ರಂಗನ ನೋಡಿರೊ ಸಿರಿ ನರಸಿಂಗನ ಪಾಡಿರೊ

Category: ಶ್ರೀನರಸಿಂಹ

Author: ವಿಜಯದಾಸ

ರಂಗನ ನೋಡಿರೊ ಸಿರಿ ನರಸಿಂಗನ ಪಾಡಿರೊ |
ಮಂಗಳಮೂರುತಿ ಡಿಂಗರಿಗರ ಹೃಸ್ಸಂಗ ಕರುಣಾತರಂಗಾ

ತನುಜನ ಜನಕನು ಕೊಲ್ಲಲು
ಮೊರೆಯಿಡಾ ಬಂದ | ಕಂಭದೊಳಿಂದ |
ಮನುಜಕೇಸರಿ ರೂಪಧರಿಸಿದ ನಿಜ
ಲೋಕಸ್ವಾಮಿ | ಅಂತರ್ಯಾಮಿ ||
ದನುಜನ ಉದರ ಬಗೆದು
ಕರುಳಮಾಲೆ ಇಟ್ಟಾ | ಕೊರಳೊಳು ದಿಟ್ಟಾ |
ವನಜ ಭವಾದ್ಯರು ಜಯ
ಜಯವೆನುತಿರೆ ಮೆರೆದಾ | ಪ್ರಹ್ಲಾದವರದಾ ||1||

ಮನದಲಿ ಬೇಡಿದ ಭಾಗ್ಯವ
ಕೊಡುವನು ಚಲುವಾ | ಭಕುತರಿಗೊಲಿವ |
ಅನುದಿನದಲಿ ಅನುಕಂಪನು
ಹರಿ ನಮಗೆಲ್ಲಾ | ಭಕ್ತವತ್ಸಲಾ ||
ಘನಮಹಿಮನು ಪರಿಪೂರ್ಣ
ಗುಣಾಂಬುಧಿ ತೇಜ | ರಾಜಾಧಿ ರಾಜ |
ಜನುಮ ಜನುಮದಲಿ ಜನನಾದಿಗಳಿಗೀತ ಮುಖ್ಯ |
ಕರ್ತನು ಸಖ್ಯ ||2||

ಕನಕಮುನೀಶ್ವರ ತಪವನು ಮಾಡಲು ಮೆಚ್ಚಿ | ಬಂದನು ಮೆಚ್ಚಿ |
ಕನಕ ವರುಷವನು ಗರೆವದು ಅಂದಿನ ದಿನದಿ | ಆನಂದವನಧಿ |
ಕನಕ ನೃಕೇಸರಿ ಎನಿಸಿದಾ ಅಂದಿನಾರಭ್ಯಾ | ಈತನೆ ಸಭ್ಯಾ |
ಅಳನಯನ ರೂಪ ಲಿಂಗಾಕೃತಿಯಾ ಪೊಳೆವಾ |
ನುತಿಸಲು ಸುಳಿವಾ ||3||

ಗುಣದಲಿ ತಿಳಿವದು ರುದ್ರಗೆ ಹರಿರೂಪವಿಲ್ಲಾ |
ಇದು ಪುಸಿಯಲ್ಲಾ |
ವನಜನಾಭಗೆ ನಾನಾ ರೂಪಗಳುಂಟೆಂದು
ವೇದಾ | ಪೇಳ್ವದು ಮೋದಾ ||
ಪ್ರಣತನಾಗದ ಇನಿತಾಗದ ಪಾಪಿಷ್ಠ ಮನುಜಾ |
ಅವನೇ ದನುಜಾ |
ಗಣನೆಮಾಡದಲಿರಿ ಇವರನು ಸುಜನರು ಇಂದೆ |
ನಮಗೀತ ತಂದೆ ||4||

ಇವನಂತೆ ಒಪ್ಪುವಾ ಪೊಂಪಾ
ನಿಧಿಯೊಳು ಧನದಾ | ದಿಕ್ಕಿಲಗಾಧಾ |
ಮುನಿಜನ ಸಮ್ಮತ ಶ್ರುತಿ ಉಕ್ತಿಗಳಲ್ಲಿ ಅಕ್ಕು | ಕೇಳೀವಾಕು |
ಮಣಿದು ನಮಿಸಿ ಒಮ್ಮೆ ಧ್ಯಾನವ
ಮಾಡಲು ಭಕುತಿ | ಉಂಟು ವಿರಕುತಿ |
ಹನುಮದೀಶ್ವರ ನಮ್ಮ ವಿಜಯ
ವಿಠ್ಠಲ ನರಸಿಂಗಾ | ರಿಪುಗಜ ಸಿಂಗಾ ||5||