ದಾಸನಾಗೋ ಭವಪಾಶನೀಗೋ
Category: ಶ್ರೀಕೃಷ್ಣ
Author: ಕನಕದಾಸ
ದಾಸನಾಗೋ ಭವಪಾಶನೀಗೋ- ವಿಶೇಷನಾಗೋ ||ಪ||
ಏಸೊ ಕಾಯಂಗಳ ಕಳೆದು ಎಂಬತ್ತ್ನಾಲ್ಕು ಲಕ್ಷ ಜೀವ
ರಾಶಿಯನ್ನು ದಾಟಿ ಬಂದೆ ಈ ಶರೀರ ತಾನಲ್ಲ ತನ್ನದಲ್ಲ
ಆಶೆಯು ತರವಲ್ಲ ಸ್ಥಿರವಲ್ಲ ಮುಂದೆ ಬಾಹೋದಲ್ಲ
ಆಶಾಕ್ಲೇಶ ದೋಷವೆಂಬ ಅಬ್ಧಿಯೊಳು ಮುಳುಗಿ ಯಮನ
ಪಾಶಕ್ಕೊಳಗಾಗದೆ ನಿರ್ದೋಷಿಯಾಗೊ- ಸಂತೋಷಿಯಾಗೊ ||ಅ||
ಕಾಶಿ ವಾರಣಾಸಿ ಕಂಚಿ ಕಾಳಹಸ್ತಿ ರಾಮೇಶ್ವರ
ಏಸು ದೇಶ ತಿರುಗಿದರೆ ಬಾಹೋದೇನೊ- ಅಲ್ಲಿ ಆಹೋದೇನೊ
ದೋಷನಾಶೆ ಕೃಷ್ಣವೇಣಿ ಗಂಗೆ ಗೋದಾವರಿ ಭವ
ನಾಶಿ ತುಂಗಭದ್ರೆ ಯಮುನೆ ವಾಸದಲ್ಲಿ- ಉಪವಾಸದಲ್ಲಿ
ಮೀಸಲಾಗಿ ಮಿಂದು ಜಪತಪ ಹೋಮನೇಮಗಳ
ಏಸು ಬಾರಿ ಮಾಡಿದರೂ ಫಲವೇನೊ- ಇದು ಚೆಲುವೇನೊ
ವಾಸುದೇವನೆಂಬ ಒಳಗಿಹ ಹಂಸನ ಸೇರಿ
ಲೇಸನುಂಡು ಮೋಸಗೊಳದೆ ಮುಕ್ತನಾಗೊ- ನೀ ಶಕ್ತನಾಗೊ ||1||
ಅತ್ತಲೋ ಇತ್ತಲೋ- ಎತ್ತಲೋ ಈ ಸಂಸಾರ
ಬತ್ತಲೆಗೆ ಬತ್ತಲೆ ನಿತ್ಯವಲ್ಲ- ಪರಿಮಿತಿ ಇಲ್ಲ
ಕತ್ತಲೆ ಕಾವಳದೊಳು ಕಾಣಲಾರದೆ ನೀನು
ಸತ್ಯವೆಂಬ ದಾರಿಯನು ಸೇರಲಿಲ್ಲ- ಲೇಸು ತೋರಲಿಲ್ಲ
ಉತ್ತಮ ‘ಅ ಉ ಮ' ಎಂಬ ಓಂಕಾರ ಬೀಜಾಕ್ಷರ
ಚಿತ್ತದಲಿ ಗ್ರಹಿಸು ನೀ ಬಿಡಬೇಡ- ಬಿಟ್ಟು ಕೆಡಬೇಡ
ಹೊತ್ತಾರೆಯಲೊ ಬೈಗಿನಲೊ ಆಗಲೊ ಈಗಲೊ ಕಾಯ
ನಿತ್ಯವೆಂದು ಸ್ಥಿರವೆಂದು ನಂಬಬೇಡ- ನಿನಗೆ ಡಂಬ ಬೇಡ ||2||
ಆಯಿತೊ ಹೋಯಿತೊ ಏನಾಯಿತೊ ಈ ದೇಹಕ್ಕೆ
ತಾಯಿ ಯಾರೊ ತಂದೆ ಯಾರೊ ಮಡದಿ ಯಾರೊ ಮಕ್ಕಳ್ಯಾರೊ
ಮಾಯದೊಳು ಸಿಲುಕಿ ಬಲು ಕಾಲದಿಂದ ಶ್ರೀ ರಘು
ರಾಯನೆಂಬ ವಸ್ತುವಿನ ಸ್ಮರಣೆ ಬಿಟ್ಟು- ಭವದಿ ಮಮತೆ ಇಟ್ಟು
ನಾಯ ಬಾಯ ಅರಿವೆಯಂತೆ ನಾನಾ ಕೋಟಲೆಯಲಿ ಬಿದ್ದು
ಬಾಯಿ ಬಾಯಿ ಬಿಡುತಲಿ ಸಾವುದೇನೊ- ನೀ ನೋವುದೇನೊ
ತ್ರಾಯಿ ತ್ರಾಯಿ ತ್ರಾಯಿಯೆಂದು ತ್ರೈಲೋಕ್ಯದೊಡೆಯ ಪುಣ್ಯ
ದಾಯಕನ ಹೊಂದಿ ನೀ ಧನ್ಯನಾಗೊ- ಮುಕ್ತ ಮಾನ್ಯನಾಗೊ ||3||
ಅಂದಿಗೊ ಇಂದಿಗೊ ಒಮ್ಮೆ ಸಿರಿ ಕಮಲೇಶನನ್ನು
ಒಂದು ಬಾರಿ ಅರುಹಿಂದ ನೆನೆಯಲಿಲ್ಲ- ಮನ ತಣಿಯಲಿಲ್ಲ
ಬಂದು ಬಂದು ಭ್ರಮೆಗೊಂಡು ಮಾಯಾಮೋಹಕೆ ಸಿಕ್ಕಿ
ನೊಂದು ಬೆಂದು ಒಂದರಿಂದ ಉಳಿಯಲಿಲ್ಲ- ಬಂಧ ಕಳೆಯಲಿಲ್ಲ
ಸಂದೇಹವ ಮಾಡದಿರು ಅರಿವು ಎಂಬ ದೀಪ ಹಿಡಿದು
ಇಂದು ಕಾಣು ದೇಹದಲಿ ಪಿಂಡಾಂಡ- ಹಾಗೆ ಬ್ರಹ್ಮಾಂಡ
ಇಂದಿರಾ ರಮಣನ ಧ್ಯಾನವನ್ನು ಮಾಡಿ ವಿವೇಕದಿ ಮು
ಕುಂದನಿಂದ ಮುಕುತಿಯ ಬೇಡು ಕಂಡ್ಯ- ನೀ ನೋಡು ಕಂಡ್ಯ ||4||
ನೂರು ಬಾರಿ ಶರಣು ಮಾಡಿ ನೀರ ಮುಳುಗಲ್ಯಾಕೆ ಪರ
ನಾರಿಯರ ನೋಟಕೆ ಗುರಿಯ ಮಾಡಿದೆ- ಮನ ಸೆರೆಯ ಮಾಡಿದೆ
ಸೋರೆಯೊಳು ಸುರೆ ತುಂಬಿ ಮೇಲೆ ಹುವ್ವಿನ ಹಾರ ಹಾಕಿ
ಗೀರುಗಂಧ ಅಕ್ಷತೆಯ ಧರಿಸಿದಂತೆ- ನೀ ಮೆರೆಸಿದಂತೆ
ಗಾರುಡಿಯ ಮತ ಬಿಟ್ಟು ನಾದಬ್ರಹ್ಮನ ಪಿಡಿದು
ಸಾರಿ ಸೇರಿ ಮುಕ್ತಿಯನ್ನು ಶಮನದಿಂದ- ಮತ್ತೆ ಸುಮನದಿಂದ
ನಾರಾಯಣ ಅಚ್ಯುತಾನಂತಾದಿಕೇಶವನ
ಸಾರಾಮೃತವನುಂಡು ಸುಖಿಸೊ ಲಂಡ ಜೀವವೆ- ಎಲೊ ಭಂಡ ಜೀವವೆ ||5||