ಶರಣು ಶ್ರೀ ವ್ಯಾಸಮುನಿ
Category: ಶ್ರೀಗುರು
Author: ವಿಜಯದಾಸ
ಶರಣು ಶ್ರೀ ವ್ಯಾಸಮುನಿ ಚರಣಾಬ್ಜ್ಬ ಭೃಂಗ ಜಯ
ಶರಣು ಶ್ರೀ ಸುಜ್ಞಾನ ಭಕುತಿ ವೈರಾಗ್ಯಪರನೆ ಜಯ
ಶರಣು ದಾಸೋತ್ತಮರ ಮಣಿಯ ನಿನಗ್ಯಾರೆಣಿಯೆ
ಗುರು ಪುರಂದರದಾಸರೆ ನಿಮಗೆ
ಪಾಕಶಾಸನಪುರದ ಚಿನಿವಾರ ವರದಪ್ಪ
ನಾ ಕುಮಾರನಾಗಿ ಜನಿಸಿ ಸಂಸಾರದೊಳು
ನೇಕ ಬಗೆಯಿಂದ ವಿಷಯಾನಂತೆ
ಸಂಚರಿಸಿ ಲೌಕಿಕವನ್ನೆ ತೊರೆದು
ಈ ಕಲಿಯುಗದಲ್ಲಿ ತುಂಗಾತೀರ ಪಂಪಾ
ರಾಕಾಬ್ಜನಂತೆ ಪೊಳೆವ ನಿಧಿಗೆ ಬಂದು ನಿ
ರಾಕರಿಸಿ ದುಸ್ಸಂಗ ವೈಷ್ಣವರಾಗಿ ಪತಿಕರಿಸಿ ಹರಿಭಕುತಿಯಾ ||1||
ಕಾಮಕ್ರೋಧ ಲೋಭ ಮದ ಮತ್ಸರ ಡಂಭ
ಈ ಮರಿಯಾದಿಗಳ ಮರ್ಮವನೆ ಕಡಿದು ನಿ
ಷ್ಕಾಮದಲಿ ಸಿರಿ ರಂಗನಾಮವನ
ಕೈಕೊಂಡು ಆ ಮಹಾ ರಚನೆಯಲ್ಲಿ
ಸೀಮೆಯೊಳು ಪ್ರಾಕೃತದ ಗೀತೆಯಲಿ ಕೊಂಡಾಡಿ
ತಾಮರಸ ಸದೆ ಬಡಿದು ಮಧ್ವಸಿದ್ಧಾಂತ ಲ
ಲಾಮದಾ ಬಿರುದೆತ್ತಿ ಸಾರಿ ಡಂಗುರ
ಹುಯಿಸಿ ಕಾವನೈಯನ ಕುಣಿಸಿದ ||2||
ಶುದ್ಧ ಭಕುತಿಯಿಂದ ಸಿರಿ ವಿಠ್ಠಲನ್ನ ಮೃದು
ಪದ್ಮಗಂಧವನು ಮಧುಪನಂತೆ ಸೇವಿಸುತ್ತ
ತದ್ಧಿಮಿ ಧಿಮಿಕೆಂದು ಕುಣಿಸಿ ಕುಣಿದಾಡುತ್ತ
ಬುದ್ಧಿ ಪೂರ್ವಕದಿಂದಲಿ
ಶುದ್ಧ ಮಂದರನೆಲ್ಲ ಎಂದೆಂದಿಗೂ ಬಿಡದೆ
ಪೊದ್ದರ್ದ ಪಾಪಗಳು ತಿರುಗಗೊಡದಲೆ ಕಾಲಿ
ಲೊದ್ದು ಕಡಿಗೆ ನೂಕಿ ಸುಜ್ಞಾನ
ಮಾರ್ಗದ ಪದ್ಧತಿಯ ಸ್ಥಿತಿ ಪೇಳಿದ ||3||
ವರದಪ್ಪನೇ ಸೋಮ ಗುರುರಾಯ ದಿನಕರನು
ಗುರು ಮಧ್ವಪತಿಯೆ ಭೃಗು ಅಭಿನವನೆ ಜೀವ
