ತಾಳಲ್ಲಲ್ಲಲ್ಲಲ್ಯೊ ಮಾಸಾಳಲ್ಲಲ್ಲಲ್ಲಲ್ಯೋ
Category: ಶ್ರೀಕೃಷ್ಣ
Author: ಕನಕದಾಸ
ತಾಳಲ್ಲಲ್ಲಲ್ಲಲ್ಯೊ ಮಾಸಾಳಲ್ಲಲ್ಲಲ್ಲಲ್ಯೋ ||ಪ||
ಹೆಚ್ಚಿದ ತಮನೆಂಬ ದನುಜ ವೇದವ ಕದ್ದು
ಬಚ್ಚಿಟ್ಟು ನೀರೊಳು ಮುಳುಗಿರಲು
ಮಚ್ಚ ರೂಪದಿಂದ ಪೋಗಿ ಅವನ ಕೊಂದ
ಅಚ್ಯುತರಾಯನೆಂಬ ಮಾಸಾಳಮ್ಮ ||1||
ಸಿಂಧು ಮಥನವ ಮಾಡೆ ಅಮರರೆಲ್ಲರು
ಮಂದರಗಿರಿ ನೀರೊಳು ಮುಳುಗಲು
ಚಂದದಿ ಕೂರ್ಮ ರೂಪಿನಿಂದೆತ್ತಿದ ಗೋ
ವಿಂದನೆಂಬುವ ಮಾಸಾಳಮ್ಮ ||2||
ರೂಢಿಯ ಕದ್ದುಕೊಂಡೋಡುವ ದೈತ್ಯನ
ನೀಡಿ ತಿವಿದು ಕೋರೆದಾಡೆಯಿಂದ
ದೂಡಿ ದ್ವಂಸವ ಮಾಡಿ ರೂಢಿಯ ತಂದ
ಕಾಡು ವರಾಹ ರೂಪಿ ಮಾಸಾಳಮ್ಮ ||3||
ಲೇಸು ತಪ್ಪಿದನೆಂದು ಹಿರಣ್ಯಕ ತನಯನ
ಘಾಸಿ ಮಾಡಲು, ಕಂಬ ಒಡೆದುದಿಸಿ
ರೋಷದಿ ದೈತ್ಯನ ಕರುಳ ಕಿತ್ತ ನರ
ಕೇಸರಿ ರೂಪಿನ ಮಾಸಾಳಮ್ಮ ||4||
ಆ ಮಹಾಸಿರಿಯ ಗರ್ವದಿ ಮುಂದರಿಯದೆ
ಭೂಮಿಯನು ಬಲಿ ತಾನಾಳುತಿರೆ
ನೇಮಿಸಿ ಎರಡೇ ಹೆಜ್ಜೆಯೊಳಳಕೊಂಡ
ವಾಮನ ರೂಪಿನ ಮಾಸಾಳಮ್ಮ ||5||
ಕಾಮಧೇನುವಿಗಾಗಿ ಕಾರ್ತವೀರ್ಯಾರ್ಜುನ
ಆ ಮಹಾಮುನಿಯ ಪ್ರಾಣಕೆ ಮುನಿಯೆ
ತಾಮಸವಿಲ್ಲದೆ ಕ್ಷತ್ರಿಯರ ಸಂಹರಿಸಿದ
ರಾಮ ಭಾರ್ಗವನೆಂಬ ಮಾಸಾಳಮ್ಮ ||6||
ಜನಕ ಸುತೆಯನು ಕದ್ದೊಯ್ಯಲು ಲಂಕೆಗೆ
ಗಣಿತಾತೀತ ಶರಧಿಯ ಕಟ್ಟಿ
ಘನ ಕೋಪದಿ ದಶಿಶಿರನ ಕತ್ತರಿಸಿದ
ಇನಕುಲ ರಾಮನೆಂಬ ಮಾಸಾಳಮ್ಮ ||7||
ದೇವಕಿ ಬಸುರೊಳು ಬಂದು ಗೋಕುಲದಿ
ಆವ ಕಾವ ಗೊಲ್ಲರ ಸಲಹಿ
ಮಾವನ ಕೊಂದು ಮತ್ತೈವರ ಸಲಹಿದ
ದೇವ ಕೃಷ್ಣನೆಂಬ ಮಾಸಾಳಮ್ಮ ||8||
ಪತಿವ್ರತೆಯರ ವ್ರತವಳಿಯಬೇಕೆನುತಲಿ
ಅತಿಶಯದಿ ತ್ರಿಪುರದ ಸ್ತ್ರೀಯರ
ನುತ ಬೌದ್ಧ ರೂಪದಿ ಬಹು ಭಂಗಪಡಿಸಿದ
ರತಿಪತಿಪಿತನೆಂಬ ಮಾಸಾಳಮ್ಮ ||9||
ಖುಲ್ಲ ಮನುಜರನು ಕೊಲ್ಲಬೇಕೆನುತಲಿ
ಭಲ್ಲೆ ಹಿಡಿದು ತುರಗವನೇರಿ
ಅಲ್ಲಲ್ಲೆ ಸೊಲ್ಲಡಗಿಸಿ ವಲ್ಲಭನೆನಿಸಿದ
ಬಲ್ಲಿದ ಕಲ್ಕಿಯೆಂಬ ಮಾಸಾಳಮ್ಮ ||10||
ಮಂಗಳ ಮಹಿಮ ಭುಜಂಗ ಶಯನ ಕಾ
ಳಿಂಗ ಮರ್ದನ ದೇವೋತ್ತುಂಗ
ಅಂಗಜಪಿತ ನೆಲೆಯಾದಿಕೇಶವ ಅಂತ
ರಂಗದೊಳಿರುವ ಮಾಸಾಳಮ್ಮ ||11