ಏಕೆ ದಯವಿನಿತಿಲ್ಲ ಲೋಕಪಾವನ

Category: ವೈರಾಗ್ಯ

Author: ಕನಕದಾಸ

ಏಕೆ ದಯವಿನಿತಿಲ್ಲ ಲೋಕಪಾವನ ಮೂರ್ತಿ ||ಪ||
ಬೇಕೆಂದು ನಿನ್ನ ಪಾದ ನಂಬಿದ ದಾಸನ ಮೇಲೆ ||ಅ||

ಎಡರಿಗಾಗುವರಿಲ್ಲ ಕಡನ ನಂಬುವರಿಲ್ಲ
ಬಡವನೆಂದು ವಸ್ತ್ರವ ಕೊಡುವರಿಲ್ಲ
ದೃಢದೊಳಿದ್ದರು ಬವಣೆ ಬಂದೊಡನೆ ಕಾಡುವುವು
ಒಡೆಯ ಕಂಡೂ ಕಾಣದಿರುವುದುಚಿತವಲ್ಲ ||1||

ಮೊರೆಯ ಕೇಳುವರಿಲ್ಲ ಸಿರಿವಂತ ನಾನಲ್ಲ
ಪರಮಾತ್ಮ ನಿನ್ನೊಳಗ ನಾನರಿತಿಲ್ಲ
ಬೆರೆತುಕೊಂಡಿರಲು ಸಜ್ಜನರ ಗೆಳೆತನವಿಲ್ಲ
ಪರಮಹಂಸನೆ ಹರಿಸೊ ಇಂಥ ಕೊರತೆಗಳೆಲ್ಲ ||2||

ನೀಲವರ್ಣದ ಲೋಲ ಕಾಲನವರಿಗೆ ಶೂಲ
ಬಾಲ್ಯದಿ ಯಶೋದೆಯ ಹಾಲ ಸವಿದ ಗೋಪಾಲ
ನಾಲಗೆಗೆ ನಿನ್ನ ವಿಶಾಲ ಅಷ್ಟಾಕ್ಷರಿಯನಿತ್ತು
ಪಾಲಿಸೋ ಶ್ರೀಕಾಗಿನೆಲೆಯಾದಿ ಕೇಶವನೆ ||3||