ಮಾನವಸಂತಾನದೆಡೆಗೆ ಎನಿತು

Category: ಶ್ರೀದೇವಿ

Author: ವಚನವೇದ

ಮಾನವ ಸಂತಾನದೆಡೆಗೆ ಎನಿತು ಕರುಣೆ ನಿನ್ನದು
ಅದ ನೆನೆದರೆ ಕಂಬನಿಯೆ ಕೋಡಿಯೊಡೆದು ಹರಿವುದು ||

ಹುಟ್ಟಿದಂದಿನಿಂದ ನಾನು
ನಿನ್ನಾಣೆಯ ಮೀರಿದೆ
ಆದರೂ ನೀ ಅಕ್ಕರೆಯಲಿ
ತಾಯ್ತನವನೆ ತೋರಿದೆ |
ಮಧುರ ವಚನದಿಂದ ಮನವ
ಸಂತೈಸುತ ನಲಿಸಿದೆ
ಇದ ನೆನೆದರೆ ಕಂಬನಿಯೆ
ಕೋಡಿಯೊಡೆದು ಹರಿದಿದೆ ||

ನಿನ್ನೊಲವಿನ ಹೊರೆಯ ಹೊತ್ತು
ನಾನು ಬಹಳ ಬಳಲಿದೆ
ಇನ್ನು ಮುಂದೆ ಹೊರಲಾರದೆ
ಎದೆಯು ನರಳಿ ಕೊರಗಿದೆ |
ನಿನ್ನೊಲವಿನ ಕರಸ್ಪರ್ಶದಿ
ಈ ನೋವನು ನೀಗಿಸು
ನಿನ್ನ ಪಾದಪದ್ಮದಲ್ಲಿ
ನನ್ನನಿರಿಸಿ ಪಾಲಿಸು ||