ಕಾಡುವ ದುರಿತಗಳನು ಬಿಡಿಸೆಂದು
Category: ವೈರಾಗ್ಯ
Author: ಕನಕದಾಸ
ಕಾಡುವ ದುರಿತಗಳನು ಬಿಡಿಸೆಂದು
ಬೇಡಿಕೊಂಬೆನೊ ದೇವ ನಾ ನಿನ್ನ ||ಪ||
ಅಡಿದಾಸನೆಂಬೋ ಎನಗೊಂದು
ದೃಢ ಬುದ್ಧಿಯು ಇಲ್ಲದೆ
ಮಡದಿ ಮಕ್ಕಳೆಂಬೊ ಕಡಲೊಳು ಮುಳುಗಿದೆ
ಕಡೆ ಹಾಯಿಸೊ ಎನ್ನೊಡೆಯ ನೀನಾದಡೆ ||1||
ಆಸೆಗಳ ಆಧಿಕ್ಯದಿಂದೀ ಪರಿಯ ಯಮ
ಪಾಶಕ್ಕೆ ಒಳಗಾದೆನೋ
ಮೀಸಲೂಳಿಗವ ಮಾಡದೆಯೆ ಪರಿಪರಿಯ
ಕ್ಲೇಶದಿಂದಲಿ ಗಾಸಿಗೊಂಡೆನಯ್ಯ ||2||
ಪಾಡುವೆನು ನಿನ್ನ ನಾಮ ಸೀತಾರಾಮ
ಆಡುವೆನು ಮನದಣಿವ ತನಕ
ಬೇಡಿಕೊಂಬೆನೊ ನಿನ್ನ ಭಕ್ತರ ಸೇವೆಯನು
ಬಾಡದಾದಿ ಕೇಶವ ಭಕ್ತವತ್ಸಲನೆ ||3||