ಶಕ್ತನಾದರೆ
Category: ಶ್ರೀಕೃಷ್ಣ
Author: ಪುರಂದರದಾಸ
ಶಕ್ತನಾದರೆ ನೆಂಟರೆಲ್ಲ ಹಿತರು | ಅ-
ಶಕ್ತನಾದರೆ ಅವರೆ ವೈರಿಗಳು ಲೋಕದಲಿ ||
ಕಮಲ ಆರ್ಕನಲಿರುವ ಕಡು ನೆಂಟತನದಿಂದ
ವಿಮಲ ಜಲದೊಳಗೆ ಅದು ಆಡುತಿಹುದು |
ಕ್ರಮಗೆಟ್ಟು ನೀರಿಂದ ತಡಿಗೆ ಬೀಳಲು ರವಿಯ
ಅಮಿತ ಕಿರಣಗಳಿಂದ ಕಂದಿಹೋಗುವುದು ||
ವನಸುತ್ತಿ ಸುಡುವಾಗ ವಾಯು ಬೀಸಲು ಉರಿಯು
ಘನ ಪ್ರಜ್ವಲಿಸುತಿಹುದು ಗಗನಕಡರಿ |
ಮನೆಯೊಳಿಹ ದೀಪಕ್ಕೆ ಮಾರುತನು ಸೋಂಕಿದರು
ಘನಶಕ್ತಿಯುಡುಗಿ ತಾ ನಂದಿಹೋಗುವುದು ||
ಕರಿಯ ಕಾಯಿದ ಹರಿಯ ಕರುಣತಪ್ಪಿದ ಮೇಲೆ
ಮರೆಯ ಹೊಕ್ಕರು ಕಾವ ಮಹಿತರಾರಯ್ಯ |
ವರದ ಶ್ರೀ ಪುರಂದರವಿಟ್ಠಲನು ಒಲಿದಿರಲು
ಸರುವ ಜನರೆಲ್ಲ ಮೂಜಗದಿ ಹಿತರು ||