ಸತ್ಯಪ್ರಿಯ ಗುರುರಾಯ

Category: ಶ್ರೀಕೃಷ್ಣ

Author: ವಿಜಯದಾಸ

ಸತ್ಯಪ್ರಿಯ ಗುರುರಾಯ ಮಂಗಳಕಾಯ
ನಿತ್ಯದಲಿ ನಿಜ ಭೃತ್ಯ ಸಹಾಯ ಪ

ಮಧ್ವಮತಾಬ್ಧಿ ಚಂದ್ರ ಸದ್ಗುಣಸಾಂದ್ರ
ಅದ್ವೈತಮದ್ರಿ ಇಂದ್ರ ಇದ್ಧರಿಯೊಳಗನಿ
ರುದ್ಧನೆ ವರನೆಂದೆದ್ದು ನೆಗಹಿ ಕರ
ಬದ್ಧ ಕಂಕಣರಾಗಿ
ಸಿದ್ಧ ಪ್ರಮೇಯಗಳನುದ್ಧರಿಸಿದ ಪರಿಶುದ್ಧ ಸ್ಮರ ಮಾರ್ಗಣ ಗೆದ್ದ ||1||

ವಿತರಣದಲಿ ಬಲು ಶೂರಾ ಕೀರ್ತಿವಿಹಾರಾ
ಸತತ ವೇದಾರ್ಥ ವಿಚಾರ
ಮಿತಿ ಇಲ್ಲದೇ ಆ ಕಥಾಮೃತ ತತುವ ಮಾರ್ಗದಲಿ ವ
ಹಿತ ಶಿಷ್ಯರಿಗೆ ನಗುತ ಪೇಳಿದ
ದ್ಭುತ ಮಹಿಮಾ ಸಂಚರಿಸುತ ಆನಂದ ಭರಿತ ||2||

ನೆನೆಸಿದವರ ಸುರಧೇನು ನಿನಗೆಲ್ಲಿ ನಾನು
ಎಣೆಗಾಣೆ ಎಣಿಸಲು ಮೇಣೂ
ಮುನಿ ಸತ್ಯಭೋಧರ ಮನದಲ್ಲಿ ನಿಂದರ್ಚನೆಯನು ಮನದಲ್ಲಿ
ಘನವಾಗಿ ಕೈಕೊಂಬ ಗುಣದಿ ವಿಜಯವಿಠ್ಠಲನ ಚರಣಾಂಬುಜ
ಧ್ಯಾನ ಮಾಡುವ ತ್ರಾಣ||3||