ಓ ಬಂದ ಶ್ರೀಗುರು ವಿವೇಕಾನಂದ

Category: ಶ್ರೀಸ್ವಾಮಿ ವಿವೇಕಾನಂದ

Author: ಜಿ.ಎಸ್. ಶಿವರುದ್ರಪ್ಪ

ಓ ಬಂದ ಶ್ರೀಗುರು ವಿವೇಕಾನಂದ
ಆ ಧ್ರುವಮಂಡಲದಿಂದ !!

ಮೊರೆಯುವ ಕಡಲಿಗೆ ಹಾರಿ ಧುಮುಕಿದ
ತೆರೆಗಳ ಸೀಳಿದ, ಈಜಿದ, ನುಗ್ಗಿದ
ಗಟ್ಟಿ ಬಂಡೆಯಲಿ ಬೇರೂರಿದ
ಬಾನೆತ್ತರ ಬೆಳೆದ
ಬೆಳಕಿನ ಗೋಪುರವಾದ!!

ದಕ್ಷಿಣೇಶ್ವರದ ವಿದ್ಯುತ್ ಕೇಂದ್ರದ ಕೋಶಾಗಾರ
ಪೂರ್ವಪಶ್ಚಿಮಕೆ ತಂತಿಯ ಹಾಯಿಸಿ
ಕೊಟ್ಟನು ಬೆಳಕಿನ ಆಹಾರ
ಕೋಲಂಬೋದಿಂದಾಲ್ಮೊರದ ತನಕವು
ಇವನದೆ ಮಿಂಚಿನ ತೇರು
ಇವನಡಿಗಳ ನುಡಿಗಳ ಸ್ಪರ್ಶಕೆ ಝಗ್ಗನೆ
ಹತ್ತದೆ ಇದ್ದವರಾರು?!!

ವಜ್ರದ ಮೈ, ಉಕ್ಕಿನ ನರ, ಕುಡಿಮಿಂಚಿನ ಕಣ್ಣು
ಗುಡುಗಿನ ದನಿ, ಹೊನಲಿನ ನಡೆ,
ಎದೆ ಬೆಳದಿಂಗಳ ಹಣ್ಣು
ಕವಿ, ಋಷಿ, ಯೋಗಿ, ಸಂತ
ಲೋಕಾದ್ಯಂತ ನಡೆವ ವಸಂತ||