ನೀನಲ್ಲದಿನ್ನಾರು

Category: ಶ್ರೀರಾಮಕೃಷ್ಣ

Author: ಸ್ವಾಮಿ ತದ್ರೂಪಾನಂದ

ನೀನಲ್ಲದಿನ್ನಾರು ಚಿರಬಂಧು ಎನಗೆ
ನಿನ್ನನ್ನೆ ಕರೆಯುತಿಹೆ ಹೃದಯದೇಗುಲಕೆ ||

ಕಾತರದ ಅಳಲಿನಲಿ ಪರಿಪೂತ ಹೃದಯವದು
ಕ್ಷೇತ್ರವೆನೆ ಆಗಿಹುದು ದಕ್ಷಿಣೇಶ್ವರವು |
ಜನ್ಮಜನ್ಮಾಂತರದ ಸಂಸ್ಕಾರತರುರಾಜಿ
ಪಂಚವಟಿಯಂದದಲಿ ಮಿಗೆ ಒಪ್ಪುತಿಹುದು ||

ಹಗಲಿರುಳು ಎನ್ನೆದೆಯ ಹಂಬಲಿನ ಹೊನಲದುವೆ
ಜಗವ ಪಾವನಗೈವ ಗಂಗೆಯಾಗಿಹುದು |
ಜೀವಿಗಳ ಎದೆಯಲ್ಲಿ ಅನವರತ ನೆಲೆಸಿರುವ
ದೇವತೆಯೆ ಇಲ್ಲೀಗ ಮಾತೆ ಭವತಾರಿಣೀ ||

ಹೇ ದಿವ್ಯ ಅರ್ಚಕನೆ ಪಂಚವಟಿಪ್ರಿಯನೆ
ಭವತಾರಿಣೀತನಯ ಸುರನದಿಯ ಭಕ್ತ |
ಬಂದಿಲ್ಲಿ ಎಚ್ಚರಿಸು ಪ್ರೇಮಮಯಿ ಜನನಿಯನು
ಬಂಧನವು ಹರಿಯುವುದು ಮಾತೆಯೊಲುಮೆಯಲಿ ||