ಯಾರಿದ್ದರೇನಯ್ಯ ನೀನಲ್ಲದೆನಗಿಲ್ಲ
Category: ಶ್ರೀಕೃಷ್ಣ
Author: ಪುರಂದರದಾಸ
ಯಾರಿದ್ದರೇನಯ್ಯ ನೀನಲ್ಲದೆನಗಿಲ್ಲ '
ಕಾರುಣ್ಯನಿಧಿ ಹರಿಯೇ ಕೈಯ ಬಿಡಬೇಡ ॥
ದುರುಳಕೌರವನಂದು ದ್ರುಪದಜೆಯ ಸೀರೆಯನು
ಕರದಿಂದ ಸೆಳೆಯುತಿರೆ ಪತಿಗಳೆಲ್ಲ
ಗರಹೊಯ್ದಂತಿರ್ದರಲ್ಲದೆ ನರಹರಿಯೆ
ಕರುಣದಿಂ ನೀನಲ್ಲದಿನ್ಕಾರು ಕಾಯ್ದವರು ॥
ಅಂದು ನೆಗಳಿನ ಬಾಧೆಯಿಂದ ಗಜರಾಜನನು
ತಂದೆ ನೀ ವೈಕುಂಠದಿಂದ ಬಂದು
ಇಂದಿರೀಶನೆ ಚಕ್ರದಿಂದ ನೆಗಳಿನ ಬಾಯ
ಸಂದಿಯನು ಸೀಳಿ ಪೊರೆದೆಯಲ್ಲೋ ಹರಿಯೆ ॥
ಅಜಮಿಳನು ಕುಲಗೆಟ್ಟು ಕಾಲದೂತರು ಬರಲು
ನಿಜಸುತನ ಕರೆಯೆ ನೀನತಿವೇಗದಿ
ತ್ರಿಜಗದೊಡೆಯನೆ ಪುರಂದರವಿಟ್ಠಲ ಕರುಣದಲಿ
ನಿಜದೂತರ ಕಳುಹಿ ಕಾಯ್ದೆ ಗಡ ಹರಿಯೆ ॥