ಗುರು ಹಿರಿಯರ ಸೇವಿಸಿ
Category: ವೈರಾಗ್ಯ
Author: ಕನಕದಾಸ
ಗುರು ಹಿರಿಯರ ಸೇವಿಸಿ ಹರಿಯ ಮನದೊಳಗಿರಿಸಿ
ಪರಗತಿಯ ಬೇಗ ಸಾಧಿಸಿಕೊಳ್ಳಿರೊ
ಲೆಕ್ಕವಿಲ್ಲದ ದೇಹವೆಂಬ ಸೆರೆಮನೆಯೊಳಗೆ
ಸಿಕ್ಕಿ ಬಹುಕಾಲ ಬಳಲದೆ
ರಕ್ಕಸಾರಿಯ ಭಕ್ತರೊಳು ಸೇರಿ ನೀವು ಸೆರೆ
ಯಿಕ್ಕದಂಥವನ ಮೊರೆ ಹೋಗಿರೊ ||1||
ಕಂಬಳಿಯ ಬುತ್ತಿಯಂತೀ ದೇಹದೊಳಗೆಲ್ಲ
ತುಂಬಿರುವ ಸುಖವೆಲ್ಲ ದುಃಖಭರಿತ
ಅಂಬುಜಾಕ್ಷನ ದಿವ್ಯ ಮಂಗಳ ಕಥಾಮೃತವ
ನುಂಬ ಭ್ರಮರಕೆ ಸರಿಗಾಣೆನೊ ||2||
ಮಕ್ಕಳುಗಳಳುವಾಗ ಮಡದಿಯರು ಜರಿವಾಗ
ಬಿಕ್ಕುಗಳು ಬಂದು ಬೈವಾಗ
ಇಕ್ಕಿ ಪೊರೆವುದಕೆ ಗತಿಯಿಲ್ಲದಾ ದರಿದ್ರರಿಗೆ
ಸೌಖ್ಯವೆತ್ತಣದೊ ಮನುಜರಿಗೆ ||3||
ತಾಯ ಮಾರಿ ತೊತ್ತನು ಕೊಂಬ ಪಾಮರರಂತೆ
ಹೇಯ ಕುಜನರಾ ಚರಣಕೆರಗಿ
ಮಾಯಾಪತಿಯಂಘ್ರಿಗಳ ನೆನೆಯಲೊಲ್ಲದ ನರನ
ಆಯುಷ್ಯ ಬರಿದೆ ಹೋಯಿತಲ್ಲ ||4||
ಅಯಿವರಿತ್ತೊಡವೆಯ ಅವರವರೊಯ್ಯುವರು ಮ-
ತ್ತಯಿವರೆಂಬುವರು ತೊಲಗುವರು
ಮೈಯ ನೆತ್ತರು ಕೂಡ ಹರಿದು ಹೋಹುದು ನಿಮ್ಮ
ಕೈಯ ಪಿಡಿದೆತ್ತುವರ ನಾನು ಕಾಣೆ ||5||
ಬಲಗುಂದಿ ನೆಲ ಹಿಡಿಯೆ ರೋಗರುಜಿನಗಳೆಂಬ
ಕಾಲನ ಭಟರು ಬಂದು ಕವಿದು
ಸಾಲಾಗಿ ನಿಂತಾಗ ಮುಖ ಗಂಟಲೊಳಗಣ
ನಾಲಗೆಯ ನಾದ ಎಲ್ಲಿಹುದೊ ||6||
ಆಗಲೇ ಹರಿನಾಮ ನಾದದಿಂದೆಚ್ಚತ್ತು
ನಾಗಶಯನನ ಪುರದ ಪಥವ
ಆಗಮಜ್ಞರ ಕೇಳಿ ತಿಳಿದುಕೊಳ್ಳಿರೊ ನಿಮಗೆ
ಈ ಗಾಳಿ ದೀಪ ಸ್ಥಿರವಲ್ಲ ||7||
