ಬಂದ ದುರಿತ ವಿನಾಶನಾ
Category: ಶ್ರೀಕೃಷ್ಣ
Author: ವಿಜಯದಾಸ
ಬಂದ ದುರಿತ ವಿನಾಶನಾ
ಬಂದ ದುರಿತ ವಿನಾಶನ ಇಂದು ಪುರಂದರನ
ಪೊಂದುತಲಿ ಅತಿ ಭಕುತಿಯಿಂದ ಸ್ಮರಿಸುವ ಜನರ
ಹಿಂದೆ ಮುಂದು ಕುಲಕೋಟಿಗಳು
ಉದ್ಧಾರ ಸಂದೇಹ ಸಲ್ಲದಿದಕೆ
ದ್ವಾರಕಾಪುರದಲ್ಲಿ ಶ್ರೀರಮಣ ಸಭೆಯೊಳಗೆ
ಚಾರು ಮಂಡಿತನಾಗಿ ಇರುತಿರಲು ಯದು ಪರಿ
ವಾರ ವಾಲಗ ಮಾಡೆ ಸುತ್ತಲಿಹ
ಗೋಪಿಕಾ ನಾರಿಯರ ಖ್ಯಾಲದಲ್ಲಿ
ವಾರ ಕಾಂತೆಯರು ಮದವೇರಿ ನೃತ್ಯವ ಮಾಡೆ
ಭೋರೆಂಬ ವಾದ್ಯವಿಳೆಯೊಳು ಮೊಳಗೆ ದೇವತತಿ
ಧೀರರಾರಾರೆಂದು ಪೊಗಳಲಾ ನಭದಿಂದ
ನಾರದನು ಧರೆಗಿಳಿದನು ||1||
ಬರುತಲೇ ವೈಕುಂಠಪುರದರಸಗೆರಗಿದನು
ಕರಗಳನು ಮುಗಿದು ಕಿನ್ನರಿಯನ್ನು ತಾ ಧರಿಸಿ
ಹರುಷದಿಂದಲಿ ಸ್ವರವನೆತ್ತಿ
ಮೂವತ್ತೆರಡು ರಾಗಗಳಲಿದಿರುನಿಂದು
ಎರಡು ಕಂಗಳಧಾರೆ ಸುರಿಯೆ ಪುಳುಕೋತ್ಸಹದಿ
ಕೊರುಳುಟ್ಟಿ ತೊದಲುನುಡಿ ಮೈಸ್ಮರಣೆ ಹಾರೆ ಶ್ರೀ
ಹರಿ ಹರೀ ಹರಿಯೆಂದು ಹರಿದಾಡುತಿರಲಾಗ
ಸುರರು ಶಿರವನೆ ತೂಗಲು||2||
ಅಚ್ಚುತನು ಪರಮ ಭಾಗವತನ್ನ ಭಕುತಿಗೆ
ಮೆಚ್ಚಿದನು ಬೇಡುವುದು ವರವಧಿಕವೆಂದೆನಲು
ಮುಚ್ಚಿದಂಬಕಗಳನು ತೆರೆದು
ಗೀರ್ವಾಣಮುನಿ ಎಚ್ಚರಿಕೆಯನು ಪೇಳುತ
ಅಚ್ಚಗನ್ನಿಕೆ ರಮಣ ದೀನನನು ಮನ್ನಿಪುದು
ನಿಚ್ಚಟೆನ್ನಯ ಕೂಡೆ ಬಿಡದೆ ಆಡೆನಲು ಕಲಿ-
ಹೆಚ್ಚಿದಾ ಯುಗದಲ್ಲಿ ಸಲಿಸುವೆನು
ಕೀರ್ತಿಗಳು ಬಿಚ್ಚಿ ತೋರಿಸುವೆನೆಂದ ||3||
ವರ ಪಡೆದು ನಾರದನು ಇರುತಿರಲು ತಾವಿತ್ತ
ಬರಲು ಕಲಿ ದೊರೆತನವು ಕೆಲವು ಕಾಲಾಂತರಕೆ
ಸಿರಿವರನ ದಯದಿಂದ ಜನಿತರಾದರು
ಪುರಂದರವೆಂಬ ನಗರಿಯಲ್ಲಿ
ಚರಿಸಿದರು ಕೆಲವು ದಿನ ಸಂಸಾರ ವೃತ್ತಿಯಲಿ
ಜರಿದು ವೈರಾಗ್ಯವನು ತೊಟ್ಟು ದೃಢಮನಸಿನಲಿ
ತರುಣಿ ಮಕ್ಕಳು ಸಹಿತ ಸೇರಿದರು
ಕಿಷ್ಕಿಂಧಗಿರಿ-ತುಂಗ ಪಂಪದಲ್ಲಿ ||4||