ವರತನಯ ನಾಲ್ವರನು ಪಡೆದು
ಉಪದೇಶಿಸಿ ಪರಮ ಜ್ಞಾನಿಗಳ ಮಾಡಿ
ಶರಧಿ ತೆರೆಯಂತೆ ಹರಿಗುಣಗಳನ್ನು ಪೊಗಳುತಿಹ
ತರಳರನು ನೋಡಿ ಗುರು ವ್ಯಾಸಮುನಿರಾಯರಿಗೆ
ಹಿರಿದಾಗಿ ಮನ ಉಬ್ಬಿ ಎರಗಿದಂತಃ
ಕರಣ ಚರಿತೆಯಲಿ ನಲಿದಾಡಿದ ||4||
ಫೃತದ ಬಿಂದಿಗೆ ತಂದ ಅತಿಥಿಯ ವೋಗರನುಂಡ
ಸತಿಯಳೆಂದಾ ನುಡಿಗೆ ಚತುರ ಭಾಗ್ಯವನಿತ್ತ
ಪಥದಲ್ಲಿ ತಾ ಕಾಯ್ದು ಪಥವ ತಪ್ಪಿದರೆ
ಹಿತನಾಗಿ ದೃಢನೋಡಿದ
ಕ್ಷಿತಪ ಶೋಧಿಸೆ ಅಪರಿಮಿತವಾಗಿ ಉಣ್ಣಿಸಿದ
ಯತಿಯ ಪಂಕ್ತಿಗೆ ಭಾಗೀರಥಿ ನದಿಯ ತರಸಿದ
ಸುತನಾಗಿ ನೀರು ನಿಶಿತದಲಿ ತಂದ ಅ
ಪ್ರತಿ ದೈವತಾ ಕಿಂಕರ ||5||
ದುರ್ಜನರ ಮಸ್ತಕಾದ್ರಿಗೆ ವಜ್ರ ಪ್ರಹರವಿದು
ಸಜ್ಜನರ ದಿವ್ಯ ಚರಣಾಬ್ಜಕ್ಕೆ ಭೃಂಗವಿದು
ನಿರ್ಜರರ ಮೆಚ್ಚು ಮೂರ್ಜಗದೊಳಗೆ ಬಲು
ಹೆಚ್ಚು ಲಜ್ಜೆಯನು ತೊರೆದು ನಿತ್ಯ
ಹೆಜ್ಚ್ಚಿ ಹೆಜ್ಚಿಗೆ ಬಿಡದೆ ದಾಸರ ಕರುಣವೆಂಬ
ವಜ್ರ ಕವಚವ ತೊಟ್ಟು ನುಡಿದವನ ನುಡಿ ಸತ್ಯ
ಅರ್ಜುನಾಗ್ರಹ ಒಲಿದು ಸಾಧಿಸುವ ಕರುಣದಲಿ
ಅಬ್ಜಭವನೊಡನೆ ಗತಿಗೆ ||6||
ಎಂತು ವರ್ಣಿಸಲಿ ಎನಗಳವಲ್ಲ ಧರೆಯೊಳಗೆ
ಸಂತತಿ ನೆಲಸಿದಂತೆ ಕಾವ್ಯವನೆ ಸ್ಥಾಪಿಸಿ
ಸಂತಾನದೊಳಗೆ ಗುರು ಮಧ್ವಪತಿ
ದಾಸರನ ಸಂತರಿಸಿ ಧರೆಗೆ ತೋರಿ
ಅಂತ್ಯಕಾಲದಲಿ ಸಿರಿ ವಿಠಲನ ಸ್ಮರಿಸುತ ಸು
ಪಂಥವನು ಹಿಡಿದು ಸದ್ಗತಿಯಲ್ಲಿ ಸೇರಿದರು
ಸಂತತದಾಸರ ಪ್ರಿಯ ವಿಜಯವಿಠ್ಠಲನಂಘ್ರಿ
ಚಿಂತೆಯೊಳಗಿಟ್ಟ ಗುರುವೆ ||7||