ಬಂದೆವಯ್ಯ ಗೋವಿಂದಶೆಟ್ಟಿ
Category: ಶ್ರೀಕೃಷ್ಣ
Author: ಕನಕದಾಸ
ಬಂದೆವಯ್ಯ ಗೋವಿಂದಶೆಟ್ಟಿ- ನಿಮ್ಮ
ಹರಿವಾಣ ತೀರ್ಥಪ್ರಸಾದ ಉಂಟೆನಲಾಗಿ ||ಪ||
ಅಪ್ಪವು ಅತಿರಸ ತುಪ್ಪವು ಚಿನಿಪಾಲು
ಒಪ್ಪುವ ಸಕ್ಕರೆ ಯಾಲಕ್ಕಿಯು
ಅಪರೂಪವಾದ ಕಜ್ಜಾಯಗಳನೆಲ್ಲ
ಛಪ್ಪನ್ನ ದೇಶಕ್ಕೆ ಮಾರುವ ಶೆಟ್ಟಿ ||1||
ಒಡೆದ ಮಡಕೆ ತಂದು ಇಡಿದು ನಾಮವ ಮಾಡಿ
ಕೊಡುವೆ ನೀ ಕಾಸಿಗೆ ಒಂದೊಂದನು
ಒಡಲು ತುಂಬಿ ಮಿಕ್ಕ ಅನ್ನವ ಮಾರಿಸಿ
ಒಡವೆಯ ಗಳಿಸುವ ಕಡುಲೋಭಿ ಶೆಟ್ಟಿ ||2||
ಶೇಷಗಿರಿಯಲ್ಲಿ ವಾಸ ಮಾಡಿಕೊಂಡು
ದೇಶದೇಶಕ್ಕೆ ಹೆಸರಾದ ಶೆಟ್ಟಿ
ಕಾಸುಕಾಸಿಗೆ ಬಡ್ಡಿ ಗಳಿಸಿಕೊಂಬ ಆದಿ
ಕೇಶವ ನಾರಾಯಣ ತಿಮ್ಮ ಶೆಟ್ಟಿ ||3||