ಆರು ಬಲ್ಲರು ಹರಿಹರಾದಿಗಳ ಮಹಿಮೆಯನು
Category: ಶ್ರೀಕೃಷ್ಣ
Author: ಕನಕದಾಸ
ಆರು ಬಲ್ಲರು ಹರಿಹರಾದಿಗಳ ಮಹಿಮೆಯನು ||ಪ||
ವಾರಿಜೋದ್ಭವ ಸುರೇಂದ್ರಾದಿಗಳಿಗಳವಲ್ಲ ||ಅ||
ಪೌರತ್ರಯವ ಗೆಲ್ವ ಸಮಯದಲಿ ತಪ ಮಾಡಿ
ನಾರಾಯಣಾಸ್ತ್ರವನು ಪಡೆದನೀತ
ಗೌರೀಮನೋಹರನ ಘನತರಾರ್ಚನೆಗೈದು
ಚಾರುತರ ಚಕ್ರವನು ಪಡೆದನಾ ಶೌರಿ ||1||
ಬಲಿ ಚಕ್ರವರ್ತಿ ಭಕ್ತಿಗೆ ಮೆಚ್ಚಿ ಅವನ ಬಾ
ಗಿಲ ಕಾಯ್ದನಚ್ಯುತನು ಅನುಗಾಲದಿ
ಬಲು ಭುಜನು ಬಾಣಾಸುರನ ಗೃಹ ದ್ವಾರವನು
ಬಳಸಿ ಕಾಯ್ದನು ಹರನು ವರವ ತಾನಿತ್ತು ||2||
ಭೋಗಿಶಯನನು ಆಗಿ ಭೋಗಿಭೂಷಣನಾಗಿ
ವಾಗೀಶನಾಗಿ ಸೃಷ್ಟಿ ಸ್ಥಿತಿಲಯ
ಕ್ಕಾಗು ಕಾರಣ ಕಾರ್ಯ ಕರ್ಮಾದಿ ರೂಪಕ್ಕೆ
ಕಾಗಿನೆಲೆಯಾದಿಕೇಶವನ ಮಹಿಮೆಯನು ||3||