ಗೋವಿಂದ ಗೋವಿಂದ ಎನ್ನಲರಿಯದೆ

Category: ಶ್ರೀಕೃಷ್ಣ

Author: ಕನಕದಾಸ

ಗೋವಿಂದ ಗೋವಿಂದ ಎನ್ನಲರಿಯದೆ- ವೃಥಾ
ನೋವಿಂದ ಭಂಗವ ಪಡುವುದುಚಿತವೆ? ||ಪ||

ಕ್ಷೀಣ ಶಾಸ್ತ್ರಾರ್ಥವನು ಪರಿಗ್ರಹಿಸಿ ನಿಖಿಲ ಕುರಿ
ಕೋಣಗಳ ತಲೆಚೆಂಡ ಕುಟ್ಟಿಸುತ
ಪ್ರಾಣ ಹತ್ಯವ ಮಾಳ್ಪುದಾವ ಸತ್ಕರ್ಮ- ನಾರಾ
ಯಣನ ನಾಮಸ್ಮರಣೆ ಮಾಡು ಮನವೆ ||1||

ಖಂಡವನು ಕೊಯ್ದು ಕೊಡಬೇಡ ದಳ್ಳುರಿಯಗ್ನಿ
ಕುಂಡವನು ಹೊಕ್ಕು ಹೊರಡುವುದುಚಿತವೆ
ಭಂಡರಂದದಿ ಬತ್ತಲೆಯೆ ಬರುವುದಾವಾಟ
ಪುಂಡರೀಕಾಕ್ಷನ ನೆನೆ ಕಂಡ್ಯ ಮನವೆ ||2||

ಕುಟ್ಟಿಕೊಳ್ಳದಿರಿ ಜಟ್ಟಿ ಗುಂಡಿನಲಿ, ಶಸ್ತ್ರವನು
ಚಿಟ್ಟಿ ಕೊಳ್ಳದಿರಿ, ಬೆನ್ನಲಿ ಸಿಡಿಯನು
ಕಟ್ಟಿ ತೂಗಿಸಿಕೊಳ್ಳದಿರಿ ಕರಟಕದಂತೆ
ಗುಟ್ಟಿನಲಿ ಗೋಪಾಲಕನ ಸ್ಮರಿಸು ಮರುಳೆ ||3||

ತೊಗಲ ಬಿಲ್ಲೆಗಳ ಕೊರಳಲ್ಲಿ ಕಟ್ಟಿಕೊಂಡು
ಹಗಲಿರುಳು ಅನ್ನಪಾನಕೆ ಹೋಗದೆ
ಮೃಗವೈರಿಯಂತೇಕೆ ಕಿಸುಕೆಲೆವ ರಂಪಾಟ
ಜಗದಾಧಿಪತಿಯ ನಾಮ ಸ್ಮರಿಸು ಮರುಳೆ ||4||

ಉತ್ತಮರು ಸುರೆಯನೀಂಟುವರೆ ತರಹರಿಸಿ ಮದೋ
ನ್ಮತ್ತರಾಗಿ ಅಸಭ್ಯ ಶಬ್ದವ ನುಡಿವರೆ
ಸತ್ತ ಹೆಣದಂತೆ ಬಿದ್ದಿಹುದಾವ ನೀತಿ ಪುರು
ಷೋತ್ತಮನ ನಾಮ ಸ್ಮರಣೆಯ ಮಾಡು ಮನವೆ ||5||

ವೇದೋಕ್ತ ಪೂಜೆಯಲಿ ತೃಪ್ತಿಪಟ್ಟರೆ ನೀವು
ಅದರಿಂದ ಫಲವೇನು ಪೇಳಿರಯ್ಯ
ನಾದವನು ಕೇಳ್ದ ಹರಿಣದಂದದಿ ಕೆಡದೆ ಮಧು
ಸೂದನನ ನಾಮ ಸ್ಮರಣೆಯ ಮಾಡು ಮರುಳೆ ||6||

ನಿಂದಾಪವಾದ ಘಟಿಸುವುದೈಸೆ ಇದರಿಂದ
ಮುಂದೆ ಮುಕ್ತಿಯು ನಿಮಗೆ ಸಾಧ್ಯವಹುದೆ
ತಂದೆ ಶ್ರೀ ಕಾಗಿನೆಲೆಯಾದಿಕೇಶವ ನಾಮ
ಒಂದೇ ವೈಕುಂಠಪದವನೈದಿಪುದಯ್ಯ ||7||