ಮಾನವಸಂತಾನದೆಡೆಗೆ ಎನಿತು
Category: ಶ್ರೀದೇವಿ
Author: ವಚನವೇದ
ಮಾನವ ಸಂತಾನದೆಡೆಗೆ ಎನಿತು ಕರುಣೆ ನಿನ್ನದು
ಅದ ನೆನೆದರೆ ಕಂಬನಿಯೆ ಕೋಡಿಯೊಡೆದು ಹರಿವುದು ||
ಹುಟ್ಟಿದಂದಿನಿಂದ ನಾನು
ನಿನ್ನಾಣೆಯ ಮೀರಿದೆ
ಆದರೂ ನೀ ಅಕ್ಕರೆಯಲಿ
ತಾಯ್ತನವನೆ ತೋರಿದೆ |
ಮಧುರ ವಚನದಿಂದ ಮನವ
ಸಂತೈಸುತ ನಲಿಸಿದೆ
ಇದ ನೆನೆದರೆ ಕಂಬನಿಯೆ
ಕೋಡಿಯೊಡೆದು ಹರಿದಿದೆ ||
ನಿನ್ನೊಲವಿನ ಹೊರೆಯ ಹೊತ್ತು
ನಾನು ಬಹಳ ಬಳಲಿದೆ
ಇನ್ನು ಮುಂದೆ ಹೊರಲಾರದೆ
ಎದೆಯು ನರಳಿ ಕೊರಗಿದೆ |
ನಿನ್ನೊಲವಿನ ಕರಸ್ಪರ್ಶದಿ
ಈ ನೋವನು ನೀಗಿಸು
ನಿನ್ನ ಪಾದಪದ್ಮದಲ್ಲಿ
ನನ್ನನಿರಿಸಿ ಪಾಲಿಸು ||