ಪೂರ್ವ ಜನ್ಮದಲಿ ನಾ ಮಾಡಿದ ಕರ್ಮದಿಂ

Category: ಶ್ರೀಕೃಷ್ಣ

Author: ಕನಕದಾಸ

ಪೂರ್ವ ಜನ್ಮದಲಿ ನಾ ಮಾಡಿದ ಕರ್ಮದಿಂ
ಉರ್ವಿಯೊಳು ಜನಿಸಿದೆನೊ ಕೃಷ್ಣ
ಕಾರುಣ್ಯನಿಧಿ ಎನ್ನ ಕಾಯಬೇಕಯ್ಯ
ಹರಿವಾರಿಜನಾಭನೆ ಮುದ್ದುಕೃಷ್ಣ

ಪುಟ್ಟಿದಂದಿನಾರಭ್ಯ ಸುಖವೆಂಬುವುದನರಿಯೆ
ಕಷ್ಟ ಪಟ್ಟೆನು ಕೇಳೋ ಕೃಷ್ಣ
ತೊಟ್ಟಿಲ ಶಿಶು ತಾಯ್ಗೆ ಬಾಯ್ಬಿಟ್ಟ ತೆರದಿ ಕಂ-
ಗೆಟ್ಟು ಶೋಕಿಪೆನೋ ಕೃಷ್ಣ
ಮುಟ್ಟಲಮ್ಮರು ಎನ್ನ ಬಂಧುಗಳು ಕಂಡರೆ
ಅಟ್ಟಿ ಬಡಿವುತಲಿಹರೊ ಕೃಷ್ಣ
ದಟ್ಟ ದಾರಿದ್ರ್ಯವನು ಪರಿಹರಿಸದಿದ್ದರೆ
ಮುಟ್ಟುವುದು ದೂರು ನಿನಗೆ ಕೃಷ್ಣ||1||

ಕಾಶಿಯಾ ವಾಸವನು ಬಯಸಿ ಬಹು ದಿನದಿಂದ
ಘಾಸಿ ಪಟ್ಟೆನು ನಾನು ಕೃಷ್ಣ
ಈ ಶರೀರವನಾಂತು ಹೀನಾಯಗೊಂಡೆನು
ನೀ ಸಲಹಬೇಕಯ್ಯ ಕೃಷ್ಣ
ಹೇಸಿಗೆಯ ಸಂಸಾರದಿ ನೀನಿಂತು
ಮಾಯಾಪಾಶದೊಳು ಬಿಗಿವರೇ ಕೃಷ್ಣ
ಘಾಸಿ ಮಾಡದೆ ಎನ್ನ ಪಾಪವನು ಪರಿಹರಿಸೊ
ಸಾಸಿರನಾಮದ ಮುದ್ದುಕೃಷ್ಣ ||2||

ಲೋಕದೊಳು ಎನ್ನಂಥ ಪಾಪಿಗಳು ಉಂಟೆಂದು
ನೀ ಕೇಳಿ ಬಲ್ಲೆಯಾ ಕೃಷ್ಣ
ಸಾಕೇಳು ಎನಗೊಂದು ಗತಿಯ ತೋರಿಸಿ
ಸದ್ವಿವೇಕಿಯನು ಮಾಡಯ್ಯ ಕೃಷ್ಣ
ರಾಕೇಂದು ಮುಖಿ ದ್ರೌಪದಿಯ ಮಾನವನು ಕಾಯ್ದು
ಆಕೆಗಕ್ಷಯವಿತ್ತೆ ಕೃಷ್ಣ
ನಾ ಕಾಣುವಂದದಲಿ ಉಡುಪಿಯಾದಿಕೇಶವ
ಏಕೆ ದರಶುನವೀಯೆ ಕೃಷ್ಣ ||3||