ಇಂದು ಸೈರಿಸಿರಿ ಶ್ರೀಕೃಷ್ಣನ ತಪ್ಪ
Category: ಶ್ರೀಕೃಷ್ಣ
Author: ಕನಕದಾಸ
ಇಂದು ಸೈರಿಸಿರಿ ಶ್ರೀಕೃಷ್ಣನ ತಪ್ಪ ||ಪ||
ಮುಂದಕೆ ನಿಮ್ಮ ಮನೆಗೆ ಬಾರನಮ್ಮ ||ಅ||
ಮಗುವು ಬಲ್ಲುದೆ ಇಷ್ಟು ಬೆಣ್ಣೆಯ ಕದ್ದರೆ
ಬಿಗಿಯಬಹುದೇ ಶ್ರೀ ಚರಣವನು
ಅಗಣಿತ ಮಹಿಮನ ಅಂಜಿಸಲೇಕಮ್ಮ
ಬಗೆಯಬಾರದೆ ನಿಮ್ಮ ಮಕ್ಕಳಂತೆ ||1||
ಹಸುಮಗುವನು ಕಂಡು ಮುದ್ದಿಸಲೊಲ್ಲದೆ
ಹುಸಿಗ ಕಳ್ಳನೆಂದು ಕಟ್ಟುವಿರಿ
ವಸುಧೆಯೊಳಗೆ ನಾನೊಬ್ಬಳೆ ಪಡೆದೆನೆ ನಿಮ್ಮ
ಹಸುಮಗುವಿನಂತೆ ಭಾವಿಸಬಾರದೆ ||2||
ಎಷ್ಟು ಸಾರಿಯು ನಾ ಬೇಡವೆಂದರೆ ಕೇಳ
ದುಷ್ಟ ಮಕ್ಕಳ ಕೂಡೆ ಒಡನಾಟವ
ಕಟ್ಟಿದ ನೆಲುವಿನ ಬೆಣ್ಣೆಯನೀವೆನು
ಬಿಟ್ಟು ಕಳುಹಿರಮ್ಮ ಆದಿಕೇಶವನ ||3||