ಪಿಡಿ ಎನ್ನ ಕೈಯ್ಯ ಮುಖ್ಯ ಪ್ರಾಣ
Category: ಶ್ರೀಕೃಷ್ಣ
Author: ವಿಜಯದಾಸ
ಪಿಡಿ ಎನ್ನ ಕೈಯ್ಯ ಮುಖ್ಯ ಪ್ರಾಣ
ಭುವನ ತ್ರಾಣ ಸದ್ಭವ ಪ್ರವೀಣ
ಶ್ಲೋಕ :
ಹೀನಾಹೀನ ವಿವೇಕವಿಲ್ಲದೆಸೆವಾ | ನಾನಾ ವಿಧ ಪ್ರಾಣಿ ಭ |
ಜ್ಞಾನಾ ಜ್ಞಾನ ತ್ರಿಕಾಖಿಳ ಕ್ರಿಯೆಗಳು | ಹೇ ನಾಥ ನಿನ್ನಿಂದಲಿ ||
ಏನಾಶ್ಚರ್ಯ ನಿವೇದಕೀಯ ನಿನಗೆ ಶ್ರೀನಾಥನ ಪ್ರೀತಿಗೆ
ನಾನಾ ರೂಪ ವಿಶಿಷ್ಟನಾದಿ ರಿಪುಸ್ಸೇನೇಯ ಸಂಹರಿಸಿದೆ||1||
ಪದ:
ಏನ ಹೇಳಲಿ ನಿಜ ಸಂಶಯ ಜನರಾಸೆಯ | ಉದ್ಧರಿಸುವ ಬಗೆಯಾ
ಜ್ಞಾನ ಭಕುತಿ ವಿರಕ್ತಿಯಾ | ಕೋಟಿ ಮುಕ್ತಿಯಾ |
ನೀ ಕೊಡುವಿ ಕಾಣಯ್ಯಾ | ಶ್ರೀ ನಾರಸಿಂಹನ ಪದಾಶ್ರಯಾ
ಗುಣ ಸಂಚಯ | ಮಾಡೊ ಎನ್ನಲ್ಲಿ ದಯಾ |
ಹೀನನಾಗಿ ಪಾಪರಾಶಿಯ |
ಮಾಡಿದೆನಯ್ಯಾ | ಮುಂದೇನೋ ಉಪಾಯ ||2||
ಶ್ಲೋಕ:
ನೀನೊಬ್ಬಾನಲ್ಲದಾವ ದೇವತೆಗಳು | ದಾವಂಗೆ ಬಿಟ್ಟೀರ್ವರು |
ಕಾವಾ ಮಾಯಾದಿ ವೊನ್ಹವೆಂದು ಜನರು |
ಜೀವಾತ್ಮಗೆ ಪೇಳ್ವಿರೊ ||
ಶ್ರೀ ವತ್ಯಾಂಕನ ಆಜ್ಞೆಯಿಂದ ತನು ಬಿಟ್ಟಾವ್ಯಾಳಿಗೆ ಪೋಪಿಯೋ |
ಆವಾಗೆಲ್ಲರು ಕೂಡಿ ಊರ ಹೊರಗೆ ದೇವೇಶ ಕೊಂಡೊಯ್ವರೋ||3||
ಪದ:
ಕಂಸಾರಿ ಚರಣವ ಭಜಿಸದೆ | ನಿನ್ನ ನೆನೆಯದೇ |
ದುರ್ವಿಷಯದಿ ಬರಿದೆ | ಸಂಸಕ್ತನಾಗಿ
ನಾ ಭ್ರಮಿಸಿದೆ ಬುದ್ಧಿಸಾಲದೇ ||
ಬಹು ಪಾಮರನಾದೆ | ಸಂಶಯ ಬಿಟ್ಟಿನ್ನು ತಪ್ಪದೇ |
ನಿನ್ನ ನಂಬಿದೆ | ಇನ್ನು ಬಿಡುವುದು ಚಂದೇ |
ಸಂಸಾರದಲ್ಲಿ ಪದೇ ಪದೇ ದುಃಖಪಡಿಸದೆ | ಉದ್ಧರಿಸೆನ್ನ ತಂದೆ ||4||
ಶ್ಲೋಕ :
ಶ್ರೀಶ ಪ್ರೀತಿಗೆ ಕೀಶನಾದೆ ರವಿಯ | ಗ್ರಾಸಕ್ಕೆ ಬೆನ್ನಟ್ಟಿದೆ |
ಈಶಾಧೀಶರು ಆತಗಾಗಿ ನಿನಗೆ | ಕಾಶರಭವನ್ಹಾಕಲು ||
ಲೇಶಾಯಾಸವು ಆಗಲಿಲ್ಲ ನಿನಗೆ ಶ್ವಾಸಾ ಬಿಡದಾಯಿತೋ |
ಆಶಾಪಾಶ ಸಮಸ್ತ ಮೂರುಜಗಕೇ | ಆ ಶಕ್ತಿ ಅತ್ಯದ್ಭುತ ||5||
ಪದ:
ಅಂಜನೆಯುದರದಿ ಜನಿಸಿದಿ | ಹನುಮನೆನಿಸಿದಿ |
ರಾಮದೂತ ನೀನಾದಿ
ಕಂಜನಾಭನ ಮಾತು ಕೇಳಿದಿ | ವನಧಿ ದಾಂಟಿದಿ |
ಲಂಕಾಪುರವ ನೈದಿದೀ||
ಅಂಜದೆ ಸೀತೆಯಾ ನೋಡಿದಿ | ಮಾತನಾಡಿದಿ |
ಚೂಡಾರತ್ನವ ಪಿಡಿದಿ | ಬಂಧಿಸಿ ಮನವ ಸಂಚರಿಸಿದಿ |
ಆರ್ಭಟಿಸಿ | ರಕ್ಕಸರ ಸೀಳಿದಿ ||6||
ಶ್ಲೋಕ :
ಕನ್ಯಾ ದೇಶನ ಕಂಡು ಅವನ ಪುರವ | ಹವ್ಯಾದಗೆ ಅರ್ಪಿಸೀ |
ಅವ್ಯಾಷ್ಟಾಯೆಂದ ವಿಭೀಷಣಾಲಯವನು | ಅವ್ಯಸ್ತ ನಿರೀಕ್ಷಿಸಿ ||
ದೇವ್ಯಾದೇಶವ ಕೇಳಿ ಬಂದು
ರಘುರಾಮರ ದಿವ್ಯಾಂಘ್ರಿಗೇ ವೊಂದಿಸೀ
ಸೇವ್ಯ ನಿಜ ಕೃತ್ಯ ಅರ್ಪಿಸಿದೆಯೊ | ಅವ್ಯಾಜ ಭಕ್ತಾಗ್ರಣೇ ||7||
ಪದ:
ಸಹ ಭೋಗ ಕೊಟ್ಟನು ರಾಘವ | ನಿನಗೆ
ಯೋಗ್ಯವ | ಬದಲು ಕಾಣದೆ ದೇವಾ
ಅಹಿ ಪಾಶಾ ಮೋಹಿತ ಬಂಧವಾ | ಜನ
ಸದ್ಭಾವ | ನೋಡಿ | ಗಂಧಮಾದನವ |
ಮೋಹಿಸಿ ಕ್ಷಣಕೆ ಬಂದು ವೊದಗುವ | ನಿನ್ನ
ವೇಗವ | ಪೊಗಳಲಾರೆನು ಭವ |
ಮಹಿತ ಚರಣ ಸರಸಿರುಹವ | ನಿನ್ನ ಚರಣವ |
ಮೊರೆ ಐದಿವರವ ||8||
ಶ್ಲೋಕ :
ಕುಂತಿದೇವಿಯು ಮಂತ್ರದಿಂದ ಕರೆಯೇ |
ಸಂತುಷ್ಟನಾಗಿ ಸ್ವಯಂ |
ಕಾಂತಸ್ಪರ್ಶನ ಮಾತ್ರದಿಂದ ಧರೆಯೊಳ್ |
ನಿಂತ್ಹಾಂಗೆ ನೀ ಹುಟ್ಟಿದಿ |
ಸಂತಾಪಪ್ರದನಾಗಿ ದುಷ್ಟ ಮಣಿನ್ಮುಂತಾದ ದೈತ್ಯಾಘಕೇ |
ಎಂಥಾ ದೇಹವೊ ನಿಂದು ಅದ್ರಿ ಪುಡಿಯಾ |
ಎಂಥ ಬಲವೆ ನಿನ್ನದು||9||
ಪದ:
ನಾಮದಿಂದಲಿ ನಿನಗೆಲ್ಲರು | ತ್ರಿಜಗದ್ಗುರು |
ಭೀಮಾಸೇನನೆಂಬುವರು |
ಭೂಮಿಯೊಳಗೆ ನಿನಗೊಬ್ಬರು | ಸಮರಿಲ್ಲರು |
ಧೃತರಾಷ್ಟ್ರನ್ನ ಸುತರು |
ಭೀಮನ್ನ ಕೊಲ್ಲಬೇಕೆಂಬೋರು | ವಿಷವನಿತ್ತರು ||
ಸರ್ಪಗಳ ಕಚ್ಚಿಸಿದರು | ಕ್ಷೇಮವಾಯಿತು ಏನಾದರು |
ಭಕ್ತ ಸುರತರು | ಮೋಕ್ಷ ಮಾರ್ಗವ ತೋರು ||10||
ಶ್ಲೋಕ :
ಕಕ್ಷಾ ವಾಸಕ ಋಕ್ಷ ಕೇಸರಿ ಮಹಾ | ವೃಕ್ಷಾದಿ ಸಂಹಾರಕಾ |
ಲಾಕ್ಷಾಗಾರವು ಬಿಟ್ಟು ನಿನ್ನವರ ನಾ | ಸುಕ್ಷೇಮದಿಂದೈದಿಸಿ |
ಭಿಕ್ಷಾರ್ಥಾವಿನಿಯುಕ್ತನಾಗಿ ಬಕನಾ | ಲಕ್ಷಿಲ್ಲದೇ ಕುಟ್ಟಿದೀ |
ಸಾಕ್ಷೀ ಮೂರುತಿ ಚಿತ್ರವೇ ನಿನಗದಧ್ಯಕ್ಷಗ್ರ ಸರ್ವೇಶಗಾ ||11||
ಪದ :
ಭಾರತಿ ನಿನಗಾಗಿ ಬಂದಳು ವೇದವತಿಯಾಳು |
ದ್ರುಪದಜೆ ಎನಿಸಿದಳು |
ಘೋರ ದುಃಶಾಸನು ಮುಟ್ಟಲು | ಮೊರೆಯಿಟ್ಟಳು ದ್ವಾರರಾದಳು |
ವರ ಸುಜನಾಭೀಷ್ಟ ಕೊಡುವಳು |
ಧೀರನೆನವೆ ಹೃದಯದೊಳು ಹಗ
ಲಿರುಳು | ಭಜನೆಗಳಿಪ್ಪನಂಘ್ರಿಗಳು ||12||
ಶ್ಲೋಕ :
ಎಲ್ಲಾ ದೈತ್ಯರು ಹುಟ್ಟಿ ಭೂತಳದಿ ನಿನ್ನಲ್ಲೆ ಪ್ರದ್ವೇಷದಿಂ |
ದಿಲ್ಲೇ ಇಲ್ಲ ಮುಕುಂದನಾ ಗುಣಗಳು | ಸುಳ್ಳಷ್ಟು ಈ ವಿಶ್ವವೊ ||
ಇಲ್ಲೆಂಧೇಳಲು ಸದ್ಗುಣಕ್ಕೆ ಗೊತ್ತಿಲ್ಲಾ ತಾನಾಗ ಈ ತತ್ವವೊ |
ಅಲ್ಲಿಂದಚ್ಯುತನಾಜ್ಞೆಯಿಂದವನಿಯೋಳ್ | ಪುಲ್ಲಾಕ್ಷ ಮತ್ತೈದಿದಿ||13||
ಪದ :
ಪಾಜಕ ಕ್ಷೇತ್ರದಿ ಜನನವನು ಮತ್ತೈದಿ ನೀನು |
ಮಧ್ಯಗೇಹಾರ್ಯನ ಸೂನು |
ರಾಜತಾಸನದಲ್ಲಿ ಇದ್ದನು | ಒಬ್ಬ ಯತಿಪನು |
ಅಚ್ಯುತಪ್ರೇಕ್ಷ ಎಂಬುವನು | ಸ್ರಜನಿಯನು ಸೇವಿಸಿ ತಾನು |
ವರ ಪಡೆದನು | ಭಾವೀ ಶಿಷ್ಯ ನಿನ್ನನು |
ದ್ವಿಜನಾಗಿ ಬಂದು ಆ ಯತಿಯನು ಪೊಂದಿದಿ ನೀನು |
ತುರ್ಯಾಶ್ರಮವನು ಯಿನ್ನು ||14||
ಶ್ಲೋಕ :
ದುರ್ವಾದ್ಯುಕ್ತ ಭಾಷ್ಯ ಸಂಘಗಳನು | ಸರ್ವೇದ್ಯನೀ ಖಂಡಿಸೀ |
ಸರ್ವಾನಂದದಿ ದಿವ್ಯ ಶಾಸ್ತ್ರಗಳನು | ವಾಗಾಜಯಂ ನಿರ್ಮಿಸಿ ||
ಪೋರ್ವಾನಂದ ಸುತೀರ್ಥ ಮಧ್ವ ಎನಿಸಿ |
ಗರ್ವೋಚಿಸಲ್ಲೋಕಕೆ |
ನಿರ್ವಾಣಕ್ಕೆ ಸುಮಾರ್ಗ ತೋರಿದಿ ಮಹಾ |
ಸರ್ವಜ್ಞ ಚೂಡಾಮಣಿ ||15||
ಪದ:
ಕೃಷ್ಣನು ಗೋಪಿಚಂದನದಲ್ಲಿ ಬಂದು ಧರೆಯಲ್ಲಿ |
ರಜತಪೀಠ ಪುರದಲ್ಲಿ |
ವಿಷ್ಣು ತಾ ನಿಂದನು ನಿನ್ನಲ್ಲಿ | ದಯದಿಂದಲ್ಲಿ |
ನೀ ಕಲಿಯುಗದಲ್ಲಿ |
ವೃಷ್ಣೀಶನ ಮಾಡಿಸುತಲ್ಲಿ ಅನುದಿನದಲ್ಲಿ |
ಇರುವಿ ಮತ್ತೊಂದರಲ್ಲಿ |
ವಿಷ್ಣು ಕೃಪೆಯು ಎಷ್ಟು ಹೇಳಲಿ ದಿನದಿನದಲ್ಲಿ |
ಪಟ್ಟವಾಳಿದಿ ಅಲ್ಲಿ |ವಿಠ್ಠಲನ ವಿಜಯಪಾದದಲ್ಲಿ ಅನುದಿನದಲ್ಲಿ||16||