ನಂಬಬೇಡಿ ಸಿರಿಯ ತನ್ನದೆ
Category: ಶ್ರೀಕೃಷ್ಣ
Author: ಕನಕದಾಸ
ನಂಬಬೇಡಿ ಸಿರಿಯ ತನ್ನದೆ?
ನಂಬಬೇಡಿ ಸಿರಿಯು ತನ್ನ
ದೆಂಬ ನಿಮಿಷದೊಳಗೇನಹುದೊ
ಡಂಬತನವಿದೇಕೆ ಹರಿಯ ಪಾ-
ದಾಂಬುಜವನು ಭಜಿಸಿ ನರರು
ಜಲಧಿಯನ್ನು ಪೀರ್ದ ಮುನಿಯ
ಜನನಿ ಪೆಸರ್ಗೆ ಕಿವಿಯನಾಂತ
ಖಳನ ಬಲವ ನಂಬಲಾತು
ತಲೆಯ ತವಿಸಿದವನ ಸಿರಿಯು
ಗಳಿಗೆಯೊಳಗೆ ಕೀಲು ಸಡಿಲದೆ - ಎಣಿಕೆ ಇಲ್ಲದ
ದಳವು ಯಮನನಗರಿಗೈದದೆ - ದೈವಕೃಪೆಯು
ತೊಲಗಲೊಡನೆ ದಾಳಿವರಿಯದೆ - ಕೇಳಿ ಜನರೆ ||1||
ಅಂಧರಾಯನಾತ್ಮಜರು ಮ-
ದಾಂಧರಾಗಿ ಮಲೆತು ಗೋತ್ರ
ಬಂಧುಗಳನು ಲೆಕ್ಕಿಸದೆ ಇಭ
ಪುರಿಯನಾಳಿದ ನೃಪತಿ ಕೌರ
ವೇಂದ್ರನರಸುತನವು ತೊಡೆಯದೆ - ಸಕಲ ಸೈನ್ಯ
ಬಂಧು ಬಳಗ ರಣದಿ ಮಡಿಯದೆ - ಶೌರಿ ಮುನಿಯ
ಲಂದು ಅವನ ಪದವು ಮುರಿಯದೆ - ಕೇಳಿ ಜನರೆ ||2||
ಧರಣಿಯ ಮುನ್ನಾಳ್ದ ನಹುಷ
ಸಗರರೆನಿಪ ಭೂಪತಿಗಳು ಸಿರಿಯ ಜಯಿಸಲಿಲ್ಲ - ಮಿಕ್ಕ
ನರರ ಪಾಡಿದೇನು ನೀವು
ಬರಿದೆ ಭ್ರಾಂತರಾಗಬೇಡಿರೊ - ಎಂದಿಗಾದರು
ಸ್ಥಿರವಿದಲ್ಲವೆಂದು ತಿಳಿಯಿರೊ - ಶ್ರೀ ಕಾಗಿನೆಲೆಯ
ವರದ ಕೇಶವನನು ಭಜಿಸಿರೊ - ಕೇಳಿ ಜನರೆ ||3||