ಅರ್ಥಸನ್ಯಾಸಿಯಾದಡೇನಯ್ಯಾ,

Category: ವಚನಗಳು

Author: ಅಕ್ಕಮಹಾದೇವಿ

ಅರ್ಥಸನ್ಯಾಸಿಯಾದಡೇನಯ್ಯಾ,
ಆವಂಗದಿಂದ ಬಂದಡೂ ಕೊಳದಿರಬೇಕು.

ರುಚಿಸನ್ಯಾಸಿಯಾದಡೇನಯ್ಯಾ,
ಜಿಹ್ವೆಯ ಕೊನೆಯಲ್ಲಿ ಮಧುರವನರಿಯದಿರಬೇಕು.

ಸ್ತ್ರೀ ಸನ್ಯಾಸಿಯಾದಡೇನಯ್ಯಾ,
ಜಾಗ್ರ ಸ್ವಪ್ನ ಸುಷುಪ್ತಿಯಲ್ಲಿ ತಟ್ಟಿಲ್ಲದಿರಬೇಕು.

ದಿಗಂಬರಿಯಾದಡೇನಯ್ಯಾ,
ಮನ ಬತ್ತಲೆ ಇರಬೇಕು.

ಇಂತೀ ಚತುರ್ವಿಧದ ಹೊಲಬರಿಯದೆ
ವೃಥಾ ಕೆಟ್ಟರುಕಾಣಾ ಚೆನ್ನಮಲ್ಲಿಕಾರ್ಜುನಾ.