ದೇಶಾಧಿಪತಿ ನರಹರಿಯೆ ನಿನ್ನಯ ಪಾದ
Category: ಶ್ರೀಕೃಷ್ಣ
Author: ಕನಕದಾಸ
ದೇಶಾಧಿಪತಿ ನರಹರಿಯೆ ನಿನ್ನಯ ಪಾದ
ದಾಸರ ದಾಸನೆಂದೆನಿಸಬೇಕೆನ್ನ ||ಪ||
ರಜ ತಮೋಗುಣ ಪ್ರವರ್ತಕ ಮೂಲಾಂತರದಿಂ
ಯಜಮಾನತನದಹಂಕಾರವನು ಒಲ್ಲೆ
ಭುಜಚಕ್ರ ಧರಿಸಿ ಸಾತ್ತ್ವಿಕರ ಪಾದಾಂಬುಜ
ರಜಭಜಕರ ಭಜಕನೆಂದೆನಿಸೆನ್ನ ||1||
ಸಿರಿಗಂಧ ಕುಂಕುಮ ಸಾದು ಜವ್ವಾಜಿ ಕ
ಸ್ತೂರಿ ತಿಲಕವನಿಡುವುದ ನಾನೊಲ್ಲೆ
ಸಿರಿ ಊರ್ಧ್ವಪುಂಡ್ರ ದ್ವಾದಶನಾಮವಿಡುವವರ
ಪರಿಚಾರಕರ ಪರಿಚಾರಕನೆನಿಸೆನ್ನ ||2||
ಸ್ವಾದು ಕಲ್ಪಿತವಾದ ಭಕ್ಷ್ಯ ಭೋಜ್ಯಗಳನು
ಆದರದ ಅಮೃತಾನ್ನ ಉಣುವುದನೊಲ್ಲೆ
ಬೋಧೆಯನು ಹೇಳುವ ಕೇಳುವ ಹರಿದಾಸರ
ಪಾದ ತೀರ್ಥಪ್ರಸಾದಭುಂಜಕನೆನಿಸೆನ್ನ ||3||
ಕಾಲ ಕರ್ಮದೊಳುಪೇಕ್ಷೆಯ ಮಾಡಿ ಹರಿಭಕುತಿ
ಶೀಲ ರಹಿತ ಬ್ರಾಹ್ಮಣನಾಗಲೊಲ್ಲೆ
ಕೀಲನರಿತು ಹರಿಭಕುತಿಯನು ಮಾಳ್ಪ ಪರಚಾಂ
ಡಾಲನ ಮನೆ ಬಾಗಿಲ ಕಾಯಿಸೆನ್ನ ||4||
ಕ್ರೂರ ಶಾಸ್ತ್ರವನೋದಿ ಕುರಿ ಕೋಣವನೆ ಕಡಿದು
ಘೋರ ನರಕದಿ ಬೀಳುವುದನು ನಾನೊಲ್ಲೆ
ವಾರಿಜಾಕ್ಷ ನಿನ್ನ ಚರಣ ಸೇವಕರ ಮನೆಯ
ದ್ವಾರಪಾಲಕನೆಂದೆನಿಸೆನ್ನ ||5||
ಪಟ್ಟೆ ಪಟ್ಟಾವಳಿ ದಿವ್ಯ ದುಕೂಲ ಮಿಂ
ಚಿಟ್ಟ ವಸ್ತ್ರ ಉಡುವುದನೊಲ್ಲೆ
ನೆಟ್ಟನೆ ಕಾವಿ ಕಾಷಾಯಾಂಬರಗಳನು
ಉಟ್ಟವರ ಬಂಟನೆಂದೆನಿಸೆನ್ನ ||6||
ಅರ್ಥ ವಿಷಯಗಳ ಫಲಾಪೇಕ್ಷೆಯಿಂ ಪುಣ್ಯ
ತೀರ್ಥಯಾತ್ರೆಯ ಮಾಡಲೊಲ್ಲೆ
ದೈತ್ಯ ಮರ್ದನ ಬಾಡದಾದಿಕೇಶವ ನಿನ್ನ
ಕೀರ್ತನೆಗೈವರ ಸ್ತುತಿಕನೆನಿಸೆನ್ನ ||7||