ಬೇಕೆಂದರೆ ಬಾರದು ಒಲ್ಲೆನೆಂದರೆ ಹೋಗದು
Category: ಶ್ರೀಕೃಷ್ಣ
Author: ಕನಕದಾಸ
ಬೇಕೆಂದರೆ ಬಾರದು ಒಲ್ಲೆನೆಂದರೆ ಹೋಗದು
ಏಕಂಜುವಿ, ಶ್ರೀಹರಿ ಕರುಣಿಸದೆ ಒಂದೂ ಆಗದು ||ಪ||
ಸುಖವಾದಡೆ ಕಾಣುತ ಮುಖ ಕಮಲವು
ವಿಕಸಿತವಾಹುದು ಶ್ರೀಹರಿ ಕರುಣದಿ
ದುಃಖವಾದಡೆ ದುಸ್ಥಿತಿಯಲಿರಲು ಅಂ-
ಬಕದಲಿ ಜಲ ಪೋಗುವುದೇಕೊ?
ಸುಖದುಃಖ ದಿವ ರಾತ್ರಿಯ ತೆರವದರಿಂದಲಿ ನರರಂ
ಗಕೆ ಬಾಹುದು, ರಕ್ಷಣೆ ಮಾಡುವ ಕಾಶಿಪೀತಾಂಬರ
ಮಕರ ಕುಂಡಲಾಭರಣನ ನೆನೆ ಮನವೆ ||1||
ಸಿರಿ ಬಂದರೆ ಸಿರಿಗಾನಂದವ ಮಾಡು
ವಿರೇತಕೆ ಮನ ನಿರ್ಮಳ ಧ್ವನಿಯಲಿ
ದರಿದ್ರವು ಬಂದರೆ ಧಾತುಗೆಟ್ಟು ದೇಹಾತುರ
ಹೊಂದುವಿರೇತಕೆ ದುಗುಡದಿ
ಸಿರಿ ದಾರಿದ್ರ್ಯವು ಸುರತತಿಗಡರುವ
ತೆರನೆಂದರಿದದರಿಂದಲಿ ಮಾನ
ವರಿಗೆ ಬಾಹುದು, ಪರಿಹರಿಸುವ ಪರಮಾತ್ಮನೆನಿಪ
ಮುರವೈರಿಯ ಬಿಡದಿರು ಎಲೆ ಮನವೆ ||2||
ಜನನವಾದರೆ ಹಾಡಿ ಹರಸಲೇತಕೆ
ಅನುಗತಿಯನು ಹೇಳಿದರಳಲೇಕೆ
ಜನನಮರಣವದೆಲ್ಲರಿಗೆ ಗತಿಬಾಹುದು ಏಕೆ
ಜನನ ಮರಣವನೊಂದು ಹೊರಗೆ ಮಾಡಿ ಪರ
ಜನದೊಳಗಿರಿಸುವ ಸುಜನೇಶ ಮುನೀಶನೆಂ
ದೆನಿಸುವ ಕಾಗಿನೆಲೆಯಾದಿಕೇಶವರಾಯನ
ಅನುಶ್ರುತಿಯನು ಬಿಡದಿರು ಎಲೆ ಮನವೆ ||3||