ಅಂದು ಭಕುತಗೆ ಇತ್ತ ಭಾಷೆ ತಪ್ಪಲಿಬಾರ-
ದೆಂದು ಇಂದಿರೆಪತಿಯು ದಯದಿಂದ ವಲಿದವರ
ಮುಂದೆ ಒಂದರಘಳಿಗೆ ತೊಲಗದಲೆ
ಕುಣಿಕುಣಿದು ನಂದವನೆ ತೋರಿಕೊಳು
ಮಂದಭಾಗ್ಯರಿಗೆ ಈ ಪರಿಯ ಸೊಬಗುಂಟೆ ನಾ
ರಂದರಿವರಾದ ಕಾರಣದಿಂದ ಪರ ಬೊಮ್ಮ
ಬಂದು ಸಿಲುಕಿದನೆಂಬುವುದೆ ಇದಕೆ
ಪ್ರಾಮಾಣ್ಯವೆಂದು ತಿಳಿದು ಸುಜನರು ||5||
ವಾಸವನೆ ಮಾಡಿದರು ಪ್ರಹ್ಲಾದನವತಾರ
ವ್ಯಾಸರಾಯರ ಬಳಿಯ ಮುದ್ರೆ ಗುರುಮಂತ್ರ ಉಪ
ದೇಶ ಕೈಗೊಂಡು ವೈಷ್ಣವರಾಗಿ
ಪುರಂದರ ದಾಸರೆಂಬುವ ಪೆಸರಲಿ
ದೇಶಗಳ ತಿರುಗಿ ಪುಣ್ಯಕ್ಷೇತ್ರಗಳ ಮೆಟ್ಟಿ
ಲೇಸಾಗಿ ಅಲ್ಲಲ್ಲಿ ಮಹಿಮೆಗಳ ಪೇಳುತ ದು
ರಾಸೆಯನು ತೊರೆದು ವಿಠ್ಠಲನ ಸನ್ನಿಧಿಯಲಿ
ವಸಿಸಿದರು ಧರ್ಮಬಿಡದೆ ||6||
ಉಪಾದಾನವ ಬೇಡಿ ವಿಪ್ರರಿಗೆ ಮೃಷ್ಟಾನ್ನ
ಅಪರಿಮಿತವಾಗಿ ಉಣಿಸುತ್ತಿರಲು ಅವರಲ್ಲಿ
ಗುಪಿತ ಚರಿತೆಯ ಕಂಡು ದೇವಮುನಿ
ತಟಿನಿಗಳು ತಪಸು ಫಲವಾಯಿತೆಂದು
ತಪನ ಕಾಲದಲೆದ್ದು ದಾಸರಾ ಸದನದಲಿ
ಜಪಿಸಿ ತಮ ತಮ ತಕ್ಕ ತಾರತಮ್ಯಗಳಿಂದ
ಉಪಚಾರ ಕೈಗೊಂಡು ಧನ್ಯರಾದೆವು ಎಂದು
ಸುಪಥವನು ಇಚ್ಛಿಸುವರು ||7||
ಅವರೆಂದ ವಚನಗಳೆಲ್ಲ ವೇದಾರ್ಥವಾಗಿ
ಅವನಿಯೊಳು ತುಂಬಿದುವು ಬಂದರೇ ಗ್ರಹಿಸಿದರ
ಭವರೋಗ ಭಸಿತಾಗಿ ಸುಜ್ಞಾನವೆಂಬಂಥ
ಭುವನ ನಿಧಿಯೊಳಗೆ ಮುಳುಗಿ
ಪವನ ಮತವಿಡಿದು ಪರಿಪೂರ್ಣಮಾಚಾರದಲಿ
ತವಕದಿಂದಲಿ ಹರಿಯ ಪಾದವನೆ ಪಡಕೊಂಡು
ಜವನಪುರ ದಾಟಿ ಜನ ತಪ ಸತ್ಯ ಲೋಕದಲಿ
ನವರೂಪಿನಲಿ ಇಪ್ಪರು ||8||
ಏನು ಇದು ಎಂತೆಂದು ದೂಷಿಸದಿರಿ ದಾಸರ
ಸೂನು ಪೇಳಿದನು ಗುರು ವ್ಯಾಸಮುನಿ ರಾಯರಿಗೆ
ಆ ನಾರದರೆ ಪುರಂದರ ದಾಸರೆಂಬಂಥ ಸೂನೃತದ ಸಿದ್ಧಾಂತದ
ಧ್ಯಾನದಲಿ ತಿಳಿದು ಸುಜ್ಞಾನಿಗಳ ವದನಖದ
ರೇಣಿನವನಾಗಿ ಬಿನ್ನೈಸಿದನು ಜ್ಞಾನಮಯ
ಆನಂದಮಯ ವಿಜಯವಿಠ್ಠಲನ್ನ ಪಾದಾಂಬುಜ
ಕಾಣುವಾ ಜನ ಲಾಲಿಸೆ ||9||