ಬಂಟನಾಗಿ ಬಾಗಿಲ ಕಾಯ್ವೆ ಹರಿಯ

Category: ಶ್ರೀಕೃಷ್ಣ

Author: ಕನಕದಾಸ

ಬಂಟನಾಗಿ ಬಾಗಿಲ ಕಾಯ್ವೆ ಹರಿಯ ||ಪ||

ವೈಕುಂಠದ ಸೊಂಪಿನ ದಾಸರ ಮನೆಯ ||ಅ||

ಹೊರಸುತ್ತು ಪ್ರಾಕಾರ ನಾ ಸುತ್ತಿ ಬರುವೆ
ಬರುವ ಹೋಗುವರ ವಿಚಾರಿಸುತಿರುವೆ
ಕರದಿ ಕಂಬಿಯ ಪೊತ್ತು ಅಲ್ಲಿ ನಿಂದಿರುವೆ ಶ್ರೀ
ಹರಿಯ ಸಮ್ಮುಖದ ಓಲಗದೊಳಿರುವೆ ||1||

ತೊತ್ತು ತೊಂಡನಾಗಿ ಬಾಗಿಲ ಕಾಯ್ವೆ
ಚಿತ್ರದ ಚಾವಡಿ ರಜವನು ಬಳಿವೆ
ಮುತ್ತಿನ ರಂಗವಲ್ಲಿಯನಿಟ್ಟು ಬರೆವೆ
ರತ್ನಗಂಬಳಿ ಹೊತ್ತು ಹಾಸುವೆನು ||2||

ವೇಳೆವೇಳೆಗೆ ನಾನೂಳಿಗವ ಮಾಡುವೆ
ಆಲವಟ್ಟಿಗೆ ಚಾಮರವ ಬೀಸುವೆ
ತಾಳದಂಡಿಗೆ ಭೃಂಗಿ ಮೇಳಗಳ ಕೂಡಿ ಶ್ರೀ
ಲೋಲನ ಕೊಂಡಾಡಿ ಪಾಡುವೆನು ||3||

ಎಂಜಲ ಹರಿವಾಣಂಗಳ ಬೆಳಗುವೆ
ಕಂಜನಾಭನ ಪಾದಕಮಲವ ತೊಳೆವೆ
ರಂಜಿಪ ಕುಸುಮದ ಮಾಲೆ ತಂದಿಡುವೆ
ಸಂಜೆಗೆ ಪಂಜಿನ ದಾಸನಾಗಿರುವೆ ||4||

ಮೀಸಲೂಳಿಗವ ನಾ ಮಾಡಿಕೊಂಡಿರುವೆ
ಶೇಷ ಪ್ರಸಾದವ ಉಂಡುಕೊಂಡಿರುವೆ
ಶೇಷಗಿರಿ ಕಾಗಿನೆಲೆಯಾದಿಕೇಶವನ
ದಾಸರ ದಾಸರ ದಾಸರ ಮನೆಯ ||5||