ಆರು ಹಿತವರು ಎಂದು ನಂಬಬೇಡ
Category: ಶ್ರೀಕೃಷ್ಣ
Author: ಕನಕದಾಸ
ಆರು ಹಿತವರು ಎಂದು ನಂಬಬೇಡ
ಆರಿಗಾರಿಲ್ಲ ಆಪತ್ತು ಬಂದೊದಗಿದಡೆ
ಜನಕ ಹಿತದವನೆಂದು ನಂಬಬಹುದೇ ಹಿಂದೆ
ತನಯ ಪ್ರಹ್ಲಾದನಿಗೆ ಪಿತ ಮುನಿದನು
ಜನನಿ ರಕ್ಷಿಪಳೆಂಬೆನೇ ತಿಳಿತಿಳಿದು ಕುಂತಿ
ತನಯ ರಾಧೇಯನಿಗೆ ಎರಡೆಣಿಸಿದ ಮೇಲೆ ||1||
ಮಗನು ತೆತ್ತಿಗನೆನಲೆ ಕಂಸ ತನ್ನಯ ಪಿತನ
ನಿಗಳ ಬಂಧನದಿಂದ ಬಂಧಿಸಿದನು
ಜಗವರಿಯೆ ಸೋದರನು ಮಮತೆಯುಳ್ಳವನೆನಲೆ
ಹಗೆವೆರಸಿ ವಾಲಿಯನು ಅನುಜ ಕೊಲಿಸಿದ ಮೇಲೆ ||2||
ತನಗೆ ದೇಹಾನುಬಂಧಿಗಳೆ ಬಂಧುಗಳೆಂದು
ಮನದಿ ನಿಚ್ಚಳವಾಗಿ ನಂಬಬೇಡ
ಘನ ಕೃಪಾನಿಧಿ ಕಾಗಿನೆಲೆಯಾದಿಕೇಶವನ
ಅನುದಿನದಿ ನಂಬಿದವಗಿಹಪರದಿ ಸುಖವು || 3||