ರಜತ ಪೀಠದ ಯಾತ್ರೆ ರಜೋತಮ ಗುಣವುಳ್ಳ

Category: ಶ್ರೀಕೃಷ್ಣ

Author: ವಿಜಯದಾಸ

ರಜತ ಪೀಠದ ಯಾತ್ರೆ ರಜೋತಮ ಗುಣವುಳ್ಳ |
ಪ್ರಜರಿಗೆ ದೊರಕುವದೆ |
ತ್ರಿಜಗದೊಳಗೆ ಮುಂದೆ | ಅಜನಾಗಿ ಬಪ್ಪಗೆ |
ಭಜನೆ ಮಾಡುವಂಥ ಸುಜನರಿಗಲ್ಲದೆ

ಮಂದಾಕಿನಿ ಮಿಕ್ಕಾದ ನದಿಗಳಲ್ಲಿಗೆ ಪೋಗೆ |
ಮಿಂದು ನಾನಾ ಕ್ಷೇತ್ರವ ಬಂದೂ ಬಿಡದೆ ತಿರುಗಿ ವೇದ ಶಾಸ್ತ್ರಗಳು |
ಚಂದದಿ ಓದಿಕೊಂಡು |
ಕುಂದದೆ ವ್ರತ ಯಾಗ ಯೋಗ ಮಾಡಲೇನು |
ಬಿಂದು ಮಾತ್ರ ಫಲವಿಲ್ಲ |
ವೃಂದಾರಕ ಸುರರು ಒಂದಾಗಿ ಒಂದಿನ |
ಅಂದು ಪೀಯೂಷವ ಕರೆಯೆ ಉಂಡವರಾರು ||1||

ಕ್ರೀಡೆಯಲಿ ತ್ರಿಪುಂಡ್ರವ ಧರಿಸಿದ ಮಾನವ |
ನಾಡೊಳು ಉಡುಪಿ ಯಾತ್ರೆ ಮಾಡಿದರವಗೇನು ಲೇಶ ಸತ್ಕರ್ಮವು |
ಕೂಡದು ಕೂಡದಯ್ಯಾ |
ಬಿಡಾಲನಂದದಿ ತಿರುಗಿದಂತಾಗುವದು |
ಕೇಡಿಗೆ ಗುರಿಯಾಗುವಾ |
ಜೋಡು ಇಲ್ಲಿಗೆ ಬಂದು ತಿರುಗಿ ಪೋದರೆಯೇನು |
ಆಡಲೇನದಕೆ ತಿಲಾಂಶ ಸುಖವುಂಟೆ ||2||

ತಮೋ ಯೋಗ್ಯ ಉಡುಪಿನ ಯಾತ್ರೆ ಮಾಡಲು |
ಅಮಿತ ಬಲವಂತನಾಗಿ
ಯಮಗ ಸದೃಶನಾದ ಯವನನಲ್ಲಿ
ಪುಟ್ಟಿ ಆಕ್ರಮಿಸಿ ಪುಣ್ಯವನೆ ಕೆಡಿಸಿ
ತಮಕೆ ಸಾಧನವಾದ ಸುಖಬಟ್ಟು ಬಹುಕಾಲ |
ರಮಣಿ ಮಕ್ಕಳು ಸಹಿತದಿ |
ಕ್ರಿಮಿ ಮೊದಲಾದ ನರಕವನುಂಡು ಅವ ನಿತ್ಯ |
ತಮಸಿನೊಳಗೆ ವಾಸಫಲ ವ್ಯರ್ಥವಾಗದು ||3||

ರಾಜಸ ಗುಣದಲ್ಲಿ ಈ ಯಾತ್ರೆ ಮಾಡಲು |
ರಾಜ ಕುಮಾರನಾಗಿ ತೇಜೋಮಯಾಭರಣ |
ಭೂಷಣವನೆ ಯಿಟ್ಟು |
ವಾಜಿ ಗಜವಾಗಿ ಸೌಖ್ಯ
ಈ ಜಗದೊಳು ಒಟ್ಟು ಪೋಗೋದಲ್ಲದೆ ವಿ |
ರಾಜಿಸುವದು ಬಲ್ಲದೇ |
ರಾಜಮಂದಿರಕೆ ನವರತ್ನ ತೆತ್ತಿಸಿದಂತೆ |
ಈ ಜನದ ಸುಖದ ಫಲ ವ್ಯರ್ಥವಾಗುವದು||4||

ಮುಕ್ತಿಯೋಗ್ಯನು ಬಂದು ಯಾತ್ರೆಯ ಮಾಡಲು |
ಮುಕ್ತಿ ಉತ್ತಮ ಕುಲದಲ್ಲಿ |
ವ್ಯಕ್ತನಾಗೀ | ದಿವ್ಯ ಮನದಲ್ಲಿ ವಿರುಕುತಿ |
ಭಕ್ತಿe್ಞÁನದಲಿ ಬಾಳಿ |
ಶಕ್ತನೆಂದೆನೆ ಸತತ ಶ್ರೀಮದಾರ್ಯರ | ಭಕ್ತಿಲಿ ಲೋಲಾಡುತ |
ಭಕ್ತವತ್ಸಲ ವಿಜಯವಿಠ್ಠಲ ಕೃಷ್ಣಸಾರ |
ಭೋಕ್ತನಲ್ಲಿಪ್ಪನು ಫಲ ವ್ಯರ್ಥವಾಗದು ||5||