ಭೂರಮಣನೆ ಕಾಯೋ ನಿತ್ಯ

Category: ಶ್ರೀಕೃಷ್ಣ

Author: ವಿಜಯದಾಸ

ಭೂರಮಣನೆ ಕಾಯೋ ನಿತ್ಯ
ಸಂಸಾರವೆ ಸುಖವೆಂದು ಹಾರಯಿಸಿ ಬಾಳುವಾ |
ನರನ ಉದ್ಧಾರ ಮಾಡುವುದು

ಕಂಗಳಿಂದಲಿ ಪರರ ಮನೆಯ ಅಂಗನೆಯರ ನೋಡಿ
ಅಂಗಸಂಗವ ಬಯಸಿ ಪಾಪಕ್ಕೆ ಹಿಂಗದೆ ಗುರಿಯಾದೆ ||1||

ಜಿಹ್ವೆಯನು ಪಿಡಿದು ನಿಲಿಸದೆ ವಿಹ್ವಲನಾಗಿ ಬಹುರಸ
ಸಂಹ್ವತಿಯ ಮೆದ್ದು ಪುಣ್ಯದಾ ಗಹ್ವರವು ಮರಿಯದೆ ||2||

ನಾಸಿಕಕೊನೆಯಿಂದ ಅನರ್ಪಿತ ವಾಸನೆ ಕೈಕೊಂಡು
ಲೇಸಾಗಿ ಮನವುಬ್ಬಿ ನಲಿವುತ ದೇಶದೊಳಗೆ ಮೆರೆದೆ ||3||

ಮುಪ್ಪಾಗುವತನಕ ಸುಖದಲ್ಲಿ ಅಪ್ಪಿದೆ ನಾರಿಯರ
ಒಪ್ಪಿದ ಧರ್ಮಗಳ ಖಳರಿಗೆ ಒಪ್ಪಿಸಿದೆನೊ ಹರಿಯೇ ||4||

ದುಷ್ಟರಾಡುವ ವಾಕ್ಯ ಕೇಳುತ್ತ ಅಟ್ಟಹಾಸವ ಮಾಡಿ
ಕೆಟ್ಟು ಪೋಗುವೆನೆಯ್ಯಾ ವಿಜಯವಿಠ್ಠಲ ನೀನೆ ||5||