ಆರು ಬದುಕಿದರಯ್ಯ ಹರಿ ನಿನ್ನ ನಂಬಿ 

Category: ಶ್ರೀಕೃಷ್ಣ

Author: ಕನಕದಾಸ

ಆರು ಬದುಕಿದರಯ್ಯಾ ಹರಿ ನಿನ್ನ ನಂಬಿ ||ಪ||
ತೋರು ಈ ಧರೆಯೊಳಗೆ ಒಬ್ಬರನು ಕಾಣೆ ಕೃಷ್ಣ ||ಅ||

ಕಲಹ ಬಾರದ ಮುನ್ನ ಕರ್ಣನೊಬ್ಬನ ಕೊಂದೆ
ಸುಲಭದಲಿ ಕೌರವರ ಮನೆಯ ಮುರಿದೆ
ನೆಲನ ಬೇಡಲು ಪೋಗಿ ಬಲಿಯ ಭೂಮಿಗೆ ತುಳಿದೆ
ಮೊಲೆಯನುಣ್ಣಲು ಪೋಗಿ ಪೂತನಿಯ ಕೊಂದೆ ||1||

ಕರುಳೊಳಗೆ ಕತ್ತರಿಯನಿಟ್ಟೆ ಹಂಸಧ್ವಜನ
ಸರಸದಿಂ ಮಗಳ ಗಂಡನ ಕೊಲಿಸಿದೆ
ಮರುಳಿನಿಂದಲಿ ಪೋಗಿ ಭೃಗುಮುನಿಯ ಕಣ್ಣೊಡೆದೆ
ಅರಿತು ನರಕಾಸುರನ ಹೆಂಡಿರನು ತಂದೆ ||2||

ತಿರಿದುಂಬ ದಾಸರ ಕೈ ಕಪ್ಪ ಕೊಂಬ ಮರ್ಮ
ತಿರುಮಲಾಚಾರ್ಯ ಶ್ರೀ ಗುರುವೆ ಬಲ್ಲ
ವರ ಕಾಗಿನೆಲೆಯಾದಿಕೇಶವನ ಭಜಿಸಿದರೆ
ತಿರಿವೆನೆಂದರು ತಿರುಪೆ ಕೂಳ್ ಪುಟ್ಟದೈ ಕೃಷ್ಣ ||3||