ಕೇಶವನೊಲುಮೆಯು ಆಗುವ ತನಕ ಹರಿ

Category: ಇತರೆ

Author: ಕನಕದಾಸ

ಕೇಶವನೊಲುಮೆಯು ಆಗುವ ತನಕ ಹರಿ
ದಾಸರೊಳಿರುತಿರು ಹೇ ಮನುಜ ||ಪ||

ಕ್ಲೇಶಪಾಶಂಗಳ ಹರಿದು ವಿಲಾಸದಿ
ಶ್ರೀಶನ ನುತಿಗಳ ಪೊಗಳುತ ಮನದೊಳು ||ಅ||

ಮೋಸದಿ ಜೀವರ ಘಾಸಿ ಮಾಡಿದ ಪಾಪ
ಕಾಶಿಗೆ ಹೋದರೆ ಹೋದೀತೆ
ಶ್ರೀಶನ ಭಕುತರ ದೂಷಿಸಿದಾ ಫಲ
ಕಾಸು ಕೊಟ್ಟರೆ ಬಿಟ್ಟೀತೆ
ಭಾಷೆಯ ಕೊಟ್ಟು ನಿರಾಶೆಯ ಗೈದ ಫಲ
ಕ್ಲೇಶಗೊಳಿಸದೆ ಇದ್ದೀತೆ
ಭೂಸುರಸ್ತವ ಹ್ರಾಸ ಮಾಢಿದ ಫಲ
ಏಸೇಸು ಜನುಮಕು ಬಿಟ್ಟೀತೆ ||1||

ಜೀನನ ವಶದೊಳು ನಾನಾ ದ್ರವ್ಯವಿರೆ
ದಾನಧರ್ಮಕೆ ಮನಸಾದೀತೆ
ಹೀನ ಮನುಜನಿಗೆ ಜ್ಞಾನವ ಬೋಧಿಸೆ
ಹೀನ ವಿಷಯ ಅಳಿದ್ಹೋದೀತೆ
ಮಾನಿನಿ ಮನಸದು ನಿಧಾನವಿರದಿರೆ
ಮಾನಾಭಿಮಾನಗಳುಳಿದೀತೆ
ಭಾನುಪ್ರಕಾಶನ ಭಜನೆಯ ಮಾಡದ
ಹೀನಗೆ ಮುಕುತಿಯು ದೊರಕೀತೆ ||2||

ಸತ್ಯಧರ್ಮಗಳ ನಿತ್ಯವು ಬೋಧಿಸೆ
ತೊತ್ತಿನ ಮನಸಿಗೆ ಸೊಗಸೀತೆ
ತತ್ವದ ಅರ್ಥವ ವಿಚಿತ್ರದಿ ಪೇಳೆ
ಕತ್ತೆಯ ಚಿತ್ತಕೆ ಹತ್ತೀತೆ
ಪುತ್ಥಳಿ ಬೊಂಬೆಯ ಚಿತ್ರದಿ ಬಣ್ಣಿಸಿ
ಮುತ್ತುಕೊಟ್ಟರೆ ಮಾತನಾಡೀತೆ
ಕತ್ತುರಿ ತಿಲಕವನೊತ್ತಿ ಫಣೆಯೊಳಿಡೆ
ಅರ್ತಿಯ ತೋರದೆ ಇದ್ದೀತೆ ||3||

ನ್ಯಾಯವ ಬಿಟ್ಟನ್ಯಾಯವ ಪೇಳುವ
ನಾಯಿಗೆ ನರಕವು ತಪ್ಪೀತೆ
ಬಾಯಿ ಕೊಬ್ಬಿನಲಿ ಬಯ್ಯುವ ಮನುಜಗೆ
ಘಾಯವಾಗದೆ ಬಿಟ್ಟೀತೆ
ತಾಯಿತಂದೆಗಳ ನೋಯಿಸಿದವನಿಗೆ
ಮಾಯದ ಮರಣವು ತಪ್ಪೀತೆ
ಮಾಯಾಜಾಲವ ಕಲಿತ ಮನುಜನಿಗೆ
ಕಾಯ ಕಷ್ಟವು ಬಿಟ್ಟೀತೆ ||4||

ಸಾಧು ಸಜ್ಜನರ ನೋಯಿಸಿದ ಮಾಯಾ
ವಾದಿಗೆ ನರಕವು ತಪ್ಪೀತೆ
ಬಾಧಿಸಿ ಪರರರ್ಥವ ದೋಚುವವಗೆ
ವ್ಯಾಧಿಯು ಕಾಡದೆ ಬಿಟ್ಟೀತೆ
ಭೇದವೆಣಿಸಿ ಬಲು ಕ್ಷುದ್ರವ ಕಲಿತರೆ
ಮೋದವೆಂದಿಗು ಆದೀತೆ
ಕದ್ದು ಒಡಲ ಪೊರೆವವನ ಮನೆಯೊಳು
ಇದ್ದದ್ದು ಹೋಗದೆ ಉಳಿದೀತೆ ||5||

ಅಂಗಜ ವಿಷಯಗಳನು ತೊರೆದಾತಗೆ
ಅಂಗನೆಯರ ಸುಖ ಸೊಗಸೀತೆ
ಸಂಗ ದುಃಖಗಳು ಹಿಂಗಿದ ಮನುಜಗೆ
ಶೃಂಗಾರದ ಬಗೆ ರುಚಿಸೀತೆ
ಇಂಗಿತವರಿತ ನಿಸ್ಸಂಗಿ ಶರೀರ ವ
ಜ್ರಾಂಗಿಯಾಗದೆ ತಾನಿದ್ದೀತೆ
ಮಂಗಳ ಮಹಿಮನ ಅಂಘ್ರಿಯ ಕಾಣದ
ಮಂಗಗೆ ಮುಕುತಿಯು ದೊರಕೀತೆ ||6||

ಕರುಣಾಮೃತದಾಭರಣವ ಧರಿಸಿದ
ಶರಣಗೆ ಸಿರಿಯು ತಪ್ಪೀತೆ
ಕರುಣ ಪಾಶದುರವಣೆ ಹರಿದಾತಗೆ
ಶರಣರ ಕರುಣವು ತಪ್ಪೀತೆ
ಅರಿತು ಶಾಶ್ತ್ರವನಾಚರಿಪ ಯೋಗ್ಯಗೆ
ಗುರು ಉಪದೇಶವು ತಪ್ಪೀತೆ
ವರ ವೇಲಾಪುರದಾದಿಕೇಶವನ
ಸ್ಮರಿಸುವನಿಗೆ ಮೋಕ್ಷ ತಪ್ಪೀತೆ ||7||