ಕಲಿಯುಗದ ಮಹಿಮೆಯನು ಕಂಡಷ್ಟು ಪೇಳುವೆನು
Category: ಇತರೆ
Author: ಕನಕದಾಸ
ಕಲಿಯುಗದ ಮಹಿಮೆಯನು ಕಂಡಷ್ಟು ಪೇಳುವೆನು ||ಪ||
ಜಲಜನಾಭನ ಕೃಪೆಯ ಪಡೆದವರು ಕೇಳಿ ||ಅ||
ಸತ್ಯಧರ್ಮಗಳೆಲ್ಲ ಎತ್ತ ಪೋದವೊ ಕಾಣೆ
ಉತ್ತಮರ ಜೀವನಕೆ ದಾರಿಯಿಲ್ಲ
ನಿತ್ಯದಲಿ ಕಳವು ವ್ಯಭಿಚಾರವುಳ್ಳವರೆಲ್ಲ
ಅರ್ಥ ಸಂಪನ್ನರಾಗನುಭವಿಸುತಿಹರು ||1||
ಅತ್ತೆಯೇ ಸೊಸೆಯಾಗಿ ಸೊಸೆಯು ಅತ್ತೆಯು ಆಗಿ
ಪುತ್ರ ಪಿತನಾಗಿ ಪಿತ ಪುತ್ರನಾಗಿ
ಮತ್ತೆ ಗಂಡನಿಗೆ ಹೆಂಡತಿಯೆ ಗಂಡಳು ಆಗಿ
ವರ್ತಿಸುವರಯ್ಯ ತಮಗೆದುರಿಲ್ಲವೆಂದು ||2||
ವಾವೆವರಸೆಯು ತಪ್ಪಿ ವೈರಿ ವರ್ಗವು ಹೆಚ್ಚಿ
ದೇವ ಬ್ರಾಹ್ಮಣ ಗುರು ಹಿರಿಯರನು ಜರಿದು
ಕೇವಲಾಧಮರೆಲ್ಲ ಸಿರಿ ಮದದಿ ಸೊಕ್ಕಿದರು
ಕಾವರಾರೈ ಸಾಧು ಸಜ್ಜನರನೀಗ ||3||
ವೇದ ವಿಪ್ರರು ತಮ್ಮ ವೃತ್ತಿ ಸ್ವಾಸ್ಥ್ಯವ ಕಳೆದು
ಆಧಾರವಿಲ್ಲದೆ ತಿರಿದು ತಿಂಬುವರು
ಕಾದುವ ಶೂರರಿಗೆ ಕಾಸು ಕೊಡುವವರಿಲ್ಲ
ಮೇದಿನಿಗೆ ಬೀಳ್ವ ಮಳೆ ಖಂಡಮಂಡಲವು ||4||
ಅನ್ನವಸ್ತ್ರಗಳಿಂದ ಚೆನ್ನಾಗಿ ಬಾಳುವರ
ಭಿನ್ನ ತಂತ್ರವ ಮಾಡಿ ಕೆಡಿಸುತಿಹರು
ಗನ್ನಗತಕವ ಮಾಳ್ಪ ಗ್ರಾಮಣ್ಯಗಳ ಕಲಿತು
ಕುನ್ನಿಗಳು ಹೆಚ್ಚಿದರು ಕ್ರೂರ ಫಣಿಯಂತೆ ||5||
ಆಳಿದೊಡೆಯಂಗೆರಡು ಬಗೆಯುವಾತಗೆ ಒಳ್ಳೆ
ಮಾಳಿಗೆಯ ಮನೆ ತುರುವು ಧನಧಾನ್ಯವು
ವೇಳೆವೇಳೆಗೆ ಬರುವ ಹೆಂಡತಿಯ ಲೆಕ್ಕಿಸದೆ
ಸೂಳೆಯನು ನೆಚ್ಚಿ ಕಾಲವ ಕಳೆವರಯ್ಯ ||6||
ಸೇರಿ ದ್ರೋಹವ ಮಾಳ್ಪ ಕ್ರೂರಕರ್ಮಿಗಳ ಮತ
ಪೂರೈಸಿ ಕೊಡುವರರಸುಗಳೆಲ್ಲರು
ಧಾರಿಣಿಯ ಭಾರವನು ತಾಳಲಾರದೆ ದೇವಿ
ಶ್ರೀರಾಮ ರಾಮೆಂದು ಶಿರವ ತೂಗುವಳು ||7||
ಉತ್ತಮ ಪತಿವ್ರತೆಯು ಪತಿ ನೀನೆ ಗತಿಯೆನಲು
ಮುತ್ತೈದೆಗುಡುವುದಕೆ ವಸ್ತ್ರವಿಲ್ಲ
ಮತ್ತೆ ವ್ಯಭಿಚಾರಿಣಿಗೆ ತೊಡಿಗೆ ಬಂಗಾರಗಳು
ವರ್ತನೆಯಿದೇನಯ್ಯ ಕಲಿಯುಗದ ಮಹಿಮೆ ||8||
ಪತಿವ್ರತೆಯರೆಂಬುವರು ಶತಸಹಸ್ರಕೊಬ್ಬರು
ಮಿತಿಮಿರಿ ಇಹರಯ್ಯ ಇತರ ಜನರು
ಮತಿಗೆಟ್ಟು ಮನಸೋತು ಅನ್ಯ ಪುರುಷರ ಕೂಡಿ
ಗತಿಗೆಟ್ಟು ಹೋಗುವರು ಮೂರು ತೊರೆದು ||9||
ಹರಿಹರರ ಪೂಜೆಗಳು ಹಗರಣಗಳಾದವು
ಉರಿ ಮಾರಿ ಚಾಮುಂಡಿ ಶಕ್ತಿಗಳಿಗೆ
ಕುರಿ ಕೋಣ ನೈವೇದ್ಯ ಧೂಪದೀಪಗಳಿಂದ
ಪರಮ ಭಕ್ತಿಯ ಸಲಿಸಿ ಪೂಜಿಸುವರಯ್ಯ ||10||
ನಡೆವ ಕಾರ್ಯಗಳೆಲ್ಲ ನುಡಿಯಲೆನ್ನಳವಲ್ಲ
ಒಡೆಯ ನೀನೇ ಬಲ್ಲೆ ಕಲಿಯುಗದ ಮಹಿಮೆ
ತಡವ ಮಾಡಲಿ ಬೇಡ ತಾಳಲಾರದು ಲೋಕ
ಮೃಡನ ವೈರಿಯ ಪೆತ್ತ ಆದಿಕೇಶವನೆ ||11||