ಜರೆಯೆಂದು ಕಡೆಯಲ್ಲಿ ಗೊರಗೊರನೆ ಉಸಿರಾಡೆ
ಶರೀರದ ಸಂಬಂಧಗಳಕಟಾ
ತರುಣಿಯರ ಮ್ಯಾಲಾಸೆ ತಮ್ಮ ಹಿತವನರಿಯದೆ
ಬರಿದೆ ಭವದಲ್ಲಿ ಬಳಲುವಿರಿ ||8||
ವೇದ ಶಾಸ್ತ್ರವನೋದಲಿಲ್ಲ ಜಪ ಹೋಮಾದಿ
ಸಾಧು ಕರ್ಮಗಳ ಸರಕು ಇಲ್ಲ
ಮಾಧವನ ಪೂಜೆ ಒಮ್ಮೆಯೂ ಮಾಡಿಲ್ಲ ಹರಿ
ಪಾದ ತೀರ್ಥದಾ ವ್ರತಗಳಿಲ್ಲ ||9||
ಊಧ್ರ್ವಪುಂಡ್ರಗಳಿಲ್ಲ ಹರಿಯ ಲಾಂಛನವಿಲ್ಲ
ಪದ್ಮ ತುಳಸಿಯಾ ಸರಗಳಿಲ್ಲ
ಸದ್ಧರ್ಮ ಪಥವೆತ್ತ ವಿಷಯಾಂಧ ಕೂಪದೊಳು
ಬಿದ್ದು ಪೊರಳುವ ಮರುಳಿದೆತ್ತ ||10||
ಏಕಾದಶಿಯ ಮಾಡಿ ಯತಿಗಳೊಡನೆ ಆಡಿ
ಪೋಕ ವೃತ್ತಿಗಳನೀಡಾಡಿ
ಶ್ರೀಕಾಂತನನು ಬೇಡಿ ಸುಕೃತಿಗಳನೆ ಕೂಡಿ
ಆ ಕೃಷ್ಣನಂಘ್ರಿಗಳ ಪಾಡಿ ||11||
ಸಕ್ತಿಯಿಂ ಹರಿಯ ಪೊಗಳಿ ಅಡಿಯಲುರುಳಿ ಶುಷ್ಕ
ಭುಕ್ತಿಗಳ ಮೇಲುಗುಳಿ ದೂರ ನಿಲ್ಲಿ
ಭಕ್ತಿ ಜ್ಞಾನಗಳಿರಲಿ ಮತ್ರ್ಯ ಪಥದಿಂ ಮರಳಿ
ಮುಕ್ತಿ ಮಾರ್ಗದಲಿನ್ನು ತೆರಳಿ ||12||
ಕೊಳ್ಳೆನಾಯಕ ಬಂದು ಕೋಟೆ ಕೆಡಹುವ ಮುನ್ನ
ಕಳ್ಳರೈವರ ಕಾರಣದಿಂದ
ಉಳ್ಳ ಪುಣ್ಯಾರ್ಥಗಳು ಕೊಳ್ಳೆ ಹೋಗದ ಮುನ್ನ
ಫುಲ್ಲನಾಭನ ಅಡಿಗೆ ಮೊರೆ ಹೋಗಿರೊ||13||
ಮಲಮೂತ್ರ ರಕ್ತ ಮಾಂಸಗಳ ಬಂಬಲು ಮೆತ್ತಿ
ಎಲುಬಿನಾ ಬಲದಿಂದ ಗೂಡು ಮಾಡಿ
ಬೆಳೆಸಿದೀ ತನುವೆಂಬ ನರಕದಾಸೆಯ ಬಿಟ್ಟು
ನಳಿನನಾಭನ ಪಾದ ಸೇರಿರೋ ||14||
ಒಂಬತ್ತು ರಂಧ್ರಗಳ ತನುವೆಂಬ ಮನೆಯಲ್ಲಿ
ತುಂಬಿರುವ ವಾಯು ಸ್ಥಿರವಲ್ಲ
ನಂಬಿದರ ಪೊರೆವ ನೆಲೆಯಾದಿಕೇಶವನ ಪಾ
ದಾಂಬುಜವನು ಸೇರಿ ಬದುಕಿರೊ ||15||