ಏಕೆ ದಯವಿನಿತಿಲ್ಲ ಲೋಕಪಾವನ
Category: ವೈರಾಗ್ಯ
Author: ಕನಕದಾಸ
ಏಕೆ ದಯವಿನಿತಿಲ್ಲ ಲೋಕಪಾವನ ಮೂರ್ತಿ ||ಪ||
ಬೇಕೆಂದು ನಿನ್ನ ಪಾದ ನಂಬಿದ ದಾಸನ ಮೇಲೆ ||ಅ||
ಎಡರಿಗಾಗುವರಿಲ್ಲ ಕಡನ ನಂಬುವರಿಲ್ಲ
ಬಡವನೆಂದು ವಸ್ತ್ರವ ಕೊಡುವರಿಲ್ಲ
ದೃಢದೊಳಿದ್ದರು ಬವಣೆ ಬಂದೊಡನೆ ಕಾಡುವುವು
ಒಡೆಯ ಕಂಡೂ ಕಾಣದಿರುವುದುಚಿತವಲ್ಲ ||1||
ಮೊರೆಯ ಕೇಳುವರಿಲ್ಲ ಸಿರಿವಂತ ನಾನಲ್ಲ
ಪರಮಾತ್ಮ ನಿನ್ನೊಳಗ ನಾನರಿತಿಲ್ಲ
ಬೆರೆತುಕೊಂಡಿರಲು ಸಜ್ಜನರ ಗೆಳೆತನವಿಲ್ಲ
ಪರಮಹಂಸನೆ ಹರಿಸೊ ಇಂಥ ಕೊರತೆಗಳೆಲ್ಲ ||2||
ನೀಲವರ್ಣದ ಲೋಲ ಕಾಲನವರಿಗೆ ಶೂಲ
ಬಾಲ್ಯದಿ ಯಶೋದೆಯ ಹಾಲ ಸವಿದ ಗೋಪಾಲ
ನಾಲಗೆಗೆ ನಿನ್ನ ವಿಶಾಲ ಅಷ್ಟಾಕ್ಷರಿಯನಿತ್ತು
ಪಾಲಿಸೋ ಶ್ರೀಕಾಗಿನೆಲೆಯಾದಿ ಕೇಶವನೆ ||3||