಾ ಹರಿ ದಿನದಲಿ ಮಾನವ
ಕಾಯ ನಿರ್ಮಳನಾಗಿ ಫಂಡರಿ
ರಾಯ ರಾಜೀವನೇತ್ರ ತ್ರಿಭುವನ
ನಾಯಕನ ಕ್ಷೇತ್ರಕ್ಕೆ ಮನಮುಟ್ಟಿ
ಗಾಯನವ ಮಾಡುತಲಿ ಬಂದ ನಿ
ರ್ಮಾಯದಲಿ ಕೊಂಡಾಡಿ ದಮ್ಮಯ್ಯ
ಕೈಯ ಪಿಡಿಯನೆ ಕರುಣದಿಂದ ಸಾ
ಹಾಯವಾಗುವ ವಾಣಿ ಜನಕನಾ ||12||

ಮಕುಟ ಕುಂಚಿ ಕುಲಾಯ ಕುಂತಳ
ಮಕರ ಕುಂಡಲ ಮಣಿ ಕಿರಣ ಸ
ನ್ನುಖ ಮುಕರ ಸೋಲಿಸುವ ಕಾಂತಿ ಚಂ
ಪಕ ನಾಸಿಕ ಮುಖ ಮೃಗನಾಭಿ ಸಣ್ಣ ತಿ
ಲಕ ಕೌಸ್ತುಭಗಳ ತುಲಸಿ ಮಾಲಿಕಾ
ನಖ ಪದಕ ಕಟೆಕಂಬು ಕರದ್ವಯ
ಅಕಳಂಕ ನಖ ಪಾದ ಭೂಷಣ ಮಾ
ಣಿಕ ಇಟ್ಟಿಗೆ ಮೇಲೆ ನಿಂದ ವಿಠ್ಠಲನ ||13||

ಸಂಗಮ ಸುರ ಮಥನ ಕಾಳಿಂಗ
ಭಂಗ ಭಾವುಕ ಭಕ್ತಜನಲೋಲ
ಶೃಂಗಾರಾಂಬುಧಿ ರೋಮ ಕೋಟಿ ಕೋಟಿ
ಲಿಂಗಧರ ಗೌರೀಶ ಸುರಪ
ನಂಗ ಮಿಗಿಲಾದ ಮುನಿವಂದಿತಾ ಮಾ
ತುಂಗ ವರದ ಗೋವಿಂದ ವರದೇಶ
ಸಂಗ ನಿಃಸಂಗ ಸುಪ್ರಸನ್ನ ನೀ
ಲಾಂಗ ಗತಿ ಎಂದು ತುತಿಗೆ ಅನುದಿನ ||14||

ಪೇಳಲೊಶವೇ ಲೋಹದಂಡಿ ಹಿ
ಯ್ಯಾಳಿ ಕ್ಷೇತ್ರದ ಮಹಿಮೆ ಸಾವಿರ
ನಾಲಿಗಿಂದಲಿ ಪೊಗಳಿ ಸುಮ್ಮನೆ
ವ್ಯಾಳಪತಿ ಬೆರೆಗಾಗಿ ನಿಲ್ಲುವ
ಸಲಿಗೆ ನಾ ಮಾಳ್ಪರು ವಿಲಿಂಗರು
ಮೇಲು ಮೇಲೀ ಭುವನದೊಳಗಿದ್ದು
ಹೇಳಿ ಕೇಳಿದ ಜನರಿಗಾನಂದಾ
ಬಾಲಾ ವಿಜಯವಿಠ್ಠಲರೇಯನಾ ||15||