ಏಳು ನಾರಾಯಣ ಏಳು ಲಕ್ಷ್ಮೀರಮಣ
Category: ಶ್ರೀಕೃಷ್ಣ
Author: ಕನಕದಾಸ
ಏಳು ನಾರಾಯಣ ಏಳು ಲಕ್ಷ್ಮೀರಮಣ
ಏಳು ಶ್ರೀಗಿರಿಯೊಡೆಯ ವೆಂಕಟೇಶ
ಏಳಯ್ಯ ಬೆಳಗಾಯಿತು ||ಪ||
ಕಾಸಿದ್ದ ಹಾಲುಗಳ ಕಾವಡಿಯಲಿ ತುಂಬಿ
ಲೇಸಾಗೆ ಹಾಲ್ಮೊಸರು ಬೆಣ್ಣೆಯಾ ಕಡೆದು
ಶೇಷಶಯನನೆ ಏಳು ಸಮುದ್ರ ಮಥನವ ಮಾಡು
ದೇಶ ಕೆಂಪಾಯಿತು ಏಳಯ್ಯ ಹರಿಯೆ ||1||
ಅರಳುಮಲ್ಲಿಗೆ ಜಾಜಿ ಪರಿಮಳದ ಪುಷ್ಪಗಳ
ಸುರರು ಸುಜನರೆಲ್ಲ ತಂದಿಹರು
ಅರವಿಂದ ಲೋಚನ ಮದನ ಗೋಪಾಲ ಕೃಷ್ಣ
ನೆರೆ ಕೋಳಿ ಕೂಗಿತು ಏಳಯ್ಯ ಹರಿಯೆ ||2||
ದಾಸರೆಲ್ಲರು ಬಂದು ದೂಳಿದರ್ಶನಗೊಂಡು
ಲೇಸಾಗಿ ತಾಳದಂಡಿಗೆ ಪಿಡಿದು
ಶ್ರೀಶಾದಿಕೇಶವನೆ ನಿನ್ನ ನಾಮವ ಸ್ಮರಿಸಿ
ಏಸೊಂದು ಸ್ತೋತ್ರವಗೈಯುತಿಹರೇಳಯ್ಯ ||3||