ನೋಡಯ್ಯ ನಿನ್ನ ದಾಸರ ಮೇಲೆ

Category: ಶ್ರೀಕೃಷ್ಣ

Author: ಕನಕದಾಸ

ನೋಡಯ್ಯ ನಿನ್ನ ದಾಸರ ಮೇಲೆ ಕೃಪೆಗಳನು
ಮಾಡಯ್ಯ ಮನ್ಮನಕೆ ಸಂತಸವನು
ತೀಡಯ್ಯ ಭವಭಯದ ಪಾತಕಂಗಳ ದಾನ
ವಾಡ ಗುಡ್ಡದ ತಿರುಮಲೇಶ ಸರ್ವೇಶ ||1||

ಆದಿಯಲಿ ವೇದಗಳ ಕದ್ದುಕೊಂಡೊಯ್ದವನ
ಸಾಧನಂಗೆಯ್ವೆನೆಂದಾಕ್ಷಣದೊಳು
ಪೋದನೆಲ್ಲೆನುತ ಶರನಿಧಿಯೊಳಗೆ ಪೊಕ್ಕ ಮ
ತ್ತಾ ದಿತ್ಯನಂ ಕೊಂದು ತಿಕ್ಕಿಮುಕ್ಕೆ
ನೀ ದಯಾ ಪಾತ್ರನೆಂಬುದ ಕೇಳಿ ನಾನರಿತೆ
ಭೂ-ಧರೆಯ ಸುರರ ನೀ ಸಲುಹಲಾಗ
ಪೋದ ನಿಗಮಂಗಳನು ತಂದು ಸಲೆ ರಕ್ಷಿಸಿದೆ
ಆದಿ ಮತ್ಸ್ಯಾವತಾರ ಶರಣೆಂಬೆನು ||1||

ಅಮರ ದೈತ್ಯರು ಕೂಡಿ ಅಂಬುಧಿಯ ಕಡೆಯಲಿಕೆ
ಕ್ರಮದಿ ಮಂದರಕೆ ಕಟ್ಟಿದ ಶೇಷನ
ತಮತಮಗೆ ಪಿಡಿದೆಳೆಯೆ ತಲ್ಲಣಿಸಿ ಫಣಿರಾಜ
ಸಮ ವಿಷದ ಕರ್ಬೊಗೆಯನುಗುಳುತಿರಲು
ಮಮಕಾರ ತತ್ತ್ವದಲಿ ಮತ್ತೊಂದು ರೂಪಾಗಿ
ಅಮಿತಗುಣ ಮೂರ್ತಿ ನೀನಂದು ಬೇರೆ
ಸುಮತವನು ಬೆನ್ನಲ್ಲಿ ಸಲೆ ಆತು ರಕ್ಷಿಸಿದೆ
ಕಮಠಮೂರುತಿ ನಿನಗೆ ಶರಣೆಂಬೆನು ||2||

ಚಿನ್ನಗಣ್ಣವನೆಂಬನೊರ್ವ ಖಳ ಭೂದೇವಿ
ಕನ್ನಿಕೆಯನೊಯ್ಯುತಿರೆ ಕನಲಿ ಮನದಿ
ಇನ್ನು ಅವನನು ಸೆಣಸಿ ಜಯಿಸುವವರನು ಕಾಣೆ
ನೆನ್ನುತಲಿ ರೋಮಗಳನುಬ್ಬೆತ್ತುತ
ತನ್ನ ಮುಂಗೋರೆಗಳ ಮಸೆದೊಡನೆ ರಕ್ಕಸನ
ಬೆನ್ನಟ್ಟಿ ಬರಸೆಳೆದು ಸದೆದೊರಗಿಸಿ
ಚೆನ್ನಾಗಿ ಧರಣಿಯನು ತಂದು ಸಲೆ ರಕ್ಷಿಸಿದೆ
ಹನ್ನೆರಡು ಪೆಸರವನೆ ಶರಣೆಂಬೆನು ||3||

ಹೇಮಕಶ್ಯಪನೆಂಬ ನಾಮಜನ ಸುತನೊರ್ವ
ನಾ ಮಹಾಘನವೆಂದು ನೆನೆಯುತಿರಲು
ತಾಮಸದ ಖಳ ತನ್ನ ತನುಜನನು ಮಥಿಸುತಿರೆ
ರಾಮನನು ತೋರೆಂದು ಬಾಧಿಸುತಿರೆ
ಧೂಮಜ್ವಾಲೆಗಳೊಡನೆ ಭುಗುಭುಗಿಲು ಛಿಟಿಲೆನುತ
ಆ ಮಹಾ ರಕ್ಕಸನ ಪೊಡೆಯ ಸೀಳಿ
ಪ್ರೇಮದಲಿ ಪ್ರಹ್ಲಾದಗೊಲಿದು ಪಟ್ಟವನಿತ್ತೆ
ಸಾಮಜಾರಿಯ ವದನ ಶರಣೆಂಬೆನು ||4||

ಬಲಿಯಧ್ವರದ ಸಾಲೆಗೊಂದು ವೇಷವನಾಂತು
ಸಲೆ ಬಂದು ಧರೆಯ ಮೂರಡಿಯ ಬೇಡೆ
ಒಲಿದು ಇತ್ತಪೆನೆನಲು ಧಾರೆಯನೆರೆಯಲಸುರ
ಕುಲಗುರುವು ಜುಳಿಗೆಯೊಳು ತಡೆದು ನಿಲಲು
ಸಲಿಲ ವರ್ಜಿತನಯನನನು ಮಾಡಿ ಆಕಾಶ
ನೆಲವೆರಡು ಪಾದವನ್ನಳೆದ ಬಳಿಕ
ತಲೆ ಮೇಲೆ ಇರಿಸೆನಲು ತಳತಳಿಸಿ ಅವನ ಬಾ
ಗಿಲ ಕಾಯ್ದ ವಾಮನನೆ ಶರಣೆಂಬೆನು ||5||
ರೇಣುಕೆಯ ಬಸುರಿನಲಿ ಜನಿಸಿ ಪಿತನಾಜ್ಞೆಯನು
ಮಾಣಬಾರದು ಎಂಬ ಮತವ ಪಿಡಿದು

ಕ್ಷೂಣವಿಲ್ಲದೆ ತಾಯ ಶಿರವರಿದು ತಂದೆಯನು
ಪ್ರಾಣಹತ್ಯವ ಮಾಡಿದರ ಕುಲವನು
ಕ್ಷೋಣಿಗೆರಗಿಸಿ ಕಾರ್ತವೀರ್ಯಾರ್ಜುನನ ಮಡುಹಿ
ಜಾಣತನದಲಿ ಭೂದಾನಗಳ ಭೂಸುರರ
ಕಾಣುತಲೆ ಕರೆಕರೆದು ಕೊಟ್ಟೆಯೈ ನೀನು ಪೂ
ಬಾಣಜನಕನೆ ರಾಮ ಶರಣೆಂಬೆನು ||6||

ಸೀತೆಯನು ಕದ್ದು ಒಯ್ದವನ ಕೊಲ್ಲುವ ಭರದಿ
ಭೂತಳದ ಕಪಿಗಳನು ಕೂಡಿಕೊಂಡು
ಸೇತುವೆಯ ಕಟ್ಟಿ ಶರನಿಧಿ ದಾಟಿ ಬರಲಾಗ
ಭೂತಗಣ ಸಂತತಿಯು ನಡುನಡುಗುತಿರಲು
ಚೇತನದ ರಾವಣೇಶ್ವರ ಕುಂಭಕರ್ಣ ಸ-
ತ್ತ್ವಾತಿಶಯ ರಕ್ಕಸರ ಇರಿದೊರಗಿಸಿ
ಮಾತು ಲಾಲಿಸಿ ವಿಭೀಷಣಗೆ ಪಟ್ಟವನಿತ್ತ
ದಾತ ರಘುನಾಥನೇ ಶರಣೆಂಬೆನು ||7||

ಶಕಟ ಕುಕ್ಕುಟ ಧೇನುಕಾಸುರರ ಪೂತನಿಯ
ಬಕ ವತ್ಸಹಕ ವೃಷಾಸುರರ ಮುಖ್ಯರ
ಪ್ರಕಟದಿಂದರಿದು ಕರಿಯನು ಸೀಳಿ ತನಗೆ ಸಂ
ಮುಖರಾದ ಮಲ್ಲರನು ಇರಿದೊರಗಿಸಿ
ಮುಕುರ ದಂತದ ಹರ್ಮ್ಯದೊಳಗಿಂದ ಕಂಸನ
ಪುಕಪುಕನೆ ತಿವಿದವನನಿರಿದೊರಗಿಸಿ
ಸಕಲವೆಸೆದಿರ್ದ ಮಧುರಾಪುರವ ಉಗ್ರಸೇ
ನಕಗಿತ್ತ ಕೃಷ್ಣನೇ ಶರಣೆಂಬೆನು ||8||

ಮೂರು ಪುರದಬಲೆಯರ ವ್ರತಗಳನು ಕೆಡಿಸಲಿಕೆ
ಬೇರೊಂದು ಅಶ್ವತ್ಥ ವೃಕ್ಷವಾಗಿ
ನಾರಿಯರ ವ್ರತಭಂಗಗೆಯ್ಯಲಾ ದೆಸೆಯಿಂದ
ಊರುತ್ರಯವದು ತಿರುಗುವುದು ನಿಲ್ಲಲಾಗ

ನೀರ ಮಸ್ತಕದಲ್ಲಿ ಧರಿಸಿದನ ಕರವಿಲ್ಲ
ನಾರಿಯೊಳು ನಾರಾಯಣಾಸ್ತ್ರವಾಗಿ
ಘೋರತನವೆತ್ತ ತ್ರಿಪುರದ ಕೀಲ ಪರಿದ ಮದ
ನಾರಿ ಸಖ ಬುದ್ಧನೇ ಶರಣೆಂಬೆನು ||9||

ಮದವೆತ್ತ ರಕ್ಕಸರು ಮಹಿಯೊಳಗೆ ಹೆಚ್ಚಲು
ತ್ರಿದಶರಾದ್ಯಂತ ನಡನಡನೆ ನಡುಗುತಿರಲು
ಬೆದರಬೇಡೆನುತ ಅಭಯವನಿತ್ತು ಮುದದಿಂದವ
ಸುಧೆಯೊಳಗೆ ಬಂದು ಜನಿಸಿ
ಕುದುರೆವಾಹನನಾಗಿ ಕುಂಭಿನಿಯ ಮೇಲೆ ತನ
ಗಿದಿರಾದ ರಾವುತರನಿರಿದೊರಗಿಸಿ
ಮೊದಲ ಭಾಷೆಯನು ದಿವಿಜರಿಗಿತ್ತೆ ಬೇಗದಲಿ
ಚದುರ ಕಲ್ಕ್ಯವತಾರ ಶರಣೆಂಬೆನು ||10||

ಇಂತು ದಶ ಅವತಾರಗಳನೆತ್ತಿ ರಕ್ಕಸರ
ಸಂತತಿಯನೊರಸಿ ಭೂಭಾರವಿಳುಹಿ
ಕಂತುಪಿತ ತಿರುವೆಂಗಳೇಶ ತಿರುಮಲೆಯೊಳಗೆ
ಚಿಂತಿಸುವ ಭಕ್ತರನು ಪಾಲಿಸುತಲಿ
ದಂತಿರಾಜನ ಪೊರೆದು ದಾನವಾಡಿಗೆ ಬಂದು
ನಿಂತಾದಿಕೇಶವನೆ ಶರಣೆಂಬೆನು ||11||