ನಿಶ್ಚಿಂತನಾಗಬೇಕಂತಿ

Category: ಜಾನಪದ ಗೀತೆ

Author: ಶಿಶುನಾಳ ಷರೀಫ್

ನಿಶ್ಚಿಂತನಾಗಬೇಕಂತಿ। ಬಹು
ದುಶ್ಚಿಂತಿಯೊಳಗ ನೀ ಕುಂತಿ॥।

ಯಾಕೋ ಎಲಾ ನಿನಗ ಭ್ರಾಂತಿ
ನಾಳೆಗಾಗುವೋದೀಗಂತಿ ||

ಆಶಾಪಾಶಗಳ ಬ್ಯಾಡಂತಿ | ಒಳ್ಳೇ
ಮೀಸಲ ನುಡಿ ಮಾತಾಡಂತಿ |
ಭಾಷೆ ಕೊಟ್ಟು ತಪ್ಪಬ್ಯಾಡಂತಿ। ಹರಿ-
ದಾಸರೊಳಗ ಮನ ನೀಡಂತಿ ||

ಅವರನ ಕಂಡರ ಅವರಂತಿ। ಮ-
ತ್ತಿವರನ ಕಂಡರೆ ಇವರಂತಿ |
ಅರಿವು ಅರಿಯದ ತನಗೂ ತಿಳಿಯದ
ಮೂಢನಾಗಿ ಸುಮ್ಮನೆ ಕುಂತಿ ||

ಪೊಡವಿಯೊಳಗ ಶಿಶುನಾಳಂತಿ | ಗುರು
ಗೋವಿಂದ ಯೋಗೀ ಚಿಂತಿ |
ಬಿಡದಾತನ ಸೇವೆ ಮಾಡಂತಿ | ಭವ-
ವಿಲ್ಲದ ಗುರುವಿನ ಕೂಡಂತಿ॥