ಸರಸೀರುಹಾಕ್ಷ ಕೃಷ್ಣನ

Category: ಶ್ರೀಕೃಷ್ಣ

Author: ವಿಜಯದಾಸ

ಪ್ರಥಮ ವಚನ
ಸರಸೀರುಹಾಕ್ಷ ಕೃಷ್ಣನ | ಚರಣ ಅರುಣಾರ್ಣವ
ಕಾಂತಿಯಿಂದಿರುವ |
ಪರಮ ಸುಂದರ ರೇಖೆ ಧ್ವಜ ವಜ್ರಾಂಕುಶ ಶಂಖ |
ಚಕ್ರ ಪದುಮ ಗದೆ |
ವರಚಿಹ್ನೆಯಿಂದಿರುವ | ಕಿರಿಗೆಜ್ಜೆಗಳ ಛಾಯ
ಅದರೊಳಗೆ ಬಿದ್ದಿರುವ
ಪರಮಪವಿತ್ರ ತ್ಯುಬುಗಳ ತೆಗೆದು |
ನೇತ್ರದೊಳಗೊತ್ತಿ | ಪರಿಮಳವಾದ ಗಂಧಗಳಿಂದ ಅಲಂಕೃತ |
ಸಿರಿದೇವಿ ವರದೊಡೆಯ ಮೇಲಿದ್ದು | ಕರಕಮಲದಲೊತ್ತುವ |
ಚರಣ ದರುಶನವೆನಗಾಯಿತು ಇಂದಿನ
ದಿನವೆ ಪರಮ ಪುಣ್ಯೋದಯ

ವಿತ್ರತರ ಗಂಗೆ ಮೊದಲಾದ ನದಿಗಳು ಜನಿಸಿಹ ಪಾದ |
ಸರಸೀರುಹ ಸರಸದಿಂ ಕೊಂಡಾಡಿ |
ವರಬೇಡಿ ಹಾಡಿ ಅದರೊಳು ಬಿದ್ದು
ನೆರಳಿ ಮರಳೀ ಸೌಖ್ಯದಾನಂದ |
ಶರಧಿಯೊಳು ಮುಣುಗಿ ಮುಣುಗಿ ಏಳುತ |
ಕರವೆರಡು ಜೋಡಿಸಿ ಪರಿಮಿತಿಯಿಲ್ಲದ
ಸೌಖ್ಯದಾನಂದ ಭಕ್ತಿಭಾವಗಳಿಂದ
ಕರುಣಾಳು ಕೃಷ್ಣ ತ್ವರಿತದಲಿ ತನ್ನ ಸೇವಕ ಜನರೊಳಗೆ |
ಸೇರಿಪ್ಪ ನಾ ಅರಿಯನು ನಾನೊಂದು ಸ್ತೋತ್ರ ಮಾಡುವದಕ್ಕೆ |
ವರವ್ರಜ ತರುಣಿಯರು ಏನು ಪುಣ್ಯವ ಮಾಡಿದರೊ |
ಸರುವದಾ ಹರಿಯನ್ನು ಕಾಣುವರು ಕಂಗಳಲಿ |
ಪರಿಹಾಸ್ಯ ನುಡಿಯಲ್ಲ | ಪರಮ ಪವಿತ್ರರಿಗೆ ದೊರೆ |
ಸಿರಿ ವಿಜಯವಿಠ್ಠಲನು | ಕರವಿಡಿದು ಎನ್ನಭೀಷ್ಟವನಿತ್ತು |
ಪರಿಪಾಲಿಸಬೇಕೆಂದು ಭಕ್ತ ಕೇಳಿದನು ||1||
ದ್ವಿತೀಯ ವಚನ

ಜಲಜನಾಭನ ರಥದ ದಡದ ಮೇಲೆ ನಿಲ್ಲಿಸಿ |
ಜಲದೊಳಗೆ ತಾ ಮುಳುಗಿ ಅಕ್ರೂರ ಕಣ್ಣು ತೆರೆಯೆ |
ಕಲುಷವರ್ಜಿತನಾದ ಕೃಷ್ಣ |
ಹಲಧರನ ಸಹ ಮೇಳ ಸಂಭ್ರಮದಿ | ಜಲದೊಳಗೆ ತಾ ಕಂಡು |
ಕಲಕಲನೆ ಚಿಂತಿಸಿ ಕರುಣಸಾಗರನಾದ ಕೃಷ್ಣಗೆ |
ನಾ ಪೇಳಿದ ಮಾತು ನಡಿಸಿ |
ಬಲವಂತದಲಿ ಬಿದ್ದ ಭವರೋಗ ವೈದ್ಯನ ಮಾತೆ |
ಲಲನಾಮಣಿಗೆ ಏನು ಹೇಳುವೆನು |
ಸುಲಭವಾಗಿ ಎಮಗೆ ಅಭೀಷ್ಟಪ್ರದವಿದು |
ಬಾಲಕರು ಸುಲಲಿತಾಂಗೇರು ಸುಂದರರು
ಎಂದೆನುತ ತಂದೆ ನಂದಗೋಪನು |
ಕೇಳೆ ಮಂದಮತಿ ಏನು ಪೇಳುವೆನು ಎನುತಲಕ್ರೂರ
ಯೋಚಿಸಿ ಮನದಲಿ ಚಿಂತೆಯಗೊಂಡು |
ಹನುಮೇಶ ವನಜಾಕ್ಷ | ಘನಮಹಿಮ ಎನ್ನ ಮನದ ಚಿಂತೆಯನು
ಹನನವ ಮಾಡಿ ಎನ್ನ ಕೈಪಿಡಿಯಲಾಗದೆ ಈಗ ಎನುತ |
ಮೇಲೇಳೆ ಸನಕ ಸನಂದನ ಸನತ್ಕುಮಾರ ಸಹ |
ವನಜ ಸಂಭವ ಜನಕ ವೈಕುಂಠಪತಿ ಕೃಷ್ಣ |
ಕನಕ ರಥದ ಮೇಲೆ ನಿಂತಿದ್ದು ತಾ ಕಂಡು |
ಕರವೆರಡು ಜೋಡಿಸಿ | ಭರದಿ ಭಕ್ತಿಯಗೊಂಡು |
ನರಜನ್ಮ ಹುಳು ನಿನ್ನ ಮಹಿಮೆಗಳ ಅರಿಯದೆ |
ಜಲದೊಳಗೆ ನೀ ಬಿದ್ದಿ ಎನುತಲೀ ಯೋಚಿಸಿದೆ |
ಪರಮಗುಣ ಪರಿಪೂರ್ಣ ಪತಿತಪಾವನ ಎನ್ನ |
ಚರಣದ ಮಹಿಮೆಗಳ |
ಅರಿಯಳು ಸಿರಿದೇವಿ ನರರೊಳಗೆ ಬಲುಹೀನ
ನಾ ನಿನ್ನ ಮಹಿಮೆಗಳ
ಅರಿತು ಪೇಳುವದಕ್ಕೆ ಅರಹ | ನಲ್ಲವೊ ಕೃಷ್ಣ
ಮರಣದಲಿ ಅಜಮಿಳಗೆ
ವಲಿದಿಯಂತೆ ನೀ ಎನಗೆ ತ್ವರಿತದಲಿಜ್ಞಾನವನು
ದಯಮಾಡ ಬೇಕೈ |
ಗಜರಾಜ ಅರ್ಭಕ ಧ್ರುವರಾಯ ನಿಜಜ್ಞಾನಿ
ಪ್ರಹ್ಲಾದ ನಿಜಮುನಿ ಶುಕಾಚಾರ್ಯರಂತೆ |
ಭಜಿಸುವ ನಾನಲ್ಲ | ಅಜಜನಕ ಅಪ್ರಾಕೃತ
ಅಕಲಂಕ ಚರಿತ ಅಮರೇಂದ್ರ ವಂದಿತ |
ಭುಜಗಶಯನ ಭೂಸುರವಂದ್ಯ ಭುವನತ್ರಯ
ಪಾಲಾ ವಿಜಯನ ರಥವನ್ನು ಸಾರಥಿಯಾಗಿ
ವಿಜಯ ಪಾರ್ಥರಿಗಿತ್ತು ಪರಿಪಾಲಿಪಾ
ದಯಾಸಮುದ್ರ ವಿಜಯವಿಠ್ಠಲನೇ||2||
ತೃತೀಯ ವಚನ

ಅರವಿಂದನಾಭ ಕೃಷ್ಣ ಅಖಿಲಜನ ಪರಿಪಾಲ | ಕೃಪಾ ಸಮುದ್ರ |
ಶರದಿಂದು ನಿಭವಕ್ತ್ರ ರಾಜೀವದಳ ನೇತ್ರ ಲಕ್ಷ್ಮೀ ಕಳತ್ರ |
ಪರಿಪಾಲಿಸಬೇಕೆನ್ನ | ಪಾವನ ಚರಿತ್ರ |
ಸುರಪತಿಗೆ ಅಸುರರ ಬಲನೀಗಿ ಆ | ವಿರಂಚಿ ಬಳಿಗೆ |
ಶರಣೆಂದು ವರವೊಂದು ಕೇಳಿದೆ ವೈಕುಂಠಪತಿ ಕೃಷ್ಣ |
ತರಳನಾಗವತರಿಸಿ | ಸರ್ವಜನ ಕಂಟಕ ಕಂಸಾದಿಗಳ ಗೆಲಿದು |
ಹರುಷದಿಂದೆನಗೆ ದರುಶನವ ಕೊಟ್ಟ | ಪರಮಾತ್ಮ ನಿನ್ನ ಪಾದ |
ಸರಸಿಜದೊಳು ಚಿತ್ತವಿರುವಂದದಲಿ |
ಪರಮ ದಯಾಕರ ನಿನ್ನ ಮಹಾ ಮಹಿಮೆಗಳ |
ಅರಿತವರಿಲ್ಲವೊ ಈ ಭುವನತ್ರಯದೊಳಗೆ
ಗರ್ವಿಷ್ಠನಾಗಿ ಮಲಗಿದವನಲ್ಲಿ |
ಕರಿರಾಜವರದ ಕಾಮಿತ ಫಲಪ್ರದ
ತರಳತನವನು ಬಿಟ್ಟು ವೈಕುಂಠದೊಳಗೆ
ಮೆರೆದ ಸಂದರುಶನ | ಭರದಿ ಭಕ್ತಿಭಾವದಲಿ
ಕೇಳ್ವ | ತ್ವರಿತದಲಿ ದಯಮಾಡಿ |
ಭರದಿ ಪಾಲಿಸಬೇಕೆನ್ನ | ಭಕ್ತಜನ ವತ್ಸಲನೆ ಎನಲಾ ಮಾತಿಗೆ |
ಮನುಮಥಜನಕ ಇನ | ಚಂದ್ರ ನೇತ್ರ ಇಂದಿರೆ ಅರಸ |
ಹನುಮೇಶ ಕನಕಮಯವಾದ ಪೀತಾಂಬರ | ಜನಿವಾರ |
ಅನೇಕ ಅತರಿಗಳ ಗೆಲಿವ ಕನಕಮಯ | ಕಿರೀಟ ಚತುರ್ಭುಜ |
ವನಮಾಲೆ ಹಾಟಕದ | ಕಟಕ ರತ್ನಮಯದುಂ | ಗುರ
ಪನ್ನಗಶಯ್ಯ ಉನ್ನತೋನ್ನತ ಮಹಿಮ
ಕನಕಾಂಗಿ ಯಶೋದೆಗೆ | ತೋರಿದ ವಿಶ್ವರೂಪಪ್ರದ
ಅನಿಮಿಷರ ಅರಸ ಅಹಿವೈರಿ ವಾಹನ
ಅಚ್ಯುತ ಆನಂದ | ಗಿರಿ ನಿಲಯ |
ಘನಘನ ಶಾರಂಙ್ಗಪಾಣಿ ವಿಜಯವಿಠ್ಠಲರೇಯ ತೋರಿದನು
ತನ್ನ ಚರಣ ಸೇವಕನಾದ ಮುಚಕುಂದ
ಚಕ್ರವರ್ತಿಗೆ ತನ್ನ ನಿಜರೂಪವ||3||

ಚತುರ್ಥ ವಚನ
ಆನಂದತೀರ್ಥ ಮುನಿವಂದ್ಯ | ಜ್ಞಾನಿಗಳ ವಲ್ಲಭ |
ದೀನಜನ ಮಂದಾರ ನಾ | ನಿನ್ನ ಮೊರೆಹೊಕ್ಕು ಧೇನಿಸಲರಿಯೆ |
ಆನೆಯನು ಆದರದಿ ಕಾಯ್ದ ಶ್ರೀನಿವಾಸ |
ಸಾನುರಾಗದಿ ಪ್ರಹ್ಲಾದಗೊಲಿದ ಶ್ರೀನಿಧಿ ನರಸಿಂಹ |
ಅನಾದಿ ಕಾಲದಿ ತಂದೆ ಬಂಧು ಬಳಗವು ಎಂದೆ |
ಮಾನಿನಿ ದ್ರೌಪದಿ ಮೊರೆ ಇಟ್ಟಾಗ ಧ್ವನಿ ಕೇಳಿ |
ಮಾನಿನಿ ಮಣಿ ಲಕುಮಿಗ್ಹೇಳದೆ |
ಆನಂದಮಯನು ಅಕ್ಷಯವಿತ್ತು ಆಗ ಪರಿಪಾಲಿಸಿದಿ ಅದರಂತೆ |
ಮಾನಹೀನನೆಂದು ನಿರಾಕರಿಸದೆ | ಧ್ಯಾನಕ್ಕೆ ಒಳಗಾಗಿ |
ಮೌನಿಜನರನು ಕಾವ ಕ್ಷೋಣೀಶ ಮಾಣಿಕ್ಯ ಮಕುಟ ಕುಂಡಲಧರ |
ಅಣಿ ಮುತ್ತಿನ ಹಾರ ವನಮಾಲಿ ಸಿರಿ ತುಳಸಿ |
ಪರಿಮಳ ಸಿರಿಗಂಧ ಉದರದಲಿ ಬೆಳಗುವ |
ಉಪೇಂದ್ರ ನಾಮ ಕೃಷ್ಣ ಉರಗೇಶಶಯನಾ |
ನಿನ್ನ ದಾಸರದಾಸನೆಂದೆನುತ | ಕಾಣಸಿ ನಿನ್ನ ನಿಜರೂಪ |
ಎನ್ನ ಹೃದಯ ಪದಕದೊಳಗಿಟ್ಟು ಸಾನುರಾಗದಿ
ನಿನ್ನ ಸ್ತೋತ್ರ ಮಾಡುವ ಭಕ್ತಗಣದೊಳಗೆ ನಿಲ್ಲಿಸೊ |
ನಿನ್ನ ಮತ್ತೊಂದು ಪದಾರ್ಥ ಕೇಳುವವನಲ್ಲ |
ತೀರ್ಥ ತೀರ್ಥಗಳಲ್ಲಿ ಮುಳುಗಿ ಬಂದವನಲ್ಲ |
ಸಾರ್ಥಕವಾದಂಥ ಕೃತ್ಯ ಮಾಡುವನಲ್ಲ |
ಸಾಧುಜನಸಂಗದಲಿ ಸೇರಿ ಪಾಡಿದವನಲ್ಲ |
ಈ ನುಡಿ ಸತ್ಯವೇ ಲೇಸು ಪುಸಿಯಲ್ಲ | ಮಲ್ಲಮಲ್ಲರ ಗೆಲಿದ
ಮಾಧವನು ನೀನಲ್ಲದೆ ಇನ್ನೊಂದು ದೈವವಿಲ್ಲದ ಮಧ್ವ
ಮುನಿ ಹೃದಯಾಟ್ಟ ಪೀಠದೊಳು ವಾಸ ಮಾಡುವ ದೊರೆ
ಉದ್ಧರಿಸಬೇಕೆನ್ನ ವಿಜಯವಿಠ್ಠಲನೆ ||4||

ಐದನೇ ವಚನ
ಹರಿ ನಿನ್ನ ಚರಣ ಸೇವಕರ ಸೇವಕನೆನುತ |
ಕರಿಯಬೇಕೆನ್ನ ಹಿರಿಯರೂ |
ಮರಣಕಾಲಕ್ಕೆನಗೆ ಮತ್ತೋರ್ವ ವಿಷಯದಲಿ
ಇಡಲಾಗದ ಮನಸು ಸರ್ವದಾ ನಿನ್ನ |
ಚರಣಾರವಿಂದ ದ್ವಂದ್ವದಲಿ | ಭರದಿಂದ ಮುದ್ರೆಯನಿಟ್ಟ |
ಕಾಗದದಂತೆ ಹತ್ತಿರಿರಬೇಕೆನುತ ತುತಿ ಮಾಡುವೆ ನಿನ್ನ |
ಅರವಿಂದ ಗೋವಿಂದ ಮುಕುಂದ
ಮುಚಕುಂದ ವರದ ನಿತ್ಯಾನಂದ ವಿಗ್ರಹ |
ಸರಸಿರುಹಾಕ್ಷ ಸಜ್ಜನ ಪರಿಪಾಲಾ |
ಅರವಿಂದಾಸನನಯ್ಯ ಅಮರೇಂದ್ರ
ಪೂಜ್ಯ ಅವಗುಣ ವರ್ಜ ಅಕಳಂತ |
ಚರಿತ ಆದಿಪುರುಷ ಮಧ್ಯಾಂತರಹಿತ
ಮಹಾನುಭಾವ ಮಧ್ವೇಶ |
ಕರಿರಾಜ ಪರಿಪಾಲ ಕಂಸಮರ್ದನ ಕೃಷ್ಣ
ಕರುಣಾಳು ನೀನಲ್ಲದಿನ್ನೋರ್ವ ದೊರೆಯಿಲ್ಲ |
ಈ ನುಡಿಯು ಪುಸಿಯಲ್ಲ |
ಭರದಿಂದ ನೀ ಪರಿಪಾಲಿಸಬೇಕಲ್ಲದೆ ಕರ
ಪಿಡಿದು ಕಾಯ್ವರನ ಕಾಣೆ
ನಿನ್ನಾಣೆ ಹೇ ಚಕ್ರಪಾಣಿ | ನಾ ನಿನ್ನ
ಚರಣಾವಿಂದವನು ಭಜಿಪ ವೀಣೆ | ಈ
ಕ್ಷೋಣಿಯೊಳಗೆನ್ನ ನರಜನ್ಮವು ಬಾರದೆ ಪರಿಪಾಲಿಸಬೇಕೆನ್ನ |
ಪರಮ ಪವಿತ್ರ ಪಂಕೇರುಹನೇತ್ರ ಸಂಕಟಗಳ ಕಳೆದು |
ಸೌಖ್ಯಪದ ವೈಕುಂಠದೊಳಗೆನ್ನ ನಿಲ್ಲಿಸೊ |
ಭರದಿಂದ ನಿನ್ನ ನಾಮದ ಭಂಡಾರ ಕದ್ದ ಕಳ್ಳನೆನೆಸಿ |
ಚರಣದ್ವಯಗಳಿಗೆ ಭಕ್ತಿಸಂಕುಲ ಹಾಕಿ
ಅರವಿಂದನಾಭ ನಿನ್ನ ಅಮರನೇ ವೈಕುಂಠ |
ಕಾರಾಗೃಹದೊಳಗೆ ವಾಸ ಮಾಡಿಸು ದೇವ ಕೋಟಿ |
ವರುಷಕೆ ಇದುವೆ ಎನಗೆ ಹರುಷ ಆನಂದಮಯ |
ವರವ ಕೊಡುವದಕ್ಕರಹ ಪುರುಷ ನೀನಲ್ಲದೆ
ಇನ್ನೋರ್ವನಿಲ್ಲ ವಿಜಯವಿಠ್ಠಲನೇ ||5||