ನನ್ನವ್ವ ಕಲ್ಲುಬಿಡೆ ಈ ಧ್ರೋತ್ರವ
Category: ಶ್ರೀಕೃಷ್ಣ
Author: ಕನಕದಾಸ
ನನ್ನವ್ವ ಕಲ್ಲುಬಿಡೆ ಈ ಧ್ರೋತ್ರವ
ಚೆನ್ನಾಗಿ ಒಗೆಯಬೇಕು ||ಪ||
ಮುನ್ನ ಮಾಡಿದ ಪಾಪ ಕರ್ಮ ಹೋಗುವ ಹಾಗೆ
ಚೆನ್ನಕೇಶವನ ಪ್ರಸಾದಕ್ಕೊದಗಬೇಕು ||ಅ||
ಉಟ್ಟ ಧೋತ್ರವು ಮಾಸಿತು- ಮನದೊಳಗಿರುವ
ದುಷ್ಟರೈವರುಗಳಿಂದ ಕಷ್ಟದುರಿತಗಳು
ಬಿಟ್ಟು ಹೋಗುವ ಹಾಗೆ ಮುಟ್ಟಿ ಜಲದೊಳು
ಗಟ್ಯಾಗಿ ಒಗೆಯಬೇಕು ||1||
ವೇದವನೋದಬೇಕು ಮನದೊಳಗಿದ್ದ
ಭೇದವ ಕಳೆಯಬೇಕು
ಸಾದರಣೆಯಿಂದ ತಿಳಿದು ನಿಶ್ಚಯವಾಗಿ
ಕ್ರೋಧ ಕರ್ಮಗಳೆಲ್ಲ ಬಿಟ್ಟು ಹೋಗುವ ಹಾಗೆ ||2||
ವೇಲಾಪುರದ ಚೆನ್ನಕೇಶವನ ಸೇವೆಗೆ
ಆಲಸ್ಯವನು ಮಾಡದೆ
ಕೋಲ ಹಿಡಿದು ದ್ವಾರಪಾಲಕನಾಗುವೆ
ನೀಲ ಕುಂತಳೆ ಕಲ್ಲ ಬಿಟ್ಟು ಆ ಕಡೆ ಸಾರೆ ||3||