ಗಜೇಂದ್ರ ಮೋಕ್ಷ

Category: ಶ್ರೀಕೃಷ್ಣ

Author: ಕನಕದಾಸ

ಶ್ರೀನಾಥ ಪಾರ್ವತೀ ನಾಥ ಶರಣೆಂಬೆ ||ಪ||
ವಾಣಿ ಸರಸ್ವತಿಯ ಭಾರತಿಯ ಬಲಗೊಂಬೆ ||ಅ||

ನಾನು ಬಲ್ಲಷ್ಟು ಪೇಳುವೆನು ಈ ಕಥೆಯ
ಶ್ರೀನಾಥ ಗಜರಾಜಗೊಲಿದ ಸದ್ಗತಿಯ ||1||

ಚಪ್ಪನ್ನ ದೇಶದೊಳಗೆ ಉತ್ತಮವಾಗಿ
ಇಪ್ಪ ಗೌಳಿ ದೇಶದ ರಾಜ ಇಂದ್ರದ್ಯುಮ್ನ ||2||

ವೈರಾಗ್ಯ ಮೂಡಿ ಭೂಸುರರ ಸೇವಿಸುತ
ನಾರಾಯಣನ ಮನದಿ ನೆನೆದು ಮೈಮರೆತ ||3||

ಪುತ್ರ ಮಿತ್ರಾದಿ ಬಂಧುಗಳ ವರ್ಜಿಸಿದ
ನಿತ್ಯ ನರಹರಿಯ ಎಡೆಬಿಡದೆ ಚಿಂತಿಸಿದ ||4||

ಆನೆ ಕುದುರೆ ರಾಜ್ಯಗಳನೆ ವರ್ಜಿಸಿದ
ತಾನೆ ನದಿಗಿಳಿದು ಸ್ನಾನಾದಿಗಳ ಮಾಡಿ ||5||

ಸಂಧ್ಯಾವಂದನೆಗೈದು ಪದ್ಮಾಸನ ಹಾಕಿ
ಚಂದಾಗಿ ಧರಿಸಿದ ದ್ವಾದಶ ನಾಮಗಳ ||6||

ಇಂದಿರಾ ಪತಿಯ ಧ್ಯಾನದಿ ಅವನಿರುವಾಗ
ಬಂದನಾ ಎಡೆಗೆ ಅಗಸ್ತ್ಯಮುನಿವರೇಣ್ಯ ||7||

ಎದ್ದು ತನಗೆ ವಂದಿಸಲಿಲ್ಲವೆಂದೆನುತ
ಕುದ್ದು ಕುಂಜರನಾಗೆಂದು ಶಾಪವಿತ್ತ ||8||

ನಂದು ತಪ್ಪುಂಟು ಮಹರ್ಷಿಯೆ ಕಾಪಾಡು
ಮುಂದೆನಗೆ ವಿಶ್ಶಾಪವೆಂದು ಹೇಳೆನಲು ||9||

ವಿಷ್ಣು ಚಕ್ರವು ಬಂದು ನಿಮ್ಮ ಸೋಕಿದರೆ
ಆಕ್ಷಣ ವಿಶ್ಶಾಪವೆಂದು ಮುನಿ ನುಡಿದ ||10||

ಜ್ಞಾನವಡಗಿ ಅಜ್ಞಾನ ವೆಗ್ಗಳಿಸಿತು
ದಿನಪ ಮುಳುಗಿ ಕತ್ತಲೆ ಆವರಿಸಿದಂತೆ ||11||

ಧ್ಯಾನಿಸುತ ಹಿಂದು ಮುಂದಾಗಿ ನಿಂದಿರಲು
ಆನೆಯಾದನು ನೃಪನು ಆಕ್ಷಣದಿ ತಾನು ||12||

ಮೇಲುಗಿರಿ ಪರ್ವತವೆ ಕದಲಿ ಬಂದಂತೆ
ಮೇಲುಮದ ಕೀಳುಮದದಿಂದ ಘೀಳಿಟ್ಟು ||13||

ಹೆಣ್ಣಾನೆಗಳ ಕೂಡಿ ಸಂತತಿಯ ಪಡೆದು
ಹಣ್ಗೊನೆಗಳ ಮೆದ್ದು ತಣ್ಣನೆಯ ನೀರ್ಕುಡಿದು ||14||

ಕಂಡಕಂಡಲ್ಲಿ ಓಡುತಲಿ ಇಳಿಯುತಲಿ
ತುಂಡು ತುಂಡಾಗಿ ಮರಗಳನೆ ಮುರಿಮುರಿದು ||15||

ಹಿಂಡು ಹಿಂಡಾಗಿದ್ದ ಸತಿ ಸುತರ ಕೂಡಿ
ದಂಡು ದಾಳಿಯನಿಟ್ಟ ತೆರದಿ ಅಂಡಲೆಯೆ ||16||

ಬೆಂಡಾಗಿ ಬಾಯಾರಿ ಸುತ್ತಲೂ ನೋಡಿ
ಹೊಂಡ ಕಂಡತ್ತ ಧಾವಿಸಿತು ಸಕುಟುಂಬಿ ||17||

ಸುತ್ತಮುತ್ತ ಅಶ್ವತ್ಥ ಹೇರಳೆ ಕಿತ್ತಳೆ
ಒತ್ತಾಗಿ ದಾಳಿಂಬ ದ್ರಾಕ್ಷಿ ಖರ್ಜೂರ ||18||

ಬಾಗಿ ತೂಗುತ್ತ ಫಲವಾದ ಫಲವೆಲ್ಲ
ತೂಗಿ ಕರೆಯುತ್ತ ಮೇಲಾದ ಹೂವೆಲ್ಲ ||19||

ಉಲಿವ ಗಿಳಿ ಹಿಂಡುಗಳು ಕುಣಿವ ನವಿಲುಗಳು
ನಲವಿಂದ ಸರಗೈವ ಕೋಗಿಲೆಯ ದಂಡು ||20||

ದಂಡೆಯೊಳು ಒಳಗೊಂಡ ತಾವರೆಯ ಕೊಳಕೆ
ಶುಂಡಾಲವಿಳಿದು ನೀರೋಕುಳಿಯನಾಡಿ ||21||

ಸೊಂಡಿಲಿಂದಪ್ಪಳಿಸುತ ತೊತ್ತಳ ತುಳಿದು
ಹೊಂಡವನು ಕಲಕಿ ರಣಾಂಗಣಗೈದಾಗ ||22||

ಆ ಮಡುವಿನಲ್ಲಿದ್ದ ಶಾಪಗ್ರಸ್ತವಹ
ಮಾಮೊಸಳೆಯೊಂದು ಹಿಡಿಯಿತಾನೆಯ ಕಾಲ ||23||

ಕಾಲೆತ್ತಲೂ ಬರದು ಕಿತ್ತರೂ ಬರದು
ಆಲಿಟ್ಟುದನು ಕೇಳಿ ಸತಿಸುತರೆಲ್ಲ ||24||

ಒಗ್ಗೂಡಿ ಎಳೆದೆಳೆದು ಸೊರಗಿ ಸುಸ್ತಾಗಿ
ಕುಗ್ಗಿ ಕಂಗೆಟ್ಟು ಹಿಮ್ಮೆಟ್ಟಿ ನಿಂತಾಗ ||25||

ದೇವರಿಟ್ಟಂತಾಗಲಿ ನೀವು ತೆರಳಿರೆನೆ
ನೋವುಗೊಂಡವು ಬಂದ ದಾರಿಯ ಹಿಡಿದವು ||26||

ಇತ್ತ ಆ ಮಕರಿ ಕಚ್ಚುತ್ತ ಕಡಿಯುತ್ತ
ನೆತ್ತರಾಯಿತು ಮಡುವಾದ ಮಡುವೆಲ್ಲ ||27||

ಗಜರಾಜ ನನಗಿನ್ನು ದಿಕ್ಕಾರು ಎಂದು
ಅಜಪಿತಗೆ ಮೊರೆಯಿಟ್ಟಿತು ಪರಿಪರಿಯಿಂದ ||28||

ಈರೇಳು ಭುವನವನು ಕಾಯುವಾ ದೇವ
ನೀರೊಳಗೆ ಸಾಯುತಿಹೆ ಬದುಕಿಸೋ ಎನ್ನ ||29||

ವೇದ ಕದ್ದೊಯ್ದ ದಾನವನ ಛೇದಿಸಿದ
ವೇದವಿದ ಮತ್ಸ್ಯಾವತಾರಿ ಸಲಹೆನ್ನ ||30||

ಕಡೆಗೋಲು ಕುಸಿದಾಗ ಹಿಡಿದೆತ್ತಿ ನಿಂತ
ದೃಢದೇಹಿ ಕೂರ್ಮಾವತಾರಿ ಸಲಹೆನ್ನ ||31||

ಹಿರಣ್ಯಾಕ್ಷನ ಕೊಂದು ಧರಣಿಯನೆ ತಂದ
ವರಾಹಾವತಾರಿಯೆ ಬಂದು ಕಾಯೆನ್ನ ||32||

ರಕ್ಕಸನ ಸೀಳಿ ಕರುಳ ಮಾಲೆ ಧರಿಸಿದ
ಬೆಕ್ಕಸಬೆರಗಿನ ನೃಸಿಂಹಾವತಾರಿ ಕಾಯೆನ್ನ ||33||

ಬಲಿಯ ದಾನವ ಬೇಡಿ ಪಾತಾಳಕೆ ತುಳಿದ
ಕಲಿ ವಾಮನಾವತಾರಿಯೆ ರಕ್ಷಿಸೆನ್ನ ||34||

ತಂದೆ ಸಾವಿಂದ ಕ್ಷತ್ರಿಯರ ಕೊಲೆಗೈದ
ತಂದೆ ಪರಶುರಾಮಾವತಾರಿ ಸಲಹೆನ್ನ ||35||

ದಶಕಂಠನನೆ ಕೊಂದು ದರಣಿಜೆಯ ತಂದ
ದಾಶರಥಿ ರಾಮಾವತಾರಿ ಸಲಹೆನ್ನ ||36||

ವ್ಯಾಳನ ತುಳಿದು ಸೋಳಸಾಸಿರ ಹೆಣ್ಣ
ನಾಳಿನ ಕೃಷ್ಣಾವತಾರಿ ಕಾಯೆನ್ನ ||37||

ಕತ್ತಲೆ ಜಗದ ಕನ್ಯೆಯರ ವ್ರತಗೆಡಿಸಿದ
ಬತ್ತಲೆಯ ಬೌದ್ಧಾವತಾರಿ ಉಳಿಸೆನ್ನ ||38||

ಜಗವದುರೆ ಹಯವೇರಿ ದುಷ್ಟರನು ಕೊಂದ
ಮಿಗೆ ಚದುರ ಕಲ್ಕ್ಯವತಾರಿ ಎತ್ತೆನ್ನ ||39||

ಕರುಣಾಕರನೆ ಭಕ್ತ ವತ್ಸಲನೆ ಕಾಯೊ
ಮರೆಯದಿರು ಮಾಧವನೆ ಅಚ್ಯುತಾನಂತನೆ ||40||

ಇಂತು ಪ್ರಾಣದ ಹಂಗುದೊರೆದು ಚೀರ್ದಾಗ
ಕಂತುಪಿತ ಕೇಳಿ ಮಂತಾಡಿದಂತಾಗಿ ||41||

ಹಾಲ್ಗಡಲ ವಾಸಿ ಹಾವು ಹಾಸಿಗೆ ಬಿಟ್ಟು
ಪಾಲಿಸಲು ಪರಿತಂದ ಗಜೇಂದ್ರನ ಬಳಿಗೆ ||42||

ಹರನು ಪಾರ್ವತಿಯೊಡನೆ ವೃಷಭವನೇರಿ
ತ್ವರಿತದಿಂ ಬಂದರಲ್ಲಿಗೆ ಕಾತರದಿ ||43||

ದೇವಾನುದೇವತೆಗಳು ಮುನಿವರೇಣ್ಯರು
ಕಾವನಯ್ಯನ ಹಿಂದೆ ಬಂದರೋಡೋಡಿ ||44||

ನಕ್ರನ ಹಲ್ಲು ಮುರಿವಂತೆ ಜಗದೊಡೆಯ
ಚಕ್ರದಲಿಡಲು ಶಾಪ ವಿಮುಕ್ತಿ ದೊರಕಿತು ||45||

ಋಷಿ ದೇವಲನ ಶಾಪದಿಂ ಗಂಧರ್ವ
ಋಷಿ ಅಗಸ್ತ್ಯನ ಶಾಪದಿಂ ಪ್ರದ್ಯುಮ್ನ ||46||

ಇರ್ವರೂ ವಿಶ್ಯಾಪದಿ ಮೊದಲಂತಾದರು
ಸರ್ವರೂ ಆದಿಕೇಶವನ ಕೊಂಡಾಡಿದರು ||47||