ಧರ್ಮವೆಂದೆನಿಪ ಮಾರ್ಗವನು ಬಿಟ್ಟು

Category: ಇತರೆ

Author: ಕನಕದಾಸ

ಧರ್ಮವೆಂದೆನಿಪ ಮಾರ್ಗವನು ಬಿಟ್ಟು
ಕರ್ಮವೆಂದೆನಿಪ ಕಾನನವ ಪೊಕ್ಕು
ದುರ್ಮಾರ್ಗದಲಿ ನಡೆದವಗೆ ಘೋರವ್ಯಾಧಿ
ಕರ್ಮ ಪಾಕದಲಿ ಸಾರುತಿದೆ ಜಗದಿ ||ಪ||

ಹರಿಹರ ವಿಭೇದಗೈದವರಿಗೆ ದಂತಚ್ಯುತವು
ಗುರುದೈವಗಳ ನಿಂದೆ ಗೈದವಗೆ ಉನ್ಮದವು
ಪರಸತಿಯ ಕಾಮಿಸಿದವಗೆ ಪಾಂಡು ರೋಗವು
ಕೆರೆಗಳನು ಒಡೆಸಿದಾತಗೆ ಶೀತಜ್ವರವು
ಹಿರಿಯರನು ಜರೆದವಗೆ ಪೀನಾಶಿ ರೋಗವು
ಧರೆಯನಳಿಸಿದವಗೆ ಸರ್ವಾಂಗ ಪರಿಶ್ವೇತವು
ಪುರ ಅಗ್ರಹಾರ ಕೆಡಿಸಿದವಗೆ ರಾಜರೋಗವೆಂದು
ಅರಿವುದು ಸಕಲ ಜನರು ||1||

ಕಥೆ ಪುರಾಣಗಳ ಹಳಿದವಗೆ ಕಾಸಶ್ವಾಸ
ಮತಭೇದವನು ಮಾಡಿದವಗೆ ಮೂಲವ್ಯಾಧಿ
ಪಿತ ಮಾತೆಯರ ಸಲಹದವಗೆ ಗಂಡಾಮಾಲೆ
ಯತಿಗಳನು ನಿಂದಿಸಿದವಗೆ ಸನ್ನಿಪಾತ- ಪರ
ಸತಿಯರಿಗೆ ಅಳುಪಿದಾತಗೆ ಮೂತ್ರಕೃಚ್ರ
ಪತಿವ್ರತೆಯರ ಪೀಡಿಸಿದವಗೆ ಅತಿಸಾರ
ಮತಿಗೇಡಿ ಮೂರ್ಖನಿಗೆ ಕ್ಷಯರೋಗ- ಇದು
ಕ್ಷಿತಿಯೊಳಗೆ ಸಿದ್ಧಾಂತ ||2||

ಶಿಶುಹತ್ಯೆ ಗೈದವಗೆ ಕುಕ್ಷಿಶೂಲೆ
ಪಶುಗಳನು ಮರ್ದಿಸಿದವಗೆ ಪ್ರಮೇಹವು
ಉಸಿರಲೇಕಿನ್ನು ಸ್ವಾಮಿದ್ರೋಹಿಗೆ ಬಹುಮೂತ್ರ
ಪುಸಿಯನಾಡುವ ಪುರುಷಗೆ ರಕ್ತಕಾಳಿ
ಹಸಿದವರಿಗನ್ನವಿಕ್ಕದವಗೆ ಆಮ್ಲಪಿತ್ತ
ವೃಷಭವನು ಒದ್ದವಗೆ ಬಿಗರುವಾತ
ಮುಸುಕುವುದು ವಿಶ್ವಾಸಘಾತಕಗೆ ನರರೋಗ
ಪುಸಿಯಲ್ಲವಿದು ಕೇಳಿ ಜನರು ||3||

ಕೊಟ್ಟು ಭಾಷೆಯ ತಪ್ಪಿದವಗೆ ಉಪಜಿಹ್ವೆ
ಕೊಟ್ಟು ತುಪ್ಪಿದವಗೆ ಕರಕಂಪನ
ಕೊಟ್ಟರೂ ಕೊಡಲಿಲ್ಲವೆಂಬವಗೆ ಉದರರೋಗ
ಕೊಟ್ಟವರಿಗೆರಡು ಬಗೆವಗೆ ಮೇಹರೋಗ
ಅಷ್ಟಮದದಿಂದ ಮೆರೆವವಗೆ ಬೆರಗಿನ ರೋಗ
ಬಟ್ಟೆಯೊಳು ಮುಳ್ಳು ಹರಡಿದವಗೆ ನೇತ್ರವ್ಯಾಧಿ
ಹುಟ್ಟುವುದು ಕಂಕಣ ಕಂಟಕಗೆ ಕುಷ್ಠರೋಗ
ಕಟ್ಟಿಟ್ಟ ಬುತ್ತಿಯಿದು ||4||

ಹಿಂದೆ ಮಾಡಿದ ಧರ್ಮ ಕರ್ಮ ಬಲ್ಲವರಾರು
ಎಂದು ಮಂದಮತಿಗಳಾಗಿ ಕೆಟ್ಟಳಿಯದಿರಿ
ಹಿಂದಣದೆಲ್ಲವೂ ಬಹದೆಂಬುದಕೆ ಸಾಕ್ಷಿ
ಇಂದು ಕಣ್ಣೆದುರೆ ಜಗದೊಳಗೆ ತೋರುತಿಹುದಿಗೊ
ಚಂದದಲಿ ತಾಯಿ ಮಗುವಿಗೆ ಮೊಲೆಯ ಹಾಲುಣಿಸು
ವಂದದಲಿ ಉಣಿಸಿದಲ್ಲದೆ ಬಿಡದು ಮರೆಯದಿರಿ
ಕಂದರ್ಪ ಪಿತ ಸೊಂಡೆಕೊಪ್ಪದಾದಿಕೇಶವನ
ಮುಂದರಿತು ಭಜಿಸಿ ಮುಕ್ತಿಯ ಪಡೆಯಿರಣ್ಣ ||5||