ಹರಿ ಪರದೈವ ಚತುರ್ದಶ ಲೋಕಕೆ
Category: ಶ್ರೀಕೃಷ್ಣ
Author: ವಿಜಯದಾಸ
ಹರಿ ಪರದೈವ ಚತುರ್ದಶ ಲೋಕಕೆ |
ಉರಗನ ಮುಂಡಿಕೆ ತುಳುಕಿ ಪೇಳುವೆ ನಾನು
ಮುನಿಗಳೆಲ್ಲ ನೆರೆದು ಸದ್ವರವ ಮಾಡುತಲಿ |
ಮನ ಬಂದ ಹಾಗೆ ಅರ್ಪಿಸುತಿರಲು |
ಮುನಿ ನಾರದನು ಕೇಳೆ ಭೃಗು ಮುನಿಯನು ಕಳುಹಿ |
ವನಜನಾಭನೆ ದೈವವೆಂದು ನಿರ್ಣೈಸಿದರು||1||
ದುರ್ವಾಸ ಮುನಿಪಗೆ ಚಕ್ರ ಎಡೆಗೊಂಡಿರಲು |
ಉರ್ವಿಯನು ತಿರುಗಿದನು ಅಜ ಗಿರೀಶಾ ||
ಗೀರ್ವಾಣರಾದ್ಯರು ಪರಿಹರಿಲಾರದಿರೆ |
ಸರ್ವೋತ್ತಮನೆ ಒಬ್ಬ ಹರಿಯೆಂದು ಸಾರಿದರು ||2||
ಜೀವನದೊಳಗೆ ಕರಿ ಬಾಧೆಯನು ಬಡುತಲಿ |
ಕಾವವಾತನೆ ದೈವ ಎಂದು ಕೂಗೆ ||
ನಾವು ತಾವು ಎಂದು ಎಲ್ಲರು ಸುಮ್ಮನಿರೆ |
ತಾವ ಕಾಕ್ಷನೆ ಕಾಯ್ದಾ ಪರದೇವತೆ ಎಂದು ||3||
ಹಯಮುಖನು ವೇದಗಳು ಕದ್ದೌಯೆ ಸಕಲರು |
ಭಯಬಿದ್ದು ನಿತ್ರಾಣರಾಗಿರಲು ||
ಜಯದೇವಿ ರಮಣನು ವೇದವನು ತಂದು ಜಗ |
ತ್ರಯಕೆ ಒಡೆಯನೆನೆಸಿಕೊಂಡ ಪರನೆಂದು ||4||
ಮೊದಲು ನಿರ್ಣಯವಾಗಿ ಇರಲಿಕ್ಕೆ ಮಂದಮತಿ |
ಮದಡ ಮನುಜರೆಲ್ಲ ನೆಲೆಗಾಣದೆ ||
ಮದನ ಪಿತ ವಿಜಯವಿಠ್ಠಲನ ಒಲಿಸಿಕೊಳ್ಳದೆ |
ಮದ ಗರ್ವದಲಿ ನುಡಿದು ನರಕದಲ್ಲಿ ಬೀಳುವರೂ||5||