ಪೇಳುವೆ ಮನವೆ ನಿನಗೊಂದು

Category: ಶ್ರೀಕೃಷ್ಣ

Author: ವಿಜಯದಾಸ

ಪೇಳುವೆ ಮನವೆ ನಿನಗೊಂದು ಕುಳಿತು
ಲಾಲಿಪುದು ಮುಕ್ತಿಗೆ ಹಾದಿ ಎಂದು

ಹರಿಯ ಚರಣಾಬ್ಜ್ಬಕೆ ಎರಗು ಬಡ
ವರನ ಕಂಡರೆ ಅಕಟಾ ಎಂದು ಮರಗು
ಹರಿ ಭಕುತಿಗೆ ನೀನೆ ಕರಗು
ಇಹ ಪರದಲ್ಲಿ ಉತ್ತಮ ಯೆಂದೆನಿಸಿ ತಿರುಗು ||1||

ಅಹಂಕಾರ ಮಮಕಾರ ಬಿಟ್ಟು ಅಂಬು
ರುಹಲೋಚನನ ಸುಮತವನ್ನೆ ತೊಟ್ಟು
ಕುಹಕ ಮತಿಗಳನ್ನು ಬಿಟ್ಟು ಗುರು
ದ್ರೋಹಿಗಳಾದವರ ಹೃದಯವ ಮೆಟ್ಟು ||2||

ಅಲ್ಪ ಬುದ್ಧಿಗಳನ್ನು ಮಾಣು ಒಂದು
ಸ್ವಲ್ಪವಾದರು ಜ್ಞಾನದ ಮಾರ್ಗ ಕಾಣು
ಬಲ್ಪಂಥದಲಿ ಬಾಹದೇನು ಬಿಡು
ಅಲ್ಪಗಳ ಸಂಗ ಎಂದು ಸಾರಿದೆನು ||3||

ಸ್ವಾಮಿಯ ಪಾದವ ನೋಡು ನಿನ್ನ
ಕಾಮ ಕ್ರೋಧಗಳೆಲ್ಲ ಕಳೆದು ಈಡಾಡು
ನಾಮ ಕೀರ್ತನೆಗಳನ್ನು ಪಾಡು ತ್ರಿ
ಧಾಮದೊಳಗೆ ಒಂದು ಇಂಬನೆ ಬೇಡು ||4||

ಎಚ್ಚತ್ತು ತಿಳಿದುಕೋ ಸೊಲ್ಲಾ ನಾನು
ಮುಚ್ಚುಮೊರಿಲ್ಲದೆ ಪೇಳಿದೆನಲ್ಲಾ
ಹುಚ್ಚಾದರೆ ಫಲವಿಲ್ಲ ಮುಂದೆ
ಅಚ್ಚುತ ವಿಜಯವಿಠ್ಠಲನಲ್ಲದಿಲ್ಲ ||5||