ವ್ಯಾಸರಾಯರ ಸ್ಮರಿಸಿರೋ
Category: ಶ್ರೀಮಧ್ವಾಚಾರ್ಯ
Author: ವಿಜಯದಾಸ
ವ್ಯಾಸರಾಯರ ಸ್ಮರಿಸಿರೋ
ವ್ಯಾಸರಾಯರ ಸ್ಮರಿಸಿ ಏಸು ಜನ್ಮದ ಪಾಪ
ನಾಶವಾಗುವುದು ನಿಮ್ಮಾಶೆ ಸಿದ್ಧಿಸುವುದು
ಲೇಸಾಗಿ ಸುಖಿಸಿ ಆನಂದ ವೈಕುಂಠದಲಿ
ವಾಸವಾಗುವುದು ನಿಜ ಭಕುತಿಯಲಿ ಬಿಡದೆ
ಪಿತನಿಂದ ನೊಂದು ರತಿಪಿತನ ಸ್ಮರಿಸುತ
ಪ್ರತಿಬಂಧಕಗಳ ಪ್ರತಿಯಾಗಿ ಬಂದಿರಲು
ಅತಿವೇಗದಿಂದ ಪಾರಂಗತನಾಗಿ
ಬಲು ಮತಿವಂತನಾಗಿ ಮುದದೀ
ಕ್ಷಿತಿಯ ಭಾರವ ವೊಹಿಸಿ ಕೃತಭುಜ ಮುನೀಶ್ವರನ
ಸ್ತುತಿಸುತಲ್ಲಿದ್ದು ಮಿತಿಕಾಲ ಹಿಂಗಳದು
ಸುತಗೆ ರಾಜ್ಯವನಿತ್ತು ಕೃತಕಾರ್ಯನಾಗಿ
ಅಚ್ಯುತನ ವರದಿಂದ ಬಂದು ||1||
ಅಲ್ಲಿ ತ್ರಿಣಿನೇತ್ರ ಶ್ರೀ ವಲ್ಲಭನ ಶ್ರೀಪಾದ
ಪಲ್ಲವಾರುಣಿ ಚಿತ್ತದಲ್ಲಿ ಪ್ರತಿದಿವಸದಲಿ
ನಿಲ್ಲಿಸಿ ನಿಗಮಾರ್ಥದಿಂದ ಪೂಜಿಸುತ್ತಿದ್ದ ಬಲ್ಲ ಭಕುತಿಂದ ಸತತ
ಖುಲ್ಲನಲಿ ಪುಟ್ಟಿದ ಪ್ರಲ್ಹಾದ ದೇವನು
ಬಲ್ಲಿದಾನಾಗೆಲ್ಲಿ ಸಂಸಾರನುತ್ತರಿಸಿ
ಎಲ್ಲ ಕಾಲದಿ ಇರುತಿರಲು ನಾರದ
ಮುನಿ ಮೆಲ್ಲನೇ ನಡತಂದನು||2||
ಬಂದ ನಾರದಗೆ ಪ್ರಲ್ಹಾದ ದೇವನು ಎರಗಿ
ನಿಂದು ಕಂಗಳ ಮುಗಿದು ತ್ರಾಹಿ ತ್ರಾಹಿ ಎಂದು
ಒಂದೊಂದು ಬಗೆಯಲ್ಲಿ ಕೊಂಡಾಡಿ
ಬೆಸಗೊಂಡು ಇಂದು ನಿಮ್ಮಯಾ ದರುಶನಾ
ಛಂದವಾಯಿತೆನಗೆತ್ತಲಿಂದ ಬಂದಿರಿ ಇತ್ತ
ಬಂದ ವಿಚಾರ ಪೇಳೆಂದು ಬಿನ್ನೈಸಲು
ವೃಂದಾರಕ ಮುನಿ ಕೃಷ್ಣನ ಮಹಿಮೆ
ನಂದದಲಿ ಹಾಹಾ ಎನುತಾ ||3||
ವೃಕೋದರನಿಂದ ನೊಂದು ದೇಹವನು ಬಿಡುವಾಗ ಬಾ
ಲ್ಹಕರಾಯನಾಗಿ ಹುಟ್ಟಿದ ಪ್ರಲ್ಹಾದನು
ಉಕುತಿಯಿಂದಲಿ ಪೊಗಳಿ ವರವ ಬೇಡಿದನು
ವೈದಿಕ ಮಾರ್ಗವನ್ನೇ ಧರಿಸಿ
ಉಕುತಿಯನೇ ಸಾಧಿಸಿ ಕಲಿಯೊಳಗೆ ನಿಮ್ಮ ಪೂ
ಜಕನಾಗಿಪ್ಪೆನೆಂದು ತಲೆವಾಗಲು
ಭಕುತಿಗೆ ಮೆಚ್ಚಿಸಲೆ ಅಂದ ಮಾತಿಗೆ
ಇಂದು ಪ್ರಕಟವಾಯಿತು ಧರೆಯೊಳು ||4||
ದಿಕ್ಕುಗಳಂ ಮರದು ಧಿಗಿಧಿಗಿನೆ ಚಿಗಿದಾಡುತ್ತ
ಉಕ್ಕಿದವು ಕಣ್ಣಿಂದ ಅಶ್ರು ಜಲಧಾರೆ ತಾ
ಶಕ್ತಿಯೆಂದದಿ ಪೊಳೆವುತಿರಲು
ಮೈಮರೆದು ದೇವಕಿ ನಂದನನ ನೆನೆದು
ನಕ್ಕು ಕಿಲಿಕಿಲಿ ರಾಹಸ್ಯಗಳನುಚ್ಚರಿಸುತಾ
ತಕ್ರ್ಕೈಸಿ ತಿಳುಪಿದನು ಮುಂದಣಾಗಮವೆಲ್ಲ
ಇಕ್ಕೆಲದವಲವರು ಸಾಹ ಕೇಳಲಾ
ವೃತ್ತಾಂತ ಅಕ್ಕಟ ಅದ್ಭುತವೇನೆಂಬೆ ||5||
ಬನ್ನೂರು ಗ್ರಾಮದಲಿ ಜನಿಸಿದನು ಭೂಸ್ವರೂಪ
ಮುನ್ನಿಲ್ಲದೇ ಬೆಳೆದು ಮುನಿ ಸುಬ್ರಾಹ್ಮಣ
ರನ್ನು ಪಾಲಿಸುವ ಪರಮಾನಂದವುಳ್ಳ ಬ್ರಹ್ಮಣ್ಯತೀರ್ಥರ ಕರದಿ
ಚೆನ್ನಾಗಿ ಪೋಷಿಸಿಕೊಂಡು ಉಪನೀತವಾಗಿ
ಸನ್ಯಾಸಿ ಪಟ್ಟವನೆ ಧರಿಸಿ ಧರ್ಮದಲಿ ಸ
ತ್ಪುಣ್ಯ ಶ್ರೀಪಾದರಾಯರಲ್ಲಿ
ವಿದ್ಯವನೋದಿ ಧನ್ಯ ಕೀರ್ತಿಯಲಿ ಮೆರೆದಾ ||6||
ರಾಯಗದ್ದುಗೆನೇರಿ ಅವನಿಗೆ ಬಂದ ಮಹಾ
ಕುಹುಯೋಗವ ನೂಕಿ ರಾಜ್ಯದೊಳಗೆ ಇದ್ದ
ಮಾಯಿಗಳ ಮರ್ದಿಸಿ ಮುದದಿಂದ
ಸುವರ್ಣ ಛಾಯದಂತೆ ಕಾಂತಿಲೀ
ನ್ಯಾಯಾಮೃತ ತರ್ಕ ತಾಂಡವ ಚಂದ್ರಿಕೆ ಎಂಬ
ಶ್ರೀಯರಸನೊಲಿಸಿ ನಾನಾ ವಿಧದಿ ಪೂಜಿಸಿ
ಸ್ಥಾಯವಾದರು ಪೊಂಪದಿ||7||
ಯಂತ್ರೋದ್ಧಾರಕನ ಪ್ರತಿಷ್ಠಿಸಿ ವಿಜಯೀಂದ್ರ
ಸಂತ ವಾದಿರಾಜಗೊಲಿದು ಪುರಂದರ
ಇಂತು ಶಿಷ್ಯರನ್ನ ಪಡೆದು ಉಪದೇಶಿಸಿ
ಮಂತ್ರ ಸಿದ್ಧಿಯನೆ ಕೊಟ್ಟು
ಭ್ರಾಂತಗೊಳಿಸುವ ಮಹಾ ಅನ್ಯಾಯ ಮತವೆಂಬ
ಕಾಂತಾರ ಪಾವಕನೆ ವ್ಯಾಸಾಬ್ಧಿಯನು ಬಿಗಿದು
ಶಾಂತ ನಿಸ್ಸೀಮನೆನಿಸಿ ಯತಿಶಿರೋರನ್ನ
ಚಿಂತಿತಾ ಫಲದಾಯಕ ||8||
ಮಧ್ವಮತವೆಂಬ ದುಗ್ಧಾಬ್ಧಿಗೆ ಪೂರ್ಣೇಂದು
ಹೃದ್ವನಜದೊಳಗಿರಿಸಿ ಕೃಷ್ಣನ ಪದಾಂಬುಜವ
ಚಿದ್ವಾತ್ಯದಲಿ ನಿಲಿಸಿ ಕಾವ್ಯದಲಿ ಕೊಂಡಾಡಿ ಸದ್ವೀರ ವೈಷ್ಣವರಿಗೆ
ಪದ್ಧತಿಯನು ಪೇಳಿ ತವಕದಿಂದಲಿ ತಾವು
ಸದ್ವೈಷ್ಣವ ಲೋಕ ಸಿರಿಮರಳೈದಿದರು
ಮಧ್ವವಲ್ಲಭ ನಮ್ಮ ವಿಜಯವಿಠ್ಠಲನ
ಪಾದದ್ವಯವ ಭಜಿಸುವವರೂ ಕೇಳಿ ||9||