ಈತನೀಗ ವಾಸುದೇವನು
Category: ಶ್ರೀಕೃಷ್ಣ
Author: ಕನಕದಾಸ
ಈತನೀಗ ವಾಸುದೇವನು ಲೋಕದೊಡೆಯ
ಈತನೀಗ ವಾಸುದೇವನು ||ಪ||
ಈತನೀಗ ವಾಸುದೇವನೀ ಸಮಸ್ತ ಲೋಕದೊಡೆಯ
ದೂತಗೊಲಿದು ತೇರನೇರಿ ತೇಜಿ ಪಿಡಿದು ನಡೆಸಿದಾತ ||ಅ||
ದನುಜೆಯಾಳ್ದನಣ್ಣನಯ್ಯನ ಪಿತನ ಮುಂದೆ ಕೌರವೇಂದ್ರ
ನನುಜೆಯಾಳಿದವನ ಶಿರವ ಕತ್ತರಿಸುತ- ತನ್ನ
ಅನುಜೆಯಾಳಿದವನ ಬೆಂಕಿ ಮುಟ್ಟದಂತೆ ಕಾಯ್ದ ರುಕ್ಮ
ನನುಜೆಯಾಳಿದವನ ಮೂರ್ತಿಯನ್ನು ನೋಡಿರೊ ||1||
ನರನಸುತನರಣ್ಯದಲ್ಲಿ ಗಿರಿಯೊಳ್ನಿಂತು ತನ್ನ ರೋಷದಿ
ಶರಗಳನ್ನು ತೀಡುತಿಪ್ಪನ ಯೋಚಿಸಿ
ಭರದಲವನ ಕರೆದು ಕುರುಹು ತೋರಿ ಪತ್ರವನ್ನು ಹಾರಿಸಿದವನ
ಶಿರವನ್ನು ಛೇದಿಸಿದ ದೇವ ಕಾಣಿರೊ ||2||
ಸೃಷ್ಟಿಕರ್ತಗೆ ಮಗನಾದವನಿಗಿಷ್ಟ ಭೂಷಣ ಅಶನವಾದನ
ಜ್ಯೇಷ್ಠ ಪುತ್ರಗೆ ವೈರಿ ತೊಡೆಯ ಛೇದಿಸೆಂದು ಬೋಧಿಸಿ
ಕಷ್ಟವನ್ನು ಕಳೆದು ಭಕ್ತರಿಷ್ಟವನ್ನು ಕಾದ ಉ
ತ್ಕೃಷ್ಟ ಮಹಿಮನಾದ ದೇವ ಕಾಣಿರೊ ||3||
ಕ್ರೂರವಾದ ಫಣಿಪಬಾಣವನ್ನು ತರಣಿಜನೆಚ್ಚಾಗ
ವೀರನರನತ್ತ ಬಪ್ಪುದನ್ನು ಈಕ್ಷಿಸಿ
ಪೌರಾಣಿಕ ವಾವೆ ವರಸೆಯ ಮುಂಡಿಗೆಗಳು
ಧಾರಿಣಿಯ ಪದದೊಳೌಕಿ ಚರಣಭಜಕ ನರನ ಕಾಯ್ದ
ಭಾರಕರ್ತನಾದ ದೇವನೀತ ಕಾಣಿರೊ ||4||
ವ್ಯೋಮಕೇಶನಿಪ್ಪ ದೆಸೆಯ ಸರ್ವ ಜಗಕೆ ತೋರುತ
ಸಾಮಜವನೇರಿ ಬಹನ ಶಕ್ತಿಯನೀಕ್ಷಿಸಿ
ಪ್ರೇಮದಿಂದ ಉರವನೊಡ್ಡಿ ಡಿಂಗರಿಗನ ಕಾಯ್ದ ಸಾರ್ವ
ಭೌಮ ಬಾಡದಾದಿಕೇಶವನ್ನ ನೋಡಿರೊ ||5||