ನಿನ್ನ ಮಹಿಮೆಗಿಂಥವರು ಹೊಣೆಯೆ
Category: ಶ್ರೀಕೃಷ್ಣ
Author: ಕನಕದಾಸ
ನಿನ್ನ ಮಹಿಮೆಗಿಂಥವರು ಹೊಣೆಯೆ? ||ಪ||
ಚಿನ್ಮಯನೆ ಸಕಲಭುವನಾಧಾರವೆಂಬುದನು
ಬಣ್ಣಿಸಲು ಎನ್ನಳವೆ ಪನ್ನಗೇಂದ್ರನು ಹೊಣೆಯೆ? ||ಅ||
ಹರಿ ನಿನ್ನ ಪಾದವು ಪವಿತ್ರತರವೆಂಬುದಕೆ
ಧರಣಿ ಬಲಿ ವಿಧಿ ಭವಾಹ್ಲಾದ ಹೊಣೆಯೊ
ಹರಿಯು ನೀನೆಂಬುದಕೆ ಸರಿಯು ಕೌಸ್ತುಭ ರತ್ನ
ವರಪೀತ ವಸನ ಕ್ಷೀರಾಬ್ಧಿ ಹೊಣೆಯೊ
ಶರಣರಿಚ್ಛೆಯಲಿ ನೀನಿದ್ದುದಕೆ ದ್ರೌಪದಿಯು
ಕರಿರಾಜ ಶಂಭು ಅಂಬರೀಷ ಹೊಣೆಯೊ
ಕರುಣಿಯು ಉದಾರಿ ನೀನೆಂಬುದಕೆ ಧ್ರುವರಾಯ
ಮರುತಸುತ ಸಾಂದೀಪ ಹೊಣೆಯೊ ಕೃಷ್ಣ ||1||
ಸುಲಭ ಭಕುತರ ಕಾಯ್ವನೆಂಬುದಕ್ಕೆಲೊ ದೇವ
ಫಲುಗುಣನು ವಿದುರ ಅಕ್ರೂರ ಹೊಣೆಯೊ
ಛಲದಂಕನೆಂಬುದಕೆ ಬಾಣನು ಹಿರಣ್ಯಕನು
ಜಲಧಿ ದಶಮುಖ ಕಾರ್ತವೀರ್ಯ ಹೊಣೆಯೊ
ಒಲಿಸಿ ನಿನ್ನನು ತುತಿಸಿ ಮುಕುತಿಯನು ಪಡೆದುದಕೆ
ಸಲೆ ಶ್ರುತಿಯು ಗಿರಿಜೆ ಅಜಮಿಳನು ಹೊಣೆಯೊ
ನಳಿನಾಕ್ಷ ಸತ್ತ್ವಗುಣ ನಿನಗೆ ಉಂಟೆಂಬುದಕೆ
ಸಲಿಲಜೋದ್ಭವ ಭೃಗುಮುನೀಂದ್ರ ಹೊಣೆಯೊ ||2||
ಏಕೋದೇವನದ್ವಿತೀಯ ಬ್ರಹ್ಮ ನೀನೆಂಬುದಕೆ
ಏಕಾರ್ಣವದಲಿದ್ದ ವಟಪತ್ರ ಹೊಣೆಯೊ
ಲೋಕೇಶ ಸರ್ವಂ ವಿಷ್ಣುಮಯಂ ಜಗತ್ತೆಂಬುದಕೆ
ವಾಕೇಶ ವಾತ ಸತ್ತ್ವಗುಣ ಹೊಣೆಯೊ
ಶ್ರೀಕಾಂತ ನೀನಿತ್ತ ವರವು ಸ್ಥಿರವೆಂಬುದಕೆ
ನಾಕೇಶಜಿತನ ಪಿತನನುಜ ಹೊಣೆಯೊ
ಲೋಕದೊಳು ಕಾಗಿನೆಲೆಯಾದಿಕೇಶವ ಭಕ್ತ
ಸಾಕಾರನೆಂಬುದಕೆ ಸಕಲ ಭುವನವೆ ಹೊಣೆಯೊ ||3||