ಶ್ರೀ ವಿವೇಕಾನಂದ ಗುರುವರ

Category: ಶ್ರೀಸ್ವಾಮಿ ವಿವೇಕಾನಂದ

Author: ಕುವೆಂಪು

ಶ್ರೀ ವಿವೇಕಾನಂದ ಗುರುವರ ನವಯುಗಾಚಾರ್ಯ
ರಾಮಕೃಷ್ಣರ ಭೀಮಶಿಷ್ಯನೆ, ವೀರವೇದಾಂತಿ
ಭಾರತಾಂಬೆಯ ಧೀರಪುತ್ರನೆ
ಸಾಧುಭೈರವನೆ ಸ್ಥೈರ್ಯದಚಲವೆ
ಧೈರ್ಯದಂಬುಧಿ, ಜಯತು ಜಯ ಜಯತು ||

ಚಿದ್ಋತಾಗ್ನಿಯ ಚಂಡಕಾಂತಿಯೆ ಮೇರುಸಂನ್ಯಾಸಿ
ಭರತಖಂಡದ ನಂದಿದಿದ್ದಲಿಗಿತ್ತೆ ತೇಜವನು
ಬೊಮ್ಮದಂಬುಧಿಗಲೆಯನೀಯುವ ಭರದ ಬಿರುಗಾಳಿ
ಬೂದಿಮುಚ್ಚಿದ ಭರತಭೂಮಿಯನೂದಿ ಬೆಳಗಿಸಿದೆ ||

ಭರತಖಂಡದೊಳರಚುತಲೆಯುವ ಮನುಜಕುರಿಗಳಿಗೆ
ಸಿಂಹಹೃದಯವನಿತ್ತು ಗರ್ಜಿಸುವಂತೆ ನೀ ಮಾಡಿ
ಕುರಿಯದೊಡ್ಡಿಯ ಮುರಿದು ಸಿಂಹದ ಗುಹೆಯ ವಿರಚಿಸಿದೆ
ಸಿಂಹಹೃದಯನೆ ಶ್ರೀ ವಿವೇಕಾನಂದಯೋಗೀಂದ್ರ ||

ನಿಶೆಯ ಗಗನದೊಳಿರುವ ತಾರೆಯ ತೆರದಿ ರಂಜಿಸಿದೆ
ಜಗದ ಕಂಗಳು ನೋಡಲಾರದೆ ನಿನ್ನ ತೇಜವನು
ವಿಸ್ಮಯಾಶ್ಚರ್ಯದಲಿ ನಿಂತವು ಮೂಗುವೆರಗಾಗಿ
ನಿನ್ನ ಮಹಿಮೆಯ ಸವಿವ ಸೆರೆಯೇ ಮುಕ್ತಿ, ವರಯೋಗಿ ||

ಮೊರೆದು ಗರ್ಜಿಪ ಕಡಲವಾಣಿಯು ನಿನ್ನ ವರವಾಣಿ
ಕಾರಮಿಂಚನು ನಗುವ ತೇಜವು ನಿನ್ನ ಮೈಕಾಂತಿ
ಆಳವಂಬುಧಿಯಾಳ, ಮೇರೆಯು ನಭದ ವಿಸ್ತಾರ
ಮಂದರಾದ್ರಿಯ ಮೀರಿದಚಲನು ನೀನು, ಯೋಗೀಂದ್ರ ||

ಬ್ರಹ್ಮವಿದ್ಯೆಯ ದಿವ್ಯದೀಪ್ತಿಯ ದೇಶದೇಶದಲಿ ಹರಡಿ,
ಅಭಯವನೀಯುತಮೃತವ ಸುರಿದು ಪಾಲಿಸಿದೆ
ಗಗನಕೆತ್ತಿದೆ ಭಾರತಾಂಬೆಯ ಕೀರ್ತಿಕೇತನವ
ಓಜೆ ತುಂಬಿಹುದಾರ್ಯಮಾತೆಯ ಶ್ರೀನಿಕೇತನವ ||

ನಿನ್ನ ಹೆಸರದೆ ಶಕ್ತಿಯೀಯುವ ದಿವ್ಯತರಮಂತ್ರ ನಿನ್ನ
ಮಾರ್ಗವೆ ಮುಕ್ತಿದಾಯಕವಾದ ವರಮಾರ್ಗ ನಮ್ಮ
ಹೃದಯಕೆ ಹೃದಯ ನೀನಯ್, ಶಕ್ತಿಸಾಗರನೆ
ಯಮನ ನುಂಗಿದ ರಾಜಯೋಗಿಯೆ, ರುದ್ರಸಂನ್ಯಾಸಿ ||

ನಿನ್ನ ಧೈರ್ಯ ಸ್ಥೈರ್ಯ ದೃಢತೆಯು, ನಿನ್ನ ಪವಿಶಕ್ತಿ
ಭಾರತೀಯರಿಗಿಂದು ಬೇಕಾಗಿಹುದು ದಿವ್ಯಾತ್ಮ
ರುದ್ರನರ್ತನವೆಸಗು ಹೃದಯದಿ, ಬುದ್ಧಿ ಭೈರವನೇ
ರುದ್ರಭೂಮಿಗಳಾಗಲೆಮ್ಮೀ ಕ್ಷುದ್ರಹೃದಯಗಳು